ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶಕ್ಕೆ ಮಾದರಿ ಬಜೆಟ್ ಮಂಡನೆ ಮಾಡಿದ್ದು, ಬಿಜೆಪಿಯವರು ಸುಳ್ಳು ಹೇಳದೆ ಇನ್ನೇನು ಮಾಡಲು ಸಾಧ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಲಾಲ್ ಬಜೆಟ್ ಎನ್ನುತ್ತಿದ್ದಾರೆ, ಪಾಪ ಅವರಾದರೂ ಏನು ಮಾಡುತ್ತಾರೆ, ಈ ರೀತಿ ಹೇಳುವುದು ಬಿಟ್ಟರೆ ಇನ್ನೇನು ಮಾಡಲು ಸಾಧ್ಯ ಎಂದರು.
ಮುಂದೆ ಬೇರೆ ಬೇರೆ ರಾಜ್ಯಗಳು ಕರ್ನಾಟಕದ ಬಜೆಟ್ ಅನುಕರಣೆ ಮಾಡಲಿವೆ, ಸಮಾಜದ ಎಲ್ಲಾ ವರ್ಗದವರ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಹಾಗೂ ಸಹಕಾರ ಕೊಟ್ಟ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸುತ್ತೇನೆ.
1.40 ಕೋಟಿ ಜನರಿಗೆ ಅನುಕೂಲ
ಬ್ರ್ಯಾಂಡ್ ಬೆಂಗಳೂರಿನ ಮಹತ್ವದ ಯೋಜನೆಗಳಿಗೆ ಅನುದಾನ ನೀಡಲಾಗಿದೆ, ಇದರಿಂದ ರಾಜಧಾನಿಯ 1.40 ಕೋಟಿ ಜನರಿಗೆ ಅನುಕೂಲವಾಗಲಿದೆ, ಟನಲ್ ರಸ್ತೆ ಆಗಿಯೇ ಆಗುತ್ತೆ, ಎಲ್ಲಾ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ಮಾಡಲಾಗುವುದು, ನಗರಪಾಲಿಕೆ ಹಾಗೂ ಬಿಎಂಆರ್ಸಿಎಲ್ ಇದರ ವೆಚ್ಚವನ್ನು 50:50 ಅನುಪಾತದಲ್ಲಿ ಭರಿಸಲಿವೆ.
ಬೆಂಗಳೂರಿನ ಅಭಿವೃದ್ಧಿ, ಜನರ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಸಾಲ ಮಾಡಿಯಾದರೂ ಯೋಜನೆ ಕಾರ್ಯಗತ ಮಾಡುತ್ತೇವೆ, ನಗರಕ್ಕೆ ಸರ್ಕಾರ ಆದ್ಯತೆ ನೀಡಿದೆ.
ಬಿಜೆಪಿತವರು ದೀನದಯಾಳ್ ಹೆಸರು ಇಡುವಾಗ ನಾವು ಬೆಂಗಳೂರು ವಿವಿಗೆ ಡಾ.ಮನಮೋಹನ್ ಸಿಂಗ್ ಎಂದು ಮರುನಾಮಕರಣ ಮಾಡಬಾರದೆ.
ಡಾ.ಮನಮೋಹನ್ ಸಿಂಗ್ ಕೊಡುಗೆ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮೇಲ್ಸೇತುವೆ, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ, ನೆಲಮಂಗಲ ಮೇಲ್ಸೇತುವೆ, ಜೆ.ಎನ್.ನರ್ಮ್ ಯೋಜನೆ, ನರೇಗಾ, ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಆಶಾ ಕಾರ್ಯಕತೆಯರ ಯೋಜನೆ ಜಾರಿಗೆ ತಂದವರು ಡಾ.ಮನಮೋಹನ್ ಸಿಂಗ್.
ಬಿಜೆಪಿ ಇಂತಹ ಯಾವುದಾದರೂ ಒಂದು ಯೋಜನೆ ಮಾಡಿದ್ದಾರಾ, ದೇಶ ಹಾಗೂ ಕರ್ನಾಟಕಕ್ಕೆ ಡಾ.ಮನಮೋಹನ್ ಸಿಂಗ್ ಕೊಟ್ಟಿರುವ ಕೊಡುಗೆಗೆ ಇನ್ನಷ್ಟು ಮಾನ್ಯತೆ ನೀಡಬೇಕು.
ಕಲ್ಯಾಣ ಕರ್ನಾಟಕ ಜನರಿಗೆ ಲಾಟರಿ
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಲಾಟರಿ ಹೊಡೆದಿದೆ. ಮಲ್ಲಿಕಾರ್ಜುನ ಖರ್ಗೆ ಸಂವಿಧಾನ ವಿಧಿ 371ಜೆ ಜಾರಿಗೆ ತಂದರು, ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಪ್ರತಿ ವರ್ಷ 5,000 ಕೋಟಿ ರೂ. ನೀಡುತ್ತಿದ್ದೇವೆ.
ನೀರಾವರಿಗೆ ಕಳೆದ ಬಾರಿಗಿಂತ 2,000 ಕೋಟಿ ರೂ. ಹೆಚ್ಚಿಗೆ ನೀಡಲಾಗಿದೆ, ನೀರಾವರಿಗೆ ಬೇರೆ ಯೋಜನೆ ರೂಪಿಸಿದ್ದೇವೆ, ಮಧ್ಯದಲ್ಲಿ ಬೇರೆ ಘೋಷಣೆ ಆಗಲಿದೆ, ಮಂಡಳಿಗಳಲ್ಲಿ ಕೆಲವು ತೀರ್ಮಾನ ಮಾಡಿದ್ದೇವೆ ಎಂದರು.