ಮಂಡ್ಯ:ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ವಿಧಾನ ಪರಿಷತ್ನಲ್ಲಿ ಅವಾಚ್ಯ ಪದ ಬಳಕೆ ಆರೋಪ ಸುಳ್ಳಾಗಿದ್ದರೆ ಸಿ.ಟಿ.ರವಿ ಬಂಧನ ಏಕಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡಲು ಸಾಧ್ಯವಿಲ್ಲ, ಹೆಣ್ಣುಮಕ್ಕಳಿಗೆ ಕೆಟ್ಟ ಭಾಷೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಬಿಜೆಪಿಯವರು ಬೆಂಬಲಿಸುತ್ತಿದ್ದಾರೆ ಎಂದು ಟೀಕಿಸಿದರು.
ಕ್ರಿಮಿನಲ್ ಅಪರಾಧ
ಸಿ.ಟಿ.ರವಿ ಕೀಳುಭಾಷೆ ಬಳಸಿದ್ದನ್ನು ಸ್ಥಳದಲ್ಲಿದ್ದವರು ಕೇಳಿಸಿಕೊಂಡಿದ್ದಾರೆ, ಅಷ್ಟು ಕೆಟ್ಟ ಮಾತು ಆಡಿರುವುದಕ್ಕೆ ಸಾಕ್ಷಿಯಾದ ಆಡಿಯೊ, ವಿಡಿಯೊ ಇದೆ ಎನ್ನುತ್ತಿದ್ದಾರೆ, ನಾನು ಅದನ್ನು ನೋಡಿಲ್ಲ, ಅವಾಚ್ಯ ಪದ ಏಕೆ ಬಳಸಿದರೆಂದು ನನಗೆ ತಿಳಿದಿಲ್ಲ, ಇದೊಂದು ಕ್ರಿಮಿನಲ್ ಅಪರಾಧ.
ಸಭಾಪತಿ ಬಸವರಾಜ ಹೊರಟ್ಟಿ ಅವರು, ಸಿ.ಟಿ.ರವಿ ಫ್ರಸ್ಟ್ರೇಷನ್ ಎಂಬ ಪದ ಬಳಸಿದ್ದಾರೆಂದು ತಿಳಿಸಿರುವ ಬಗ್ಗೆ ಗಮನ ಸೆಳೆದಾಗ, ಸಿ.ಟಿ.ರವಿ ತಾನು ‘ಫ್ರಸ್ಟ್ರೇಷನ್’ ಪದ ಬಳಸಿರುವುದಾಗಿ ತಿಳಿಸಿದ್ದಾರೆ, ಇದು ನಂತರದ ಹೇಳಿಕೆ, ಈಗ ಆ ರೀತಿ ಹೇಳುತ್ತಿದ್ದಾರೆ, ಆದರೆ, ಅವಾಚ್ಯ ಪದ ಬಳಸಿರುವುದು ನಿಜವಾಗಿರುವುದಕ್ಕೇ ಸಚಿವರು ದೂರು ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಪದ ಬಳಕೆ ಸತ್ಯ
ರವಿ ಆಡಿದ ಕೆಟ್ಟ ಮಾತನ್ನು ಕೇಳಿರುವುದಾಗಿ ಇತರ ಸದಸ್ಯರೂ ಹೇಳಿದ್ದಾರೆ, ಸಭಾಪತಿ ಅವರು ಸದನದಿಂದ ಹೊರನಡೆದ ನಂತರ ನಡೆದಿರುವ ಘಟನೆ ಬಗ್ಗೆ ಆಡಿಯೋ, ವಿಡಿಯೋ ಇದೆ ಎಂಬುದಾಗಿ ಹಲವರು ಹೇಳುತ್ತಿದ್ದು, ಪದ ಬಳಕೆಯಾಗಿರುವುದು ಸತ್ಯ ಎಂದರು.
ಸಿ.ಟಿ.ರವಿ ತಮಗೆ ಜೀವ ಬೆದರಿಕೆಯಿದ್ದು, ಅದಕ್ಕೆ ಸರ್ಕಾರವೇ ಹೊಣೆ ಎಂದಿರುವುದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಎಫ್ಐಆರ್ ದಾಖಲಾದ ಮೇಲೆ ಪೊಲೀಸರು ತನಿಖೆ ನಡೆಸಲೇಬೇಕಾಗುತ್ತದೆ, ಕಾನೂನಿನ ಕ್ರಮ ಮಾಡಲೇಬೇಕಾಗುತ್ತದೆ, ಸಿ.ಟಿ.ರವಿ ಜನರು ಆಕ್ರೋಶಗೊಂಡಿದ್ದರಿಂದ ಬೆಳಗಾವಿಯಲ್ಲಿದ್ದ ಅವರನ್ನು ರಕ್ಷಿಸಲು ಖಾನಾಪುರಕ್ಕೆ ಕರೆದೊಯ್ಯಲಾಯಿತು ಎಂದರು.