ಬೆಂಗಳೂರು:ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಎಬ್ಬಿಸಿದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತ ಸೂಚಿಸಿರುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಳತಾಣದಲ್ಲಿ ವಿಷಯ ಪೋಸ್ಟ್ ಮಾಡಿದ್ದಕ್ಕೆ ಒಂದು ಸಮುದಾಯವನ್ನು ಕೆರಳಿಸಿದೆ, ಪೋಸ್ಟ್ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು, ಆತನನ್ನು ವಶಕ್ಕೆ ನೀಡುವಂತೆ ಇನ್ನೂರು ಮಂದಿ ಠಾಣೆ ಬಳಿ ಜಮಾಯಿಸಿ ಗಲಾಟೆ ಮಾಡಿ, ಕಲ್ಲು ತೂರಿದ್ದಾರೆ ಎಮದರು.

ಕಲ್ಲು ತೂರಾಟ, ದಾಂಧಲೆ
ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ, ಕಲ್ಲು ತೂರಾಟ ನಡೆಸಿ ದಾಂಧಲೆ ಮಾಡಿದವರನ್ನು ಬಂಧಿಸಿ, ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ಘಟನೆಯಲ್ಲಿ ಯಾರದು ತಪ್ಪು, ಯಾರದು ಸರಿ ಎಂಬುದನ್ನು ನಾವು ನಿರ್ಧಾರ ಮಾಡಲು ಆಗುವುದಿಲ್ಲ, ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ.
ಪೊಲೀಸರಿಂದ ತಪ್ಪಾಗಿದ್ದರೆ ಅವರ ಮೇಲೂ ಕ್ರಮ ಕೈಕೊಳ್ಳುತ್ತೇವೆ, ಅನೇಕ ಸಂದರ್ಭಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್, ಪಿಎಸ್ಐಗಳ ಅಮಾನತು ಮಾಡಲಾಗಿದೆ, ಪೊಲೀಸರ ಮೇಲು ಕ್ರಮ ಜರುಗಿಸಲಾಗಿದೆ, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸಲಹೆ ನೀಡಲಿ ನೋಡೋಣ
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸ್ಥಳಕ್ಕೆ ಬೇಟಿ ನೀಡಲಿ, ನಂತರ ಏನು ಸಲಹೆ ನೀಡುತ್ತಾರೆ ನೋಡೋಣ, ಮುಸ್ಲಿಮರ ವಿಷಯ ಬಂದಾಗಲೆಲ್ಲಾ ತುಷ್ಟೀಕರಣದ ಮಾತನ್ನಾಡುತ್ತಾರೆ, ಅದು ಬಿಟ್ಟರೆ ಅವರಿಗೆ ಬೇರೆ ಅಜೆಂಡಾ ಇಲ್ಲ, ಎಲ್ಲ ಸಂದರ್ಭದಲ್ಲೂ ಈ ರೀತಿ ಮಾತಾಡುವುದು ಸರಿಯಲ್ಲ.
ಭದ್ರಾವತಿ ಶಾಸಕ ಸಂಗಮೇಶ್ ಪುತ್ರ ಮಹಿಳಾ ಅಧಿಕಾರಿಯೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂಬುದು ಗೊತ್ತಿದೆ, ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು, ಸ್ಥಳೀಯ ಪೊಲೀಸರು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ, ಎಲ್ಲದಕ್ಕೂ ಸರ್ಕಾರ ಸೂಚನೆಗಳನ್ನು ನೀಡುವುದಿಲ್ಲ ಎಂದರು.
ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ದೆಹಲಿಗೆ ಹೋಗಿರುವುದಕ್ಕೆ ನಾನು ಹೇಗೆ ಉತ್ತರ ನೀಡಲಿ, ನಾನು ದೆಹಲಿಗೆ ಹೋಗುವಾಗ ಕೇಳಿ ಹೇಳುತ್ತೇನೆ, ನಾವು ಸಚಿವರಿದ್ದೇವೆ, ಆಗಾಗ್ಗೆ ಭೇಟಿ ಮಾಡುತ್ತೇವೆ, ಸಾರ್ವಜನಿಕವಾಗಿ ಹೇಳಿಕೆ ನೀಡಬೇಡಿ ಎಂದು ಹೈಕಮಾಂಡ್ ಸೂಚಿಸಿದೆ, ಯಾರೂ ಸಹ ಹೇಳಿಕೆ ನೀಡುತ್ತಿಲ್ಲ ಎಂದರು.