ಮೈಸೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಯಾವುದೇ ಕಾರಣಕ್ಕೂ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ಸಿನಲ್ಲಿ ಕುರ್ಚಿಗಾಗಿ ಯುದ್ಧ ಪ್ರಾರಂಭವಾಗಿ 15 ದಿನಗಳಾಗಿವೆ, ಯಾರ್ಯಾರು ಬಡಿಗೆ, ಕುಡುಗೋಲು ತೆಗೆದುಕೊಂಡು ಬರುತ್ತಾರೆ ಎಂಬುದು ಗೊತ್ತಾಗಲಿದೆ.
ಬೀದಿ ರಂಪ ಮುಂದುವರೆದಿದೆ
ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೀದಿ ರಂಪ ಮುಂದುವರೆದಿದೆ, ಸಿದ್ದರಾಮಯ್ಯ ಅಧಿಕಾರದಿಂದ ಕೆಳಗೆ ಇಳಿಯುವುದಿಲ್ಲ ಎಂದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಾವು ಮುಖ್ಯಮಂತ್ರಿ ಆಗಬೇಕೆಂದು ಹೋರಾಟ ಮಾಡುತ್ತಿದ್ದಾರೆ, ಇದು ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದುನೋಡಿ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕ್ಷಣದಲ್ಲಿ ಸಿದ್ದರಾಮಯ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಬಹುದು, ಇದರ ಬೆನ್ನಲ್ಲೇ ತಾವೂ ಮುಖ್ಯಮಂತ್ರಿ ಆಗಬೇಕೆನ್ನುವ ಆಕಾಂಕ್ಷಿಗಳ ಸಾಲಿನಲ್ಲಿ ಶಿವಕುಮಾರ್ ಸೇರಿದಂತೆ 8 ರಿಂದ 10 ಸಚಿವರು ಬರಲಿದ್ದಾರೆ ಎಂದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದ ಇಂಥ ಘಟನೆಗಳು ನಡೆಯುತ್ತಿವೆ, ಅಲ್ಪಸಂಖ್ಯಾತ ದೇಶದ್ರೋಹಿಗಳನ್ನು ಮಟ್ಟ ಹಾಕುವ ಕೆಲಸ ನಡೆಯುದೆ, ರಾಜ್ಯದಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ.
ಕಲಬುರಗಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ, ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲನ್ನು ಕತ್ತರಿಸಿದ್ದಾರೆ, ಬೀದರ್ನಲ್ಲಿ ಎಟಿಎಂ ದರೋಡೆ ನಡೆದಿದೆ, ಈ ಘಟನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ, ಕಲಬುರಗಿಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರ ಗೂಂಡಾಗರ್ದಿ ನಡೆದಿದೆ, ದೂರು ನೀಡಲು ಹೋದ ಗುತ್ತಿಗೆದಾರನ ಸಹೋದರಿಯರ ಜೊತೆ ಪೊಲೀಸರು ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ರಾಜ್ಯದ ಜನತೆಗೆ ತಿಳಿದಿದೆ, ಬಿಜೆಪಿ ನಡೆಸಿದ ಹೋರಾಟದ ಫಲವಾಗಿ ಕಾಂಗ್ರೆಸ್ ಪುಡಾರಿಯನ್ನು ಬಂಧಿಸಿ ರಾಜಾತಿಥ್ಯ ಕೊಡುತ್ತಿದ್ದಾರೆ, ಕಿಯೋನಿಕ್ಸ್ ಸಂಬಂಧ ಗುತ್ತಿಗೆದಾರರು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಅಭಿವೃದ್ಧಿ ಇಲ್ಲವಾಗಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಕುರಿತು ಚಕಾರ ಎತ್ತುತ್ತಿಲ್ಲ, ಅಭಿವೃದ್ಧಿ ಇಲ್ಲದೆ ರಾಜ್ಯ ಬಡವಾಗಿದೆ, ರೈತರೂ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ.
ಸಿದ್ದರಾಮಯ್ಯ ಜಾತಿ ಜನಗಣತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದ್ದಾರೆ, ಈ ಹಿಂದೆ ಅವರದೇ ಸರ್ಕಾರ ಇದ್ದಾಗ 2016ರಲ್ಲಿ ಅವಸರದಿಂದ ಜಾತಿಗಣತಿ ವರದಿ ತಯಾರಿಸಿದರು. ತಾವೇ ಮುಖ್ಯಮಂತ್ರಿ ಆಗಿದ್ದದರೂ ವರದಿ ಅನುಷ್ಠಾನ ಮಾಡಲಿಲ್ಲ.
ಕುರ್ಚಿ ಅಲ್ಲಾಡುವಾಗ ಜಾತಿ ಜನಗಣತಿ ಮುನ್ನೆಲೆಗೆ ತರುತ್ತಿದ್ದಾರೆ ಇದು ಅವೈಜ್ಞಾನಿಕ ವರದಿ, ಒಕ್ಕಲಿಗ, ವೀರಶೈವ ಸಮಾಜ ಸೇರಿದಂತೆ ಇತರೆ ಸಮಾಜಗಳೂ ವಿರೋಧಿಸಿವೆ, ವರದಿಯ ಮಾಹಿತಿಗಳು ಸೋರಿಕೆ ಆಗಿವೆ, ಇದರ ಹಿಂದೆ ರಾಜಕೀಯ ಪಿತೂರಿ ಇರುವುದು ಕಾಣುತ್ತದೆ ಎಂದರು.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ಜಿಲ್ಲೆಗೆ ಆದ್ಯತೆ ನೀಡಿದ್ದರು, ಸರ್ವತೋಮುಖ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ಕೊಟ್ಟಿದ್ದರು, ಸಿದ್ದರಾಮಯ್ಯ ತವರು ಜಿಲ್ಲೆಗೆ ಎಷ್ಟು ಕೋಟಿ ರೂ. ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.