ಬೆಂಗಳೂರು: ಹಿಂದೂಗಳು ಹಗಲಿರುಳು ಹಿಂಸಾಚಾರ ಮತ್ತು ದ್ವೇಷದಲ್ಲಿ ನಿರತರಾಗಿದ್ದಾರೆ ಎನ್ನುವ ಮೂಲಕ ಹಿಂದೂಗಳ ತೇಜೋವಧೆ ಮಾಡಿರುವ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಹಿಂದೂಗಳ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಇಂದಿಲ್ಲಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ರಾಹುಲ್ ಗಾಂಧಿ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನಾಗಿ ಮಾಡಿದ ಚೊಚ್ಚಲ ಭಾಷಣ ಸುಳ್ಳು, ನಿರಾಶೆ, ಆಧಾರರಹಿತ ಆರೋಪಗಳಿಂದ ಕೂಡಿದೆ ಎಂದರು.
ಸದನದಲ್ಲಿ ರಾಹುಲ್ ಗಾಂಧಿ ನಡವಳಿಕೆ ಸಂಸತ್ತಿನ ನಿಯಮಗಳಿಗೆ ಧಕ್ಕೆ ತರುವಂತಿದೆ, ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಸುಳ್ಳನ್ನೇ ಹತ್ತಾರು ಬಾರಿ ಹೇಳಿಕೊಂಡು ದೇಶಾದ್ಯಂತ ಪ್ರವಾಸ ಮಾಡಿದ್ದರು, ವಿರೋಧಪಕ್ಷದ ನಾಯಕನಾಗಿ ಹಳೇ ಚಾಳಿಯನ್ನೇ ಮುಂದುವರೆಸಿದ್ದಾರೆ.
ಅಸಂಖ್ಯಾತ ಹಿಂದೂಗಳಿಗೆ ಅವಮಾನ
ತಮ್ಮ ಸ್ಥಾನದ ಘನತೆ ಎತ್ತಿ ಹಿಡಿಯುವ ಬದಲಾಗಿ ಆ ಸ್ಥಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ, ದೇಶದ ಅಸಂಖ್ಯಾತ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಅಗ್ನಿವೀರ್, ರೈತರ ಬಗ್ಗೆ, ಅಯೋಧ್ಯೆ ವಿಚಾರ ಮಾತ್ರವಲ್ಲದೆ, ಮೈಕ್ರೋಫೋನ್ ವಿಚಾರಗಳಲ್ಲಿ ಸುಳ್ಳು ಹೇಳಿಕೆ ನೀಡಿದ್ದಲ್ಲದೆ, ಹಿಂದೂಗಳ ತೇಜೋವಧೆ ಮಾಡಿದ್ದು ಅಕ್ಷಮ್ಯ ಅಪರಾಧ.
ಲೋಕಸಭಾ ಚುನಾವಣೆಯಲ್ಲಿ 99 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿಲ್ಲ, 100ರ ಗಡಿ ದಾಟಲು ಆಗದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮನಸ್ಸಿಗೆಬಂದಂತೆ ಮಾತನಾಡಲು ಸದನ ಬಳಕೆ ಮಾಡಿದ್ದು ಖಂಡನೀಯ.
ಸಿಖ್ ಹತ್ಯಾಕಾಂಡಕ್ಕೆ ಉತ್ತರಿಸಬೇಕು
ಹಿಂದೂಗಳ ತೇಜೋವಧೆ ಮಾಡಲು ಸದನ ಬಳಸಿದ ರಾಹುಲ್ ಗಾಂಧಿ, 1984ರ ಸಿಖ್ ಸಮುದಾಯದವರ ಹತ್ಯಾಕಾಂಡಕ್ಕೆ ಕಾರಣಕರ್ತರು ಕಾಂಗ್ರೆಸ್ ಮುಖಂಡರಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಬೇಕು.
ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಮುಗ್ಧ ಜನರ ಮೇಲೆ ದಬ್ಬಾಳಿಕೆ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂಬುದನ್ನೂ ಗಮದಲ್ಲಿಟ್ಟು ಉತ್ತರ ಕೊಡಲಿ, ದೇಶದ ಉದ್ಧಾರ ಮಾಡುವುದಾಗಿ ಜನರ ಮುಂದೆ ಅನೇಕ ವಿಚಾರಗಳನ್ನು ಇಟ್ಟಿದ್ದ ಕಾಂಗ್ರೆಸ್ ಹಿಂದೂಗಳ ತೇಜೋವಧೆ ಮಾಡುತ್ತಿರುವುದು ಕ್ಷಮಿಸಲು ಸಾಧ್ಯವಿಲ್ಲ ಎಂದರು.
2010ರಲ್ಲಿ ಅಂದಿನ ಗೃಹ ಸಚಿವ ಚಿದಂಬರಂ ಸಹ ಹಿಂದೂಗಳು ಭಯೋತ್ಪಾದಕರು ಎಂಬ ಉದ್ಧಟತನದ ಹೇಳಿಕೆ ನೀಡಿದ್ದರು, ಸ್ವತಃ ರಾಹುಲ್ ಗಾಂಧಿ ೨೦೨೧ರಲ್ಲಿ ಹಿಂದೂತ್ವ ಬೆಂಬಲಿಸುವವರನ್ನು ದೇಶದಿಂದ ಹೊಡೆದೋಡಿಸಿ ಎಂದಿದ್ದರು.
ಕರ್ನಾಟಕದಲ್ಲೂ ಹಿಂದೂಗಳ ತೇಜೋವಧೆ
ಕರ್ನಾಟಕದಲ್ಲೂ ಇದೇ ಮಾದರಿಯಲ್ಲಿ ಹಿಂದೂಗಳ ತೇಜೋವಧೆ ಮಾಡಿದ್ದರು, ಸಚಿವ ಸತೀಶ್ ಜಾರಕಿಹೊಳಿ ಹಿಂದೂ ಪದವನ್ನು ಅವಹೇಳನಕಾರಿಯಾಗಿ ಬಳಸಿದ್ದರು, ಜಾರ್ಜ್ ಪೊನ್ನಯ್ಯ ಭಾರತದ ಭೂಮಿ ಮುಟ್ಟುವುದನ್ನು ತಪ್ಪಿಸಲು ಶೂಗಳನ್ನು ಧರಿಸುವುದಾಗಿ ಉದ್ಧಟತನದ ಮಾತನಾಡಿದ್ದರು.
ಅಗ್ನಿವೀರರು ಹುತಾತ್ಮರಾದರೆ ಕೇಂದ್ರವು ಪರಿಹಾರ ಕೊಡುವುದಿಲ್ಲ ಎಂಬ ಸುಳ್ಳು ಹೇಳಿದ್ದಾರೆ, ಅಗ್ನಿವೀರರು ಯುದ್ಧದಲ್ಲಿ ಪ್ರಾಣ ಕಳೆದುಕೊಂಡಾಗ ಒಂದು ಕೋಟಿ ರೂ. ಪರಿಹಾರ ಕೊಡುವುದಾಗಿ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಸಂದರ್ಭದಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡ ಜನರಿಗೆ ಪರಿಹಾರ ಕೊಟ್ಟಿಲ್ಲ ಎಂಬ ಸುಳ್ಳು ಮಾಹಿತಿ ನೀಡಿದ್ದಾರೆ, ಸತ್ಯ ಸಂಗತಿಯೆಂದರೆ, ಉತ್ತರ ಪ್ರದೇಶದಲ್ಲಿನ ಬಿಜೆಪಿ ಸರ್ಕಾರ 4,215 ಅಂಗಡಿ ಮಾಲೀಕರಿಗೆ 1,253 ಕೋಟಿ ರೂ.ವರೆಗೆ ಪರಿಹಾರ ಮೊತ್ತ ನೀಡಿದೆ ಎಂದರು.
ಆರೋಪಕ್ಕೆ ಪುರಾವೆ ಇಲ್ಲ
ಪ್ರಧಾನಿ ಮೋದಿ ಸರ್ಕಾರ ದೇಶದ ರೈತರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ ಎಂದು ಆರೋಪಿಸಿದಾಗ, ಆಡಳಿತ ಪಕ್ಷ, ಈ ಆರೋಪಕ್ಕೆ ಪುರಾವೆ ಕೇಳಿದಾಗ ರಾಹುಲ್ ಗಾಂಧಿ ಬಾಯಿ ಮುಚ್ಚಿಕೊಂಡು ಕೂತಿದ್ದರು.
ಸ್ಪೀಕರ್ ಹುದ್ದೆಗೂ ಅವಮಾನ ಮಾಡಿದ್ದಾರೆ, ರಾಹುಲ್ ಗಾಂಧಿಯವರ ಬೇಜವಾಬ್ದಾರಿ ನಡವಳಿಕೆ ಅಕ್ಷಮ್ಯ ಅಪರಾಧ, ತಕ್ಷಣ ಅವರು ದೇಶದ ಜನರ ಕ್ಷಮೆ ಕೇಳಬೇಕು, ಪ್ರಬುದ್ಧತೆಯಿಂದ ನಡೆದುಕೊಳ್ಳುವಂತೆ ಹಿರಿಯ ಕಾಂಗ್ರೆಸ್ಸಿಗರು ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.
