ಬೆಂಗಳೂರು:ಮುಖ್ಯಮಂತ್ರಿ ಅಧಿಕಾರ ಹಸ್ತಾಂತರ ವಿಚಾರವಾಗಿ ಯಾರೊಬ್ಬರು ಚರ್ಚೆ ಮಾಡಬಾರದು, ಒಪ್ಪಂದ ಸೂತ್ರದ ಬಗ್ಗೆ ಯಾರೂ ಮಾತನಾಡುವ ಅವಶ್ಯಕತೆ ಹಾಗೂ ಸಂದರ್ಭ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಯಾವುದೇ ಸೂತ್ರ ಇಲ್ಲ, ಮುಖ್ಯಮಂತ್ರಿಗಳಿಗೆ ಕೆಲವು ಜವಾಬ್ದಾರಿ, ನನಗೆ ಕೆಲವು ಜವಾಬ್ದಾರಿ ವಹಿಸಲಾಗಿದೆ, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇ ಅಂತಿಮ ಎಂಬುದಾಗಿ ನಾನು ಹೇಳಿದ್ದೇನೆ, ನಾವು ಮತ್ತು ಸಚಿವ ಮುನಿಯಪ್ಪ ರಾಜಕೀಯವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಕೋವಿಡ್ ಅಕ್ರಮ ಪರಿಶೀಲನೆ
ಕೋವಿಡ್ ಅವಧಿಯ ಅಕ್ರಮ ಕುರಿತ ಮೈಕಲ್ ಕುನ್ಹಾ ವರದಿ ಸ್ವೀಕರಿಸಿದ್ದು, ಪರಿಶೀಲನೆ ಮಾಡುತ್ತಿದ್ದೇವೆ, ವರದಿ ಶಿಫಾರಸ್ಸಿನಂತೆ ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ.
ಇಲಾಖಾ ಅಧಿಕಾರಿಗಳ ವಿರುದ್ಧವೂ ವಿಚಾರಣೆ ನಡೆಯಲಿದೆ, ಕೆಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ, ಎಷ್ಟು ಪ್ರಕರಣಗಳು ದಾಖಲಾಗುತ್ತವೆಯೋ ತಿಳಿಯದು.
ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣದಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂಬ ವರದಿಯನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ, ಮತ್ತೆ ಪ್ರಕರಣದ ತನಿಖೆಯಾಗಬೇಕು, ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅಲೋಕಿಸಿದ್ದೆವು, 36 ಮಂದಿ ಮೃತಪಟ್ಟಿದ್ದು, ಅಂದಿನ ಸಚಿವರು ಮೂರು ಮಂದಿ ಮೃತಪಟ್ಟಿರುವುದಾಗಿ ತಿಳಿಸಿದ್ದರು, ಮೃತಪಟ್ಟ 36 ಮಂದಿಯ ಮನೆಗೆ ಭೇಟಿ ನೀಡಿದ್ದೇನೆ.
ಆರ್ಟಿಪಿಸಿಆರ್ ಪರೀಕ್ಷೆ
ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 84 ಲಕ್ಷ ಆರ್ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆಯೆಂದು 502 ಕೋಟಿ ರೂ. ಬಿಲ್ ಮಾಡಲಾಗಿದೆ, 400 ಕೋಟಿ ರೂ. ಪಾವತಿಯೂ ಆಗಿದೆ, 84 ಲಕ್ಷ ಪರೀಕ್ಷೆ ಎಂದರೆ ಬೆಂಗಳೂರಿನಲ್ಲಿನ ಪ್ರತಿ ಮನೆಗೆ ಇಬ್ಬರ ಪರೀಕ್ಷೆ ಆಗಿರಬೇಕಲ್ಲವೇ ಎಂದರು.
ಕಿದ್ವಾಯಿ ಸಂಸ್ಥೆಯೊಂದರಲ್ಲೇ 24 ಲಕ್ಷ ಪರೀಕ್ಷೆ ಮಾಡಲಾಗಿದೆ ಎಂದಿದ್ದಾರೆ, ತಾಂತ್ರಿಕ ಸಾಮರ್ಥ್ಯ, ಐಸಿಎಂಆರ್ ಅನುಮತಿ ಇಲ್ಲದೆ ಪರೀಕ್ಷೆ ನಡೆಸಲಾಗಿದೆ, 146 ಕೋಟಿ ರೂ. ಬಿಲ್ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, 24 ಲಕ್ಷ ಜನರಿಗೆ ಒಂದೇ ಕಡೆ ಪರೀಕ್ಷೆ ನಡೆಸಿದ ಬಗ್ಗೆ ಸಂಶಯಗಳಿವೆ.
ಕಾನೂನು ಚೌಕಟ್ಟು ಮೀರಿ ಏನೆಲ್ಲಾ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದು, ಪರಿಶೀಲನೆ ಮಾಡುತ್ತೇವೆ, ಮಾರ್ಗದರ್ಶನ ನೀಡಲು ನಿವೃತ್ತ ಅಧಿಕಾರಿಗಳ ಮಟ್ಟದ ಸಮಿತಿ ರಚಿಸಲಾಗುವುದು, ಪ್ರಕರಣದಲ್ಲಿ ಯಾರಿಗೂ ಅನಗತ್ಯ ತೊಂದರೆ ಮಾಡಬಾರದು ಎಂಬ ಕಾರಣಕ್ಕೆ ಸಮಿತಿ ರಚಿಸಿದ್ದೇವೆ.
ಕ್ರಿಮಿನಲ್ ಪ್ರಕರಣ
ಮಾಜಿ ಆರೋಗ್ಯ ಸಚಿವರ ಹೆಸರನ್ನೇ ನಾನು ಪ್ರಸ್ತಾಪಿಸಿಲ್ಲ, ವರದಿಯ ಪ್ರಮುಖ ಅಂಶಗಳನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪ ಮಾಡಿದ್ದೇನೆ, ಅಕ್ರಮದಲ್ಲಿ ಭಾಗಿಯಾಗಿರುವ ಆಯುಕ್ತರು, ಅಧಿಕಾರಿಗಳು, ರಾಜಕಾರಣಿಗಳು, ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳ ವಿರುದ್ಧ ಸೆಕ್ಷನ್ 71 ಹಾಗೂ ಸೆಕ್ಷನ್ 11ರಡಿ ಸಾರ್ವಜನಿಕ ಸೇವಾವಧಿಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ನ್ಯಾಯಮೂರ್ತಿ ಕುನ್ಹಾ ವರದಿ ಆಧರಿಸಿ ಎಸ್ಐಟಿ ರಚನೆಯಾಗಿದ್ದು, ಪ್ರಕ್ರಿಯೆ ಪ್ರಗತಿಯಲ್ಲಿದೆ, ಎಲ್ಲ ಅಂತಿಮವಾದ ನಂತರ ಮಾಹಿತಿ ನೀಡುತ್ತೇವೆ, ಈ ವಿಚಾರವಾಗಿ ಬಿಜೆಪಿಯವರಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ, ಸಮಿತಿ ಶಿಫಾರಸ್ಸು ಪರಿಶೀಲಿಸುತ್ತಿದ್ದು, ಅಧಿಕಾರಿಗಳಿಗೆ ವಿಚಾರಣೆ ನಡೆಸುವ ಸಂಪೂರ್ಣ ಅಧಿಕಾರ ನೀಡಿದ್ದೇವೆ ಎಂದರು.
ಪ್ರಕರಣ ಪರಿಶೀಲನೆಗೆ ಸಮಯಾವಕಾಶ ಬೇಕು, ಕಾನೂನು ತನ್ನ ಕಾರ್ಯ ನಿರ್ವಹಿಸಲಿದೆ, ಅಧಿಕಾರಿಗಳು ತಮ್ಮ ಕೆಲಸ ಮಾಡಿ ಕ್ರಮ ಕೈಗೊಳ್ಳಲಿದ್ದು ನಾವು ಹಸ್ತಕ್ಷೇಪ ಮಾಡುವುದಿಲ್ಲ.
ಹೆಣದ ಮೇಲೆ ಹಣ
ಬಿಜೆಪಿ ಸರ್ಕಾರ ಹೆಣದ ಮೇಲೆ ಹಣ ಮಾಡಿದೆ ಎಂಬುದಾಗಿ ನಾವೇ ವಿಧಾನಸಭೆಯಲ್ಲಿ ಭಾಷಣ ಮಾಡಿದ್ದೇವೆ, ಜನ ಇವುಗಳಿಂದ ರೋಸಿದ್ದಾರೆ, ಕೋವಿಡ್ ಹಣ ತಿಂದವರನ್ನು ಬಿಡುವುದಿಲ್ಲ.
ಪಿಪಿಇ ಕಿಟ್ ಹಾಗೂ ಯಂತ್ರೋಪಕರಣ ಖರೀದಿ ಹಗರಣದ ಪ್ರಕ್ರಿಯೆ ನಡೆಯುತ್ತಿದೆ, ಕೆಲವರಿಗೆ ನೋಟೀಸ್ ನೀಡಲಾಗಿದೆ, ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದರು.