ಬೆಂಗಳೂರು:ರಾಜ್ಯದ ಕಾವೇರಿ ಜಲಾನಯನ ಭಾಗದಿಂದ ತಮಿಳುನಾಡಿಗೆ ಪ್ರತಿನಿತ್ಯ ಒಂದು ಟಿಎಂಸಿ (ಸರಾಸರಿ 11,500 ಕ್ಯೂಸಕ್ಸ್) ನೀರನ್ನು ಈ ತಿಂಗಳಾಂತ್ಯದವರೆಗೂ ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ (ಸಿಡಬ್ಲ್ಯೂಆರ್ಸಿ) ಆದೇಶಿಸಿದೆ.
ಜುಲೈ 12ರಿಂದ 31 ರವರೆಗೂ ಬಿಳಿಗುಂಡ್ಲುವಿನಲ್ಲಿ ಸಂಚಿತ ನೀರಿನ ಹರಿವಿನ ಪ್ರಮಾಣವನ್ನು ಖಚಿತಪಡಿಸಿಕೊಳ್ಳುವಂತೆ ಸಮಿತಿ ಆದೇಶಿಸಿದೆ.
ಸಿಡಬ್ಲ್ಯೂಆರ್ಸಿ ಆದೇಶ
ಜಲಾನಯನ ವ್ಯಾಪ್ತಿಗೆ ಬರುವ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ವಾದ-ಪ್ರತಿವಾದ ಆಲಿಸಿದ ನಂತರ ಸಿಡಬ್ಲ್ಯೂಆರ್ಸಿ ಈ ಆದೇಶ ಮಾಡಿದೆ.
ದೆಹಲಿಯಲ್ಲಿಂದು ಜುರಗಿದ ಸಿಡಬ್ಲ್ಯೂಆರ್ಸಿಯ 99ನೇ ಸಭೆಯ ಚರ್ಚೆಯಲ್ಲಿ ರಾಜ್ಯ ಸರ್ಕಾರ, ಜೂನ್ 1ರಿಂದ ಜುಲೈ 9ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವು 41.651 ಟಿ.ಎಂ.ಸಿ ಇದ್ದು, ರಾಜ್ಯದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು ಸರಾಸರಿ 28.71 ಟಿ.ಎಂ.ಸಿ ಇದೆ ಎಂದು ವಾದಿಸಿತು.
ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿನ ಸಂಗ್ರಹಣೆಯು 58.668 ಟಿಎಂಸಿ ಇದ್ದು, ಮೆಟ್ಟೂರಿನಿಂದ 4.905 ಟಿಎಂಸಿ ಮತ್ತು ಭವಾನಿಯಿಂದ 0.618 ಟಿಎಂಸಿ (ಒಟ್ಟು 5.542 ಟಿಎಂಸಿ) ನದಿಗೆ ಬಿಡುಗಡೆ ಮಾಡಿರುವುದಲ್ಲದೆ, ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.705 ಟಿಎಂಸಿ ಇದೆ.
ಕರ್ನಾಟಕ ಅಭಿಪ್ರಾಯ
ನೀರು ಬಿಡುಗಡೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಿತಿಯು ಜುಲೈ 25, 2024 ರವರೆಗೆ ಕಾಯುವುದು ಸೂಕ್ತವೆಂದು ಕರ್ನಾಟಕ ಅಭಿಪ್ರಾಯ ವ್ಯಕ್ತಪಡಿಸಿತು.
ತದನಂತರ, ರಾಜ್ಯದ ಜಲಾಶಯಗಳಿಂದ ನೀರು ಬಿಡುವ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಲು ನೀರು ನಿರ್ವಹಣಾ ಸಮಿತಿ ವಸ್ತುಸ್ಥಿತಿಯನ್ನು ಸಮಂಜಸವಾಗಿ ಪರಿಗಣಿಸಬಹುದು ಎಂದು ಹೇಳಿತು.
ಅದರೆ, ತಮಿಳುನಾಡು, ಹಿಂದಿನ ಜಲ ವರ್ಷದಲ್ಲಿ, ಫೆಬ್ರವರಿ 2024 ರಿಂದ ಮೇ 2024 ರ ಅವಧಿಗೆ ಕರ್ನಾಟಕವು ಪರಿಸರದ ಹರಿವನ್ನು ಬಿಡುಗಡೆ ಮಾಡಿರುವುದಿಲ್ಲ.
ಪ್ರಸಕ್ತ ಜಲ ವರ್ಷದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದ್ದು ಮತ್ತು ಕರ್ನಾಟಕವು ಸಾಮಾನ್ಯ ಒಳಹರಿವನ್ನು ಪಡೆದಿದೆ. ಆದ್ದರಿಂದ ಗೌರವಾನ್ವಿತ ಸುಪ್ರೀಂಕೋರ್ಟ್ ಮಾರ್ಪಡಿಸಿದಂತೆ ಕಾವೇರಿ ನೀರು ಇತ್ಯರ್ಥ ನ್ಯಾಯಮಂಡಳಿ (ಸಿಡಬ್ಲ್ಯೂಡಿಟಿ) ಆದೇಶದಂತೆ ಕರ್ನಾಟಕವು ಬಿಳಿಗುಂಡ್ಲುವಿನಲ್ಲಿ ನಿಗದಿತ ಹರಿವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿತ್ತು.