ಬೆಂಗಳೂರು:ಮಹಿಳೆಯರಿಗೆ ಅಪಮಾನ, ಹೀನ ಮಾತುಗಳೇ ನಮ್ಮ ಸಂಸ್ಕೃತಿ ಎಂಬುದಾಗಿ ಬಿಜೆಪಿ ಒಪ್ಪಿಕೊಳ್ಳಲಿ, ನಾವು ತಕರಾರು ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಕೇವಲ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಮಾತ್ರ ಮಾತನಾಡಿಲ್ಲ, ಸಿದ್ದರಾಮಯ್ಯ ಅವರ ಬಗ್ಗೆಯೂ ಹೀನ ಮಾತು ಆಡಿದ್ದಾರೆ, ಸದನದಲ್ಲಿ ನಿತ್ಯ ಸುಮಂಗಲಿ ಎಂದು ಪದ ಬಳಕೆ ಮಾಡಿದ್ದಾರೆ, ಅವರ ಮಾತುಗಳು ಸರಿಯೋ ತಪ್ಪೋ ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಚಿಕ್ಕಮಗಳೂರು ಜನ ಸುಸಂಸ್ಕೃತರು
ಚಿಕ್ಕಮಗಳೂರು ಜನ ಎಂದರೆ ಸುಸಂಸ್ಕೃತ ಜನ, ಅಂತಹವರ ನಡುವಿನಿಂದ ಇಂತಹ ವ್ಯಕ್ತಿ ಬಂದಿರುವುದು ದುರಂತ, ನಮ್ಮ ಪಕ್ಷದ ಯಾವುದೇ ನಾಯಕರು ಈ ರೀತಿ ಮಾತನಾಡಿದ್ದರೆ ನಾನು ಖಂಡಿಸುತ್ತಿದ್ದೆ.
ಬಿಜೆಪಿ ನಾಯಕರು ತಮ್ಮ ಪಕ್ಷದ ನಾಯಕರ ರಕ್ಷಣೆಗೆ ನಿಂತಿದ್ದಾರೆ, ಮುನಿರತ್ನ ಪ್ರಕರಣದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಏನು ಹೇಳಿದ್ದರು, ಎಫ್ಎಸ್ಎಲ್ ವರದಿಯಲ್ಲಿ ಸತ್ಯಾಂಶ ಬಂದ ನಂತರ ಪಕ್ಷದಿಂದ ಹೊರಹಾಕುವುದಾಗಿ ಹೇಳಿದ್ದರು.
ಪ್ರಕರಣದಲ್ಲಿ ಅವರು ಒಂದು ಭಾಗವಾಗಿದ್ದರೂ ಆತನನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ, ಇದೇ ಅವರ ನಾಯಕತ್ವ, ಅವರ ಮುತ್ತು ರತ್ನಗಳನ್ನು ಅವರೇ ಇಟ್ಟುಕೊಳ್ಳಲಿ, ಅವರ ಮನೆಯಲ್ಲಿ ಅವರ ಪಕ್ಷದಲ್ಲಿ ಏನಾದರೂ ನಾನೇ ಕಾರಣ, ಹೊರಗಡೆ ಏನಾದರೂ ನಾನೇ ಕಾರಣ, ನನ್ನ ಸ್ಮರಿಸದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.
ಆತ್ಮಸಾಕ್ಷಿಯೇ ನ್ಯಾಯ ನೀಡುತ್ತೆ
ನಿಂದನಾತ್ಮಕ ಮಾತು ಆಡಿಯಾಗಿದೆ, ಸರ್ಕಾರ ಹೇಗೆ ನ್ಯಾಯ ಕೊಡಿಸಲಿದೆ, ಆತ್ಮಸಾಕ್ಷಿಯೇ ನ್ಯಾಯ ನೀಡುತ್ತದೆ.
ಇದಕ್ಕೆಲ್ಲ ಕೊನೆ ಹಾಡುತ್ತೇವೆ ಎಂಬ ಸಿ.ಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂತಹ ಲೆಕ್ಕ ಚುಕ್ತಾಗಳನ್ನು ಬಹಳ ನೋಡಿದ್ದೇವೆ, ಬಹಳ ಸಂತೋಷ, ಅವರೊಬ್ಬರೇ ಲೆಕ್ಕ ಚುಕ್ತಾ ಮಾಡುತ್ತಾರಾ, ಎಲ್ಲರೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಲೆಕ್ಕ ಚುಕ್ತಾ ಮಾಡುತ್ತಾರಾ.
ಮಾನಹಾನಿಕರ ಪದ ಬಳಕೆ ವಿಚಾರ ಚರ್ಚೆಗೆ ಬದಲು ಬಿಜೆಪಿಯವರು ತಮ್ಮ ಹೇಳಿಕೆ ಮುಚ್ಚಿಕೊಳ್ಳಲು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ, ಇವರ ಆಡಳಿತದಲ್ಲಿ ಪೊಲೀಸರನ್ನು ಹೇಗೆ ಬಳಸಿಕೊಂಡಿದ್ದರು ಎಂದು ಪ್ರಶ್ನಿಸಿದರು.