ಬೆಂಗಳೂರು:ಕೇಂದ್ರ ಸರ್ಕಾರ ಹಾಗೂ ಯುಜಿಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಮೇಲೆ ಒತ್ತಡ ತಂದು ಅನೇಕ ಲೋಪದೋಷ ಹೊಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆಯಲು ಎಲ್ಲರೂ ಸೇರಿ ಆಗ್ರಹಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ದಕ್ಷಿಣ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಲೋಪಗಳಿದ್ದವು, ಕರ್ನಾಟಕ ಸರ್ಕಾರ ಧೈರ್ಯದಿಂದ ಒಂದಷ್ಟು ತಿದ್ದುಪಡಿ ಮಾಡುವ ತೀರ್ಮಾನ ತೆಗೆದುಕೊಂಡಿದೆ ಎಂದರು.
ಕೇಂದ್ರ ಸರ್ಕಾರಕ್ಕೆ ಮುಟ್ಟಬೇಕು
ಸಮ್ಮೇಳನದಿಂದ ಹೊರ ಹೊಮ್ಮುವ ವಿಚಾರಗಳು ಕೇಂದ್ರ ಸರ್ಕಾರಕ್ಕೆ ಮುಟ್ಟಬೇಕು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಶೈಕ್ಷಣಿಕ ಗುಣಮಟ್ಟ ಅತ್ಯುತ್ತಮವಾಗಿದ್ದು, ಸೌಲಭ್ಯ ಕೊಡುವುದರಲ್ಲೂ ಮುಂದಿದ್ದೇವೆ, ಕಳೆದ 30 ವರ್ಷಗಳ ಹಿಂದೆಯೇ ಉತ್ತರ ಭಾರತದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ದಕ್ಷಿಣ ಭಾರತ ರಾಜ್ಯಗಳಿಗೆ ವಲಸೆ ಬರುತ್ತಿದ್ದುದ್ದನ್ನು ಗಮನಿಸಿದ್ದೇನೆ.
ಕರ್ನಾಟಕದಲ್ಲಿ ಸುಮಾರು 70ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು,250ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶಗಳೂ ಹೆಚ್ಚು ಕಾಲೇಜುಗಳನ್ನು ಹೊಂದಿವೆ, ಆದರೆ ನಮ್ಮ ಶಿಕ್ಷಣ ನೀತಿಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ನಮ್ಮ ಗಣತಂತ್ರ ವ್ಯವಸ್ಥೆ ವಿನೂತನವಾದುದು, ಸಂವಿಧಾನ ಹಲವು ಹಕ್ಕುಗಳನ್ನು ನೀಡಿದೆ, ಭಾಷೆಗಳ ವಿಚಾರದಲ್ಲಿಯೂ ನಾವು ವೈವಿದ್ಯತೆ ಹೊಂದಿದ್ದೇವೆ, ನಾವು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕಿದೆ.

ಯುವಜನತೆಗೆ ಅವಕಾಶ
ಈ ಕಾರಣಕ್ಕಾಗಿ ವ್ಯವಸ್ಥೆಯನ್ನು ನಾವುಗಳೆಲ್ಲ ಸೇರಿ ಬದಲಾಯಿಸಬೇಕಿದೆ, ಕಳೆದ 30 ವರ್ಷಗಳಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯೇ ಬದಲಾಗಿದೆ, ಜೊತೆಗೆ ಸಾಕಷ್ಟು ಬದಲಾವಣೆಗಳನ್ನೂ ನಾವು ನೋಡಿದ್ದೇವೆ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬೆರಗು ಹುಟ್ಟಿಸಿದೆ, ಯುವಜನತೆಗೆ ಅವಕಾಶ ಸೃಷ್ಟಿಸುವುದು ನಮ್ಮೆಲ್ಲರ ಗುರಿಯಾಗಬೇಕು.
ವಿಶ್ವವಿದ್ಯಾಲಯಗಳ ಆಡಳಿತ ವಿಚಾರದಲ್ಲೂ ಸಾಕಷ್ಟು ಸುಧಾರಣೆ ಮಾಡಬೇಕಾಗಿದೆ, ಕುಲಪತಿಗಳ ನೇಮಕ ಸೇರಿದಂತೆ ಹಲವು ವಿಷಯಗಳು ನಮ್ಮ ಮುಂದಿವೆ, ಕುಲಪತಿಗಳು ಹಾಗೂ ಶೈಕ್ಷಣಿಕ ಸಿಬ್ಬಂದಿಗಳ ನೇಮಕಾತಿಗೆ ಕನಿಷ್ಠ ಮಾನದಂಡ, ಅರ್ಹತೆಗಳನ್ನು ನಿಗದಿ ಮಾಡಬೇಕಿದೆ, ಎಲ್ಲಕ್ಕಿಂತ ಮುಖ್ಯವಾಗಿ ಉನ್ನತ ಶಿಕ್ಷಣ ವ್ಯವಸ್ಥೆ ಗಟ್ಟಿಯಾಗಬೇಕಿದೆ, ಅನೇಕ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಭಾರತೀಯರು ಉತ್ತಮ ಸ್ಥಾನಗಳನ್ನು ಅಲಂಕರಿಸಿದ್ದಾರೆ, ಜಾಗತಿಕ ಮಟ್ಟಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ ಬೆಳೆಯಲು ಅನೇಕ ತಜ್ಞರ ಸಲಹೆ ಉಪಯುಕ್ತವಾಗುತ್ತವೆ ಎಂದರು.
ಬೆಂಗಳೂರು, ಚೆನ್ನೈ, ಹೈದರಾಬಾದ್ ತಾಂತ್ರಿಕ ಪರಿಣಿತರ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿವೆ, ದಕ್ಷಿಣ ಭಾರತದ ರಾಜ್ಯಗಳಿಗೆ ಸರಿಸಮಾನವಾಗಿ ಯಾರೂ ನಿಲ್ಲಲು ಸಾಧ್ಯವಿಲ್ಲ, ರಾಜ್ಯಗಳು ತಮ್ಮದೇ ಆದ ಶಕ್ತಿಗಳನ್ನು ಹೊಂದಿವೆ.
ಗುಣಮಟ್ಟದ ಅಡಿಪಾಯ
ನಮ್ಮ ದೇಶ ಶಿಕ್ಷಣ ವಿಚಾರದಲ್ಲಿ ಮಹತ್ತರ ಸಾಧನೆ ಮಾಡಿದೆ, ಕೆಲಸ ಮಾಡಲು, ಕಲಿಯಲು, ದುಡಿಯಲು ಪ್ರಸಕ್ತವಾಗಿವೆ, ಹಿಂದಿನವರು ಶಿಕ್ಷಣ ಕ್ಷೇತ್ರಗಳಿಗೆ ಹಾಕಿಕೊಟ್ಟಿರುವ ಗುಣಮಟ್ಟದ ಅಡಿಪಾಯ ಕಾಪಾಡಬೇಕು.
ಜೊತೆಗೂಡುವುದು ಆರಂಭ, ಜೊತೆಗೂಡಿ ಆಲೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು, ಶಿಕ್ಷಣ ಕ್ಷೇತ್ರದ ಯುವಜನತೆ ಭವಿಷ್ಯ ಉತ್ತಮವಾಗಿರಬೇಕು ಎಂಬ ಕಾರಣಕ್ಕೆ ನಾವೆಲ್ಲ ಇಲ್ಲಿ ಸೇರಿದ್ದೇವೆ ಮತ್ತು ಗುಣಮಟ್ಟದ ಶಿಕ್ಷಣ ಪರ ದನಿ ಎತ್ತಲು ಒಂದುಗೂಡಿದ್ದೇವೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿನ ಅನಾನುಕೂಲತೆಗಳ ಬಗ್ಗೆ ತಿಳಿದಿದೆ, ಕರ್ನಾಟಕ ಹಾಗೂ ತೆಲಂಗಾಣಕ್ಕೆ ಹೋಲಿಸಿದಲ್ಲಿ ಮಹಾರಾಷ್ಟ್ರ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರತ್ಯೇಕ ಮಾದರಿ ಹೊಂದಿದೆ, ಕೇಂದ್ರ ಹಾಗೂ ರಾಜ್ಯಗಳಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಕುಲಪತಿ ಹಾಗೂ ಉಪಕುಲಪತಿಗಳ ವಿಚಾರದಲ್ಲಿ ತೀರ್ಮಾನ ಮಾಡುವುದು ಕಷ್ಟವಾಗುತ್ತದೆ, ಆದರೂ ನಿಭಾಯಿಸುತ್ತಿದ್ದೇವೆ ಎಂದರು.