ನಿಯಮ ಪಾಲಿಸದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ
ಬೆಂಗಳೂರು:ರಾಜ್ಯದಲ್ಲಿ ಇನ್ನು ಮುಂದೆ ಅನಧಿಕೃತ ಬಡಾವಣೆಗಳಿಗೆ ಕಿಂಚಿತ್ತೂ ಅವಕಾಶ ಇಲ್ಲ, ಇದೊಂದು ಬಾರಿಗೆ ’ಬಿ’ ಖಾತಾ ಕೊಟ್ಟು ಅಂತ್ಯ ಹಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಅನಧಿಕೃತ ಬಡಾವಣೆಗಳು ಮತ್ತೆ ತಲೆ ಎತ್ತಿದರೆ ಜಿಲ್ಲಾಧಿಕಾರಿ, ಮುಖ್ಯ ಅಧಿಕಾರಿ, ನಗರ ಯೋಜನಾ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು, ಅಂತಹ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
3 ತಿಂಗಳಲ್ಲಿ ಮುಗಿಸಬೇಕು
ಇವತ್ತಿನಿಂದಲೇ ’ಬಿ’ ಖಾತಾ ನೀಡಲು ಆರಂಭಿಸಿ, 3 ತಿಂಗಳೊಳಗೆ ಎಲ್ಲರಿಗೂ ಖಾತಾ ನೀಡಿ ಮುಗಿಸಬೇಕು, ಈ ಕಾರ್ಯದಲ್ಲಿ ಮಧ್ಯವರ್ತಿಗಳು ಹಾಗೂ ಬ್ರೋಕರ್ಗಳು ತಲೆ ಹಾಕದಂತೆ ಕ್ರಮ ವಹಿಸಿ, ಅವರುಗಳಿಗೆ ತಕ್ಷಣ ಗೇಟ್ಪಾಸ್ ಕೊಡಿ.
ಕಾಯ್ದೆ ಮೂಲಕ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡಲಾಗಿದೆ ಎಂಬಿದನ್ನು ಅಧಿಕಾರಿಗಳು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು, ನಿಮಗೆ 3 ತಿಂಗಳು ಮಾತ್ರ ಕಾಲಾವಕಾಶ ಕೊಟ್ಟಿದ್ದು, ಅಷ್ಟರೊಳಗೆ ಅಭಿಯಾನ ಪೂರ್ಣಗೊಳಿಸಬೇಕು, ಇದರಲ್ಲಿ ಯಾವುದೇ ರಾಜಿ ಇಲ್ಲ, ಅಧಿಕಾರಿಗಳು ರಾಜಿ ಮಾಡಿಕೊಂಡರೆ ಸಹಿಸುವುದಿಲ್ಲ.
ಅನಧಿಕೃತ ಬಡಾವಣೆಗಳಿಂದ ಕಂದಾಯ ಬರುತ್ತಿಲ್ಲ, ಕಂದಾಯ ಕಟ್ಟದಿರುವುದರಿಂದ ಇಷ್ಟೆಲ್ಲಾ ಸಮಸ್ಯೆಗಳಾಗಿವೆ, ಇದರ ಪರಿಣಾಮ ಜನರಿಗೆ ನಾಗರಿಕ ಸವಲತ್ತುಗಳೂ ಸಿಗುತ್ತಿಲ್ಲ, ಸ್ಥಳೀಯ ಸಂಸ್ಥೆಗಳಿಗೆ ಆದಾಯವೂ ಇಲ್ಲವಾಗಿದೆ, ಇವೆಲ್ಲಾ ಅನಾನುಕೂಲಗಳಿಗೂ ಅಂತ್ಯ ಹಾಡಲೇಬೇಕಿದೆ ಎಂದರು.
ಕಾಯ್ದೆ ಅರ್ಥ ಮಾಡಿಕೊಳ್ಳಿ
ವಿಡಿಯೊ ಕಾನ್ಫರೆನ್ಸ್ನಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಅನಧಿಕೃತ ಬಡಾವಣೆಗಳು ನಗರ, ಪಟ್ಟಣ, ಪಾಲಿಕೆ ಮತ್ತು ಹಳ್ಳಿಗಳಲ್ಲೂ ಇವೆ, ಅಧಿಕಾರಿಗಳು ಕಾಯ್ದೆಯ ದೂರದೃಷ್ಟಿಯನ್ನು ಸ್ಪಷ್ಟ ಮತ್ತು ಖಚಿತವಾಗಿ ಅರ್ಥ ಮಾಡಿಕೊಳ್ಳಬೇಕು, ರಾಜ್ಯದಲ್ಲಿ ಇನ್ನೆಲ್ಲೂ ಅನಧಿಕೃತ ಬಡಾವಣೆಗಳು, ರೆವಿನ್ಯೂ ಬಡಾವಣೆಗಳು ತಲೆ ಎತ್ತಬಾರದು ಎಂದು ಸೂಚಿಸಿದರು.
ಅನಧಿಕೃತ ರೆವಿನ್ಯೂ ಬಡಾವಣೆಗಳಲ್ಲಿ ನಿವೇಶನ ಹೊಂದಿರುವವರಿಗೆ, ಮನೆ ಕಟ್ಟಿರುವವರಿಗೆ ತೊಂದರೆ ನೀಡಬಾರದು, ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಒಂದು ಬಾರಿಯ ಪರಿಹಾರಕ್ಕೆ ಮುಂದಾಗಿದ್ದೇವೆ.
ಸಂಬಂಧಪಟ್ಟ ಎಲ್ಲಾ ಸಚಿವರೂ ಈ ಕುರಿತು ಸ್ಪಷ್ಟಪಡಿಸಿದ್ದು, ಹೊಸ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಎಚ್ಚರಿಸಿದರು.