ಬೆಂಗಳೂರು:ದಾವೋಸ್ ಶೃಂಗಸಭೆಯಲ್ಲಿ ರಾಜ್ಯ ಸರ್ಕಾರ ಪ್ರಜ್ಞಾಪೂರ್ವಕವಾಗಿಯೇ ಪಾಲ್ಗೊಳ್ಳುತ್ತಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ದಾವೋಸ್ಗೆ ಹೋಗಿ ಒಡಂಬಡಿಕೆಗಳಿಗೆ ಸಹಿ ಹಾಕುವುದು ನಂತರ ಅದೇ ಕಂಪನಿಗಳನ್ನು ಬೆಂಗಳೂರಿಗೆ ಕರೆದು ಪುನಃ ಅದೇ ಒಡಂಬಡಿಕೆಗಳಿಗೆ ಸಹಿ ಹಾಕುವುದರಿಂದ ಉಂಟಾಗುವ ಗೊಂದಲ ತಪ್ಪಿಸಲೆಂದೇ ಶೃಂಗಸಭೆಯಿಂದ ದೂರ ಉಳಿದಿದ್ದೇವೆ.
ಬೆಂಗಳೂರಿನಲ್ಲಿ ಸಮಾವೇಶ
ಫೆಬ್ರವರಿ 11ರಿಂದ 14ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಕಂಪನಿಗಳು ಭಾಗವಹಿಸಲಿವೆ, ಈ ಮೂಲಕ ರಾಜ್ಯಕ್ಕೆ 8ರಿಂದ 10 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ ಇದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು ಒಡಂಬಡಿಕೆಗಳ ಪೈಕಿ ಕನಿಷ್ಠ ಮುಕ್ಕಾಲು ಪಾಲು ಬಂಡವಾಳ ರೂಪದಲ್ಲಿ ಬರಬೇಕು, ಇಲ್ಲವಾದರೆ ಎಲ್ಲವೂ ವ್ಯರ್ಥ, ವಾಸ್ತವಿಕ ದೃಷ್ಟಿಕೋನದಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನೇ ಹೇಳಿದ್ದಾರೆ ಎಂದರು.
ಕಳೆದ 2022ರಲ್ಲಿ ಬಿಜೆಪಿ ಸರ್ಕಾರ ಹೂಡಿಕೆದಾರರ ಸಮಾವೇಶ ಮಾಡಿ, 50 ಲಕ್ಷ ಕೋಟಿ ರೂ. ಹೂಡಿಕೆ ಬರಲಿದೆ ಎಂದಿತ್ತು, ಅದರಲ್ಲೂ ಗ್ರೀನ್ ಎನರ್ಜಿ ವಲಯಕ್ಕೆ 2.40 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಗಲಿದೆ ಎಂಬ ಅಂದಾಜಿತ್ತಾದರೂ, ಒಂದು ರೂ. ಸಹಾ ಬರಲಿಲ್ಲ.
ಈ ಬಾರಿ ತಪ್ಪು ಆಗುವುದಿಲ್ಲ
ಗ್ರೀನ್ ಎನರ್ಜಿ ಕ್ಷೇತ್ರಕ್ಕೆ ಅಷ್ಟೊಂದು ಬಂಡವಾಳದ ಧಾರಣಾಶಕ್ತಿಯೇ ಇಲ್ಲ, ಆದರೂ ಬಿಜೆಪಿ ಸರ್ಕಾರ ದೊಡ್ಡದಾಗಿ ಹೇಳಿಕೊಂಡಿತ್ತು, ಇಂತಹ ತಪ್ಪು ಈ ಬಾರಿ ಆಗುವುದಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಯಾರೂ ಮುಗಿಸಲಾಗದು, ಅಂತಹ ಆಲೋಚನೆಯೂ ಇಲ್ಲ, ಬಿಜೆಪಿಯ ಜನಾರ್ದನ ರೆಡ್ಡಿ ಹೇಳಿಕೆ ರಾಜಕೀಯಪ್ರೇರಿತ ಎಂದರು.
ಶ್ರೀರಾಮುಲು ಮತ್ತು ಜರ್ನಾದನ ರೆಡ್ಡಿ ಸಂಬಂಧ ಹಳಸಿದೆ, ಶ್ರೀರಾಮುಲು ಕಾಂಗ್ರೆಸ್ ಬರುವ ಸೇರುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ, ರೆಡ್ಡಿ ವಿರುದ್ಧ ನಾವೆಲ್ಲ ಹೋರಾಡಿದ್ದೇವೆ, ಈ ಹಿಂದೆಯೂ ನಮ್ಮ ಪಕ್ಷಕ್ಕೆ ಸೇರಲು ಬಂದಾಗ ಒಪ್ಪಲಿಲ್ಲ ಎಂದರು.