ಬೆಂಗಳೂರು:ಎಸ್ಸಿ, ಎಸ್ಟಿ ಸಮಾವೇಶ ಕುರಿತು ಚರ್ಚೆ ಮಾಡುವ ಸಭೆಗಳನ್ನು ಸಹಿಸುವುದಿಲ್ಲ ಎನ್ನುವವರಿಗೆ ತಕ್ಕ ಉತ್ತರ ಕೊಡುವ ಶಕ್ತಿ ನಮಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆ ಸಹಿಸುವುದಿಲ್ಲ ಎಂಬುದಾಗಿ ನನಗೆ ಯಾರು ಹೇಳಿಲ್ಲ, ಆ ರೀತಿ ಯಾರಾದರು ಹೇಳಿದರೆ, ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ಅದಕ್ಕೆ ಸರಿಯಾಗಿ ಉತ್ತರ ಕೊಡುತ್ತೇವೆ ಎಂದರು.
ಅನೇಕ ಭರವಸೆ ಈಡೇರಿಸಿದೆ
ವಿಧಾನಸಭೆ ಚುನಾವಣೆಗೂ ಮೊದಲು ಚಿತ್ರದುರ್ಗದಲ್ಲಿ ಎಸ್ಸಿ, ಎಸ್ಟಿ ಸಮಾವೇಶ ಮಾಡಲಾಗಿತ್ತು, ಸರ್ಕಾರ ಅಧಿಕಾರಕ್ಕೆ ಬಂದರೆ ಅನೇಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿಕೊಂಡಿದ್ದೆವು, ಚಿತ್ರದುರ್ಗ ರೆಸ್ಯುಲ್ಯೂಷನ್ ಅಂತ ಹೆಸರು ಕೊಟ್ಟು ಬೇಡಿಕೆಗಳನ್ನು ಇಟ್ಟಿದ್ದರು, ಅದರಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು, ಅನೇಕ ಭರವಸೆಗಳನ್ನು ಸರ್ಕಾರ ಈಡೇರಿಸಿದೆ.
ಕೇಂದ್ರ ಸರ್ಕಾರದಿಂದ ಪೋಸ್ಟ್ ಮ್ಯಾಟ್ರಿಕ್ ಸ್ಕಾಲರ್ಶಿಪ್, ಎಸ್ಸಿಪಿ/ಟಿಎಸ್ಪಿ ಅನುದಾನ ಪಾಲು ರಾಜ್ಯಕ್ಕೆ ಬರುತ್ತಿಲ್ಲ, ಎಲ್ಲವನ್ನು ಚರ್ಚೆ ಮಾಡಬೇಕಿದೆ. ಒಟ್ಟಾಗಿ ಸಮಸ್ಯೆಗಳ ಪರಿಹಾರಕ್ಕೆ ಸಭೆ ತೀರ್ಮಾನಿಸಿತ್ತು.
ಈ ವಿಚಾರವನ್ನು ದೆಹಲಿ ನಾಯಕರ ಗಮನಕ್ಕೆ ತಂದಿರಲಿಲ್ಲ, ನಮ್ಮದೇ ಆಂತರಿಕ ವಿಚಾರ ಆಗಿರುವುದರಿಂದ ಹೇಳುವ ಅವಶ್ಯಕತೆ ಇಲ್ಲ ಎಂಬ ಕಾರಣಕ್ಕೆ ತಿಳಿಸಿರಲಿಲ್ಲ, ಪಕ್ಷದ ವಿಚಾರ ಹಾಗೂ ಸರ್ಕಾರದ ತೀರ್ಮಾನಗಳು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಗಮನಕ್ಕೆ ಹೋಗುತ್ತದೆ.
ರಾಜಕೀಯಕ್ಕಾಗಿ ಸಭೆ ಅಲ್ಲ
ಸುರ್ಜೆವಾಲಾ, ನನಗೆ ಕರೆ ಮಾಡಿ ಸಮಾವೇಶದಲ್ಲಿ ತಾವೂ ಭಾಗವಹಿಸಬೇಕು ಎಂದಿದ್ದರು, ಅದಕ್ಕೆ ರಾಜಕೀಯ ಪ್ರೇರಿತ ಅಥವಾ ರಾಜಕೀಯಕ್ಕಾಗಿ ಮಾಡುತ್ತಿರುವ ಸಭೆ ಅಲ್ಲ, ನೀವೂ ಭಾಗವಹಿಸಬಹುದು ಎಂದು ಆಹ್ವಾನಿಸಿದೆ.
ಈಗ ಆಗುವುದಿಲ್ಲ, ಮುಂದೆ ಸಮಯ ನೀಡುತ್ತೇನೆ, ಆಗ ಸಭೆ ಮಾಡಿ ಭಾಗವಹಿಸುತ್ತೇನೆ ಎಂಬುದಾಗಿ ಸುರ್ಜೇವಾಲಾ ತಿಳಿಸಿದರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹೇಳಿದ್ದರಿಂದ ಸಭೆ ಮುಂದೂಡಿದ್ದೇವೆಯೇ ಹೊರತು ರದ್ದು ಮಾಡಿಲ್ಲ, ಅವರ ಸಮಯ ತೆಗೆದುಕೊಂಡು ಚರ್ಚೆ ಮಾಡುತ್ತೇವೆ ಎಂದರು.
ಡಿನ್ನರ್ ಬಗ್ಗೆ ಏನೇನೋ ವ್ಯಾಖ್ಯಾನ ಮಾಡಲಾಗುತ್ತಿದೆ, ಡಿನ್ನರ್ ಅಂದರೆ ಊಟ, 7 ಗಂಟೆಗೆ ಸಭೆ ಕರೆಯಲಾಗಿತ್ತು, ಚರ್ಚೆ ಎರಡು ಅಥವಾ ಮೂರು ತಾಸುಗಳವರೆಗೂ ನಡೆಯಬಹುದಾದ ಹಿನ್ನೆಲೆಯಲ್ಲಿ ಊಟದ ಸಮಯ ಆಗುವುದರಿಂದ, ಮನೆಗೆ ಹೋಗಿ ಊಟ ಮಾಡಿ ಎನ್ನುವ ಬದಲು, ಊಟಕ್ಕೆ ಏರ್ಪಾಟು ಮಾಡಲಾಗಿತ್ತು.
ಹೈಕಮಾಂಡ್ ವಿರೋಧ ಇಲ್ಲ
ಚಿತ್ರದುರ್ಗ ಸಭೆಯಲ್ಲಿ ಹೈಕಮಾಂಡ್ ಭಾಗವಹಿಸಿತ್ತು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಧಾನ ಕಾರ್ಯದರ್ಶಿ ಭಾಗವಹಿಸಿದ್ದರು, ಸಮಾವೇಶಕ್ಕೆ ಹೈಕಮಾಂಡ್ ವಿರೋಧ ವ್ಯಕ್ತಪಡಿಸಿಲ್ಲ, ವಿರೋಧ ಇದ್ದಿದ್ದರೆ, ಸಭೆ ನಿಲ್ಲಿಸಿ ಎಂದು ಹೇಳುತ್ತಿದ್ದರು, ಅಂತಹ ಬೆಳವಣಿಗೆ ಏನೂ ಆಗಿಲ್ಲ.
ಸಭೆ ಬೇರೆ ರೀತಿ ಆಯಾಮ ಪಡೆದುಕೊಳ್ಳುತ್ತದೆ ಎಂಬುದಾಗಿ ಹೈಕಮಾಂಡ್ಗೆ ದೂರು ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ, ಸುರ್ಜೆವಾಲಾ ಅವರು ಕರೆ ಮಾಡಿ ಕೇಳಿದಾಗ ರಾಜಕೀಯ ಲೇಪನ ಇಲ್ಲ ಎಂಬುದನ್ನು ಹೇಳಿದ್ದೇನೆ.
ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಬೇಕು ಎನ್ನುವುದರ ಬಗ್ಗೆಯೂ ಚರ್ಚಿಸಲಾಗಿತ್ತು, ಇದರಲ್ಲಿ ಮುಚ್ಚಿಡುವಂತದ್ದು ಏನು ಇಲ್ಲ, ಮುಚ್ಚಿಟ್ಟುಕೊಂಡು ರಾಜಕಾರಣ ಮಾಡುವಂತದ್ದು ಏನಿದೆ, ಯಾವ ವಿಷಯದ ಬಗ್ಗೆ ಚರ್ಚೆ ಮಾಡಬೇಕೋ ಬಹಿರಂಗ ಚರ್ಚೆ ಮಾಡುತ್ತೇವೆ, ಯಾರಿಗೂ ಗೊತ್ತಾಗದಂತೆ ನಾಲ್ಕು ಗೋಡೆ ಮಧ್ಯೆ ಚರ್ಚಿಸುವಂತಹ ಅನಿವಾರ್ಯತೆ ಇಲ್ಲ.
ಜ್ವಲಂತ ಸಮಸ್ಯೆಗಳಿವೆ
ಅನೇಕ ಜ್ವಲಂತ ಸಮಸ್ಯೆಗಳಿವೆ, ಅಟ್ರಾಸಿಟಿ ಕೇಸ್ ದಾಖಲಾಗುತ್ತಿವೆ, ದಲಿತ ಸಮುದಾಯದ ತೊಂದರೆಗಳ ಬಗ್ಗೆ ಚರ್ಚೆ ಮಾಡಬೇಕಲ್ಲವೇ.
ಸಮಾವೇಶದಲ್ಲಿ ಹೈಕಮಾಂಡ್ನವರು ಭಾಗವಹಿಸುತ್ತೇವೆ ಎಂದಾಗ ಒಳ್ಳೆಯದಲ್ಲವೇ, ಅನೇಕ ತೀರ್ಮಾನಗಳು ಅಲ್ಲೇ ಆಗುತ್ತವೆ.
ಸಮಾವೇಶ ನಡೆಸುವ ಕುರಿತು ಮುಂದಿನ ದಿನಗಳಲ್ಲಿ ನೋಡೋಣ, ಸ್ವಲ್ಪ ದಿನ ಮುಂದಕ್ಕೆ ಹಾಕುವುದಾಗಿ ತಿಳಿಸಿದ್ದೇವೆ, ಮತ್ತೆ ಏರ್ಪಡಿಸುತ್ತೇವೆ, ಆಗ ಗೊತ್ತಾಗುತ್ತದೆ ಎಂದರು.
ವಿಕ್ರಂಗೌಡ ಸಾವಿನ ನಂತರ ನಕ್ಸಲರಿಗೆ ಶರಣಾಗುವಂತೆ ಕರೆ ಕೊಡಲಾಗಿತ್ತು, ಸಮಾಜದ ಮುನ್ನೆಲೆಗೆ ಬನ್ನಿ ಎಂದಿದ್ದೆ, ಎಎನ್ಎಫ್ ಹಿರಿಯ ಅಧಿಕಾರಿಗಳೂ ಕರೆ ಕೊಟ್ಟಿದ್ದರು, ನಕ್ಸಲರ ವಿರುದ್ಧ ಅನೇಕ ಪ್ರಕರಣಗಳಿವುದು ನಿಜ, ಶರಣಾಗತಿ ನಂತರ ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದನ್ನು ನೋಡುತ್ತೇವೆ, ನಕ್ಸಲರು ಶರಣಾಗುತ್ತಿದ್ದಾರೆ ಎಂಬುದನ್ನು ಮಾತ್ರ ಹೇಳಬಲ್ಲೆ ಎಂದರು.