ನವದೆಹಲಿ:ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವಹೇಳನ ಆರೋಪ ಕುರಿತು ಸಿ.ಟಿ.ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವುದೇ ನಿರ್ಧಾರಕ್ಕೆ ಬರುವುದು ತಪ್ಪು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಪೊಲೀಸ್ ದುರ್ಬಳಕೆ ಹೆಚ್ಚಾಗುತ್ತಿದೆ, ಪೊಲೀಸರ ನಡವಳಿಕೆ ಸಮರ್ಥಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ, ಹಿಂದೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರಿಗೆ ರಾಜ್ಯ ಸರ್ಕಾರ ಯಾವುದೇ ಶಿಕ್ಷೆ ವಿಧಿಸಲಿಲ್ಲ ಎಂದರು.
ಪದ ಬಳಕೆ ಮಾಡಿಲ್ಲ
ಸಿ.ಟಿ.ರವಿ ತಾವು ಅವಾಚ್ಯ ಪದ ಬಳಕೆ ಮಾಡಿಲ್ಲ ಎಂಬುದಾಗಿ ಬಹಳ ಸ್ಪಷ್ಟವಾಗಿ ನಿರಾಕರಿಸಿದ್ದಾರೆ, ನಾವೇನೂ ತನಿಖೆ ಬೇಡವೆಂದು ಹೇಳಿಲ್ಲ, ಸತ್ಯಶೋಧನೆಯಾಗದೇ, ತನಿಖೆಯಾಗದೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರುವುದು ತಪ್ಪು.
ಕರ್ನಾಟಕದಲ್ಲಿ ಆಡಳಿತ ಹಳಿ ತಪ್ಪಿದೆ, ಪೊಲೀಸ್ ರಾಜ್ಯ ನಡೆಯುತ್ತಿದೆ, ಪ್ರತಿಯೊಂದಕ್ಕೂ ಪೋಲಿಸ್ ದುರ್ಬಳಕೆ ಆಗುತ್ತಿದೆ, ವಿರೋಧ ಪಕ್ಷಗಳ ಮೇಲೆ ದ್ವೇಷ ಸಾಧಿಸಲು ಹಲವು ಎಸ್ಐಟಿ ರಚಿಸಿ ತನಿಖೆ ಮಾಡುತ್ತಿದ್ದಾರೆ.
ಸ್ವತಃ ಮುಖ್ಯಮಂತ್ರಿಗಳೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಅವರ ವಿರುದ್ಧವೇ ತನಿಖೆ ನಡೆಯುತ್ತಿದೆ.ಇಂತಹ ಸಂದರ್ಭದಲ್ಲಿ ಪೊಲೀಸ್ ವ್ಯವಸ್ಥೆ ದುರ್ಬಳಕೆ ವಿಧಾನಸೌಧದವರೆಗೂ ತಲುಪಿದೆ.
ರಕ್ತ ಸುರಿಸಿದರು
ಬೆಳಗಾವಿ ಅಧಿವೇಶನ ವೇಳೆ ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಚಾರ್ಜ್ ಮಾಡಿ ರಕ್ತ ಸುರಿಸಿದರು, ರೈತರು, ಪಂಚಮಸಾಲಿ ಸಮುದಾಯದವರು ಪ್ರತಿಭಟನೆ ಮಾಡಿದಾಗಲೂ ಈ ರೀತಿ ನಡೆದಿರಲಿಲ್ಲ, ಒಂದು ರೀತಿಯಲ್ಲಿ ಪೊಲೀಸರ ದಬ್ಬಾಳಿಕೆಯಿಂದಲೇ ಎಲ್ಲವನ್ನು ಮಾಡಬಲ್ಲೆ ಎಂಬ ಅಭಿಪ್ರಾಯ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಲ್ಲಿ ಇದ್ದಂತಿದೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಂಧನ ಸದನದೊಳಗೆ ಆಗಿರುವ ಘಟನೆಯ ಬಗ್ಗೆ ಸಭಾಪತಿ ನಿರ್ಣಯ ಮಾಡಬೇಕು ಎಂದರು.