ರಾಜಕೀಯವಾಗಿ ಎದುರಿಸಲಾಗದ ರಾಜ್ಯ ಕಾಂಗ್ರೆಸ್ ಸರ್ಕಾರ
ಬೆಂಗಳೂರು: ಬಿಡದಿ ಬಳಿ ಕೇತಿಗಾನಹಳ್ಳಿಯಲ್ಲಿನ ತಮ್ಮ ಜಮೀನು ಸರ್ವೆ ರಾಜಕೀಯ ಸೇಡಿನ ಭಾಗ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡುತ್ತಿದ್ದವರು ಈಗ ಐಎಎಸ್ ಅಧಿಕಾರಿಗಳ ಎಸ್ಐಟಿ ರಚನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಭೂಮಿ ಖರೀದಿಸಿ ೪೦ ವರ್ಷಗಳಾಗಿವೆ, ಈಗ ಇದನ್ನು ಕೆದಕುವ ಮೂಲಕ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.
ಭೂಮಿಯನ್ನು ೧೯೮೪ರಲ್ಲಿ ಖರೀದಿ ಮಾಡಿದ್ದು, ಸಿನಿಮಾ ಹಂಚಿಕೆದಾರನಾಗಿ ದುಡಿದ ಹಣದಲ್ಲಿ ಖರೀದಿಸಿದ್ದೇನೆ, ಅಂದಿನಿಂದಲೂ ಜಮೀನಿನ ಮೇಲೆ ಕೆಲವರ ಕಣ್ಣು ಬಿದ್ದಿದೆ, ನನ್ನನ್ನು ರಾಜಕೀಯವಾಗಿ ಎದುರಿಸಲಾಗದ ಅಸಹಾಯಕತೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವೇ ಮೂಲಕ ಹೆದರಿಸುವ ಕೆಲಸ ಮಾಡುತ್ತಿದೆ.
ನನ್ನ ವಿರುದ್ಧ ೨೦೧೨ರಿಂದಲೂ ತನಿಖೆ ಮಾಡುತ್ತಿದ್ದು, ಇದುವರೆಗೆ ಏನು ಸಿಕ್ಕಿಲ್ಲ, ಸಿದ್ದರಾಮಯ್ಯ ರೀತಿ ನಾನು ಸರ್ಕಾರಿ ಜಮೀನು ಲೂಟಿ ಮಾಡಿಲ್ಲ, ಇದುವರೆಗಿನ ತನಿಖೆಗಳು ಸಾಕಾಗುವುದಿಲ್ಲವೆಂದು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್ಐಟಿ ತನಿಖೆ ಮಾಡಿಸುತ್ತಿದ್ದಾರೆ, ಯಾವುದೇ ತನಿಖೆ ಮಾಡಲಿ, ದೋಷ ಮುಕ್ತವಾಗಿದ್ದೇನೆ.
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ರಾಮಚಂದ್ರ ೧೯೮೬ರಲ್ಲಿ ಇದೇ ಜಮೀನು ವಿಷಯದಲ್ಲಿ ಅಂದಿನ ಪ್ರಧಾನಮಂತ್ರಿ ಹಾಗೂ ಗೃಹಮಂತ್ರಿಗೆ ಪತ್ರ ಬರೆದಿದ್ದರು.
ತಮ್ಮ ದೂರಿನಲ್ಲಿ ಕುಮಾರಸ್ವಾಮಿ ಜಮೀನು ಖರೀದಿಸಿದ್ದಾರೆ ಎಂದಿದ್ದರೇ ಹೊರತು ಕಬಳಿಸಿದ್ದಾರೆ ಎಂಬ ಆರೋಪ ಮಾಡಿರಲಿಲ್ಲ, ನಾನು ಖರೀದಿ ಮಾಡಿದ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆ, ಯಾವುದೇ ಅಕ್ರಮ ಚಟುವಟಿಕೆ ನಡೆಸಿಲ್ಲ, ಎಲ್ಲಾ ದಾಖಲೆಗಳನ್ನೂ ಇಟ್ಟುಕೊಂಡಿದ್ದೇನೆ.
ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ನನ್ನ ಜಮೀನು ವಿಷಯದ ಕುರಿತು ಆರೋಪ ಮಾಡಿದ್ದಾರೆ, ಆದರೆ, ರಾಜ್ಯ ಹೈಕೋರ್ಟ್ನಿಂದ ಯಾವುದೇ ನೋಟಿಸ್ ಬಂದಿಲ್ಲ.
ರಾಜ್ಯ ಸರ್ಕಾರ ಕೆಲವರನ್ನು ಬಳಸಿಕೊಂಡು ನನ್ನ ಮೇಲೆ ಆರೋಪ ಮಾಡಿಸುತ್ತಿದೆ, ಇವರೆಲ್ಲ ಈಗ ಎಲ್ಲಿಂದ ಉದ್ಭವ ಆದರು ಎಂಬುದು ಗೊತ್ತಿಲ್ಲ, ೪೦ ವರ್ಷಗಳ ಹಿಂದೆ ಖರೀದಿಸಿದ ಭೂಮಿಯನ್ನು ಅನೇಕ ಬಾರಿ ಸರ್ವೇ ಮಾಡಿಸಿದ್ದಾರೆ.
ಪ್ರತೀ ಬಾರಿ ಸರ್ವೇ ನಡೆಯುವಾಗ ಕಾಂಗ್ರೆಸ್ ಪುಡಾರಿಗಳು ಕೆಲವರನ್ನು ಕರೆತಂದು ಮಾಧ್ಯಮಗಳಿಗೆ ಹೇಳಿಕೆ ಕೊಡಿಸಿದ್ದಾರೆ, ೪೦ ವರ್ಷಗಳಿಂದ ನನ್ನ ಬಳಿ ಯಾರೂ ಬಂದಿರಲಿಲ್ಲ, ದೂರುದಾರರು ಈಗ ಎಲ್ಲಿಂದ ಬಂದರು ಎಂದು ಪ್ರಶ್ನಿಸಿದರು.
ಎಸ್ಐಟಿ ಯಾವುದೇ ನೊಟೀಸ್ ನೀಡದೇ ಸರ್ವೇ ಮಾಡಲು ಹೊರಟಿತ್ತು, ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಕರೆ ಮಾಡಿ ಮಾತನಾಡಿ, ನೋಟಿಸ್ ಕೊಟ್ಟು ಸರ್ವೇ ಮಾಡಿ ಎಂದಿದ್ದೆ.
ಭೂಮಿ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ರಾಜ್ಯದಲ್ಲಿ ಯಾರು ಏನೇನು ಮಾಡಿದ್ದಾರೆ, ಎಷ್ಟೆಷ್ಟು ಭೂಮಿ ಲೂಟಿ ಹೊಡೆದಿದ್ದಾರೆ ಎಂಬುದಕ್ಕೆ ದೊಡ್ಡ ಇತಿಹಾಸವೇ ಇದೆ, ಸಂವಿಧಾನಿಕ ಸಂಸ್ಥೆ, ತನಿಖಾ ವ್ಯವಸ್ಥೆಯನ್ನು ಮನಬಂದಂತೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದೂ ಗೊತ್ತಿದೆ, ಅವರ ದಾಖಲೆಗಳು ನನ್ನ ಬಳಿ ಇವೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಚಿಯರ್ ಲೀಡರ್ ದೇವೇಗೌಡ ಎಂಬುದಾಗಿ ಹೇಳಿಕೆ ನೀಡುವ ಮುನ್ನ ಸಿದ್ದರಾಮಯ್ಯ ತಮ್ಮ ಯೋಗ್ಯತೆ ಅರಿತುಕೊಳ್ಳುವುದು ಉತ್ತಮ.
ನೀರಾವರಿಗೆ ದೇವೇಗೌಡರು ಏನು ಮಾಡಿದ್ದಾರೆ ಎಂಬುದು ಇಡೀ ದೇಶಕ್ಕೇ ಗೊತ್ತಿದೆ, ಸಿದ್ದರಾಮಯ್ಯ ಏನು ಮಾಡಿದ್ದಾರೆ ಎನ್ನುವುದು ಜನರಿಗೂ ಗೊತ್ತಿದೆ.
ನೀರಾವರಿ, ರಾಜ್ಯದ ಜನತೆ ರಕ್ಷಣೆ ಕುರಿತು ಇವರಿಂದ ಹೇಳಿಸಿಕೊಳ್ಳಬೇಕಿಲ್ಲ, ರಾಜ್ಯದ ನೆಲ, ಜಲ, ಭಾಷೆ, ನೀರಾವರಿ ವಿಚಾರದಲ್ಲಿ ಸಿದ್ದರಾಮಯ್ಯ ಕೊಡುಗೆ ಏನು.
ಒಂದು ದಿನವಾದರೂ ನೀರಿನ ಬಗ್ಗೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಾತಾಡಿದ್ದಾರಾ, ಎಲ್ಲಿಯಾದರೂ ಹೋರಾಟ ಮಾಡಿದ್ದಾರಾ, ೧೦೨ ಡಿಗ್ರಿ ಜ್ವರ ಇದ್ದರೂ, ಕೈಯ್ಯಲ್ಲಿ ಐವಿ ಇದ್ದರೂ ರಾಜ್ಯಸಭೆಯಲ್ಲಿ ಗೋದಾವರಿ-ಕೃಷ್ಣ-ಕಾವೇರಿ ನದಿಗಳ ಜೋಡಣೆ ಯೋಜನೆ ಕುರಿತು ದೇವೇಗೌಡರು ಮಾತನಾಡಿದರು, ನೀರಾವರಿ ಬಗ್ಗೆ ಇವರಿಂದ ಹೇಳಿಸಿಕೊಳ್ಳಬೇಕಾ ಎಂದು ಪ್ರಶ್ನಿಸಿದರು.
ತಮ್ಮ ಕೊಡುಗೆ ಬಗ್ಗೆ ಕೇಳಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ದುಡ್ಡು ಹೊಡೆದಿರುವುದೇ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆ, ಇನ್ನೊಂದು ವಾರ ಸರ್ಕಾರದ ನಡೆ ನೋಡೊಕೊಂಡು ಆಮೇಲೆ ಮಾತನಾಡುತ್ತೇನೆ ಎಂದರು.