ಒಟ್ಟು 1,795 ಕೋಟಿ ರೂ. ವೆಚ್ಚ ಮಾಡಲಾಗಿದೆ
ಬೆಳಗಾವಿ:ಕೃಷ್ಣಾ ಭಾಗ್ಯ ಜಲ ನಿಗಮದಡಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳ 6 ನೀರಾವರಿ ಯೋಜನೆಗಳಲ್ಲಿ ಮೂರು, ಕರ್ನಾಟಕ ನೀರಾವರಿ ನಿಗಮದಡಿ 11 ಯೋಜನೆಗಳು ಪೂರ್ಣಗೊಂಡಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್ನಲ್ಲಿಂದು ತಿಳಿಸಿದ್ದಾರೆ.
ಏತ ನೀರಾವರಿ ಯೋಜನೆ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ
ಪ್ರಶ್ನೋತ್ತರ ವೇಳೆಯಲ್ಲಿ ತಳವಾರ ಸಾಬಣ್ಣ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಎರಡೂ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಗೆಜೆಟ್ ತಯಾರಾಗಬೇಕು, ಈ ವೇಳೆ ಆಂಧ್ರ ಮತ್ತು ತೆಲಂಗಾಣ ರಾಜ್ಯದವರು ಗೆಜೆಟ್ ತಯಾರಿಸದಂತೆ ನ್ಯಾಯಲಯದ ಮೊರೆ ಹೋದ ಕಾರಣ ಕೆಲಸ ಮುಂದುವರೆದಿಲ್ಲ, ಬೂದಿಹಾಳ-ವೀರಾಪುರ ಏತ ನೀರಾವರಿ ಯೋಜನೆ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ, ಬೀದರ್ ಮತ್ತು ಯಾದಗಿರಿ ವ್ಯಾಪ್ತಿಯ ಕೃಷ್ಣ ಜಲಭಾಗ್ಯ ನಿಗಮದ ಯೋಜನೆಗಳಿಗೆ 1,306 ಕೋಟಿ ಹಣವನ್ನು ಕಳೆದ 5 ವರ್ಷದಲ್ಲಿ ವೆಚ್ಚ ಮಾಡಲಾಗಿದೆ. ಕರ್ನಾಟಕ ನೀರಾವರಿ ನಿಗಮದ 11 ಯೋಜನೆಗಳಿಗೆ ಕಳೆದ 5 ವರ್ಷದಲ್ಲಿ 489 ಕೋಟಿ ಹಣ ವೆಚ್ಚ ಮಾಡಲಾಗಿದೆ.
ಹೂಳು, ಅವಶ್ಯಕ ದುರಸ್ತಿ ಸೇರಿದಂತೆ ನೀರು ಹರಿಸಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಈ ಎಲ್ಲಾ ಟೆಂಡರ್ಗಳನ್ನು ಇ-ಪ್ರೊಕ್ಯೂರ್ಮೆಂಟ್ ಮೂಲಕವೇ ಪಾರದರ್ಶಕವಾಗಿ ಮಾಡಲಾಗಿದೆ, ಗುಣಮಟ್ಟ ಖಾತರಿಗೂ ಆದ್ಯತೆ ನೀಡಲಾಗಿದೆ, ಯಾವುದೇ ಗುತ್ತಿಗೆದಾರರಿಗೆ ನೇರವಾಗಿ ಕಾಮಗಾರಿಗಳನ್ನು ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
