ಬೆಂಗಳೂರು:ಚಿತ್ರನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಹಿಂದೆ ಕೆಲವು ಸಚಿವರು ಇರುವ ಮಾಹಿತಿ ಇದ್ದು, ಅಂಥ ಸಚಿವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನ ಕಳ್ಳಸಾಗಣೆ ಹಿನ್ನೆಲೆಯಲ್ಲಿ ಬಂಧಿತರಾದ ರನ್ಯಾ ರಾವ್ ಹಿಂದೆ ಅನೇಕ ಘಟಾನುಘಟಿಗಳಿದ್ದಾರೆ ಎಂಬ ಅಂಶ ಹೊರಬರುತ್ತಿದೆ, ಇದು ಸಣ್ಣ ವಿಷಯವಲ್ಲ, ಕಳೆದ ಕೆಲವು ತಿಂಗಳಲ್ಲಿ 30ಕ್ಕೂ ಹೆಚ್ಚು ಬಾರಿ ರನ್ಯಾ ರಾವ್ ವಿದೇಶಕ್ಕೆ ಮತ್ತು ದುಬೈಗೆ ಹೋಗಿ ಬಂದ ಮಾಹಿತಿ ಹೊರಬಿದ್ದಿದೆ, ಪ್ರತಿ ಬಾರಿಯೂ ಬೆಂಗಳೂರಿಗೆ ಮರಳಿ ಬಂದಾಗ ಪ್ರೊಟೊಕಾಲ್ ವ್ಯವಸ್ಥೆ ನೀಡಲಾಗುತ್ತಿತ್ತು ಎಂದು ಆರೋಪಿಸಿದರು.
ಪೊಲೀಸರೇ ಎಸ್ಕಾರ್ಟ್
ರನ್ಯಾ ರಾವ್ ಒಬ್ಬ ಹಿರಿಯ ಐಪಿಎಸ್ ಅಧಿಕಾರಿ ಪುತ್ರಿ, ವಿದೇಶದಿಂದ ಬಂದಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದಿಂದ ಪೊಲೀಸರೇ ಎಸ್ಕಾರ್ಟ್ ನೀಡಿ ಕರೆದೊಯ್ಯುತ್ತಿದ್ದರು, ಆಕೆ ಸಾಮಾನ್ಯ ಮಹಿಳೆ ಅಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರೊಟೊಕಾಲ್ ಸಿಗುತ್ತದೆ, ಸೆಕ್ಯುರಿಟಿ ತಪಾಸಣೆ ಆಗುವುದಿಲ್ಲವೆಂದರೆ, ಇದರ ಹಿಂದೆ ಕೆಲವು ಘಟಾನುಘಟಿಗಳಿದ್ದಾರೆ, ಅಲ್ಲದೇ, ಕೆಲವು ಸಚಿವರೂ ಇದ್ದಾರೆ ಎಂಬ ವಿಷಯವೂ ಬೆಳಕಿಗೆ ಬರುತ್ತಿದೆ.
ಈಗಾಗಲೇ ಸಿಬಿಐ, ಇ.ಡಿ. ತನಿಖೆ ನಡೆಯುತ್ತಿದೆ, ಈ ಗಂಭೀರ ಪ್ರಕರಣದ ಹಿಂದಿರುವವರ ಮಾಹಿತಿ ಮುಖ್ಯಮಂತ್ರಿಗಳಿಗೆ ಇದ್ದೇ ಇರುತ್ತದೆ.
ಕಳ್ಳಸಾಗಾಟ ಮಾಫಿಯಾ
ಚಿನ್ನ ಕಳ್ಳಸಾಗಣೆ ಹಿಂದಿರುವ ಹವಾಲಾ, ಚಿನ್ನ ಕಳ್ಳಸಾಗಾಟ ಮಾಫಿಯಾಗಳು, ಬೆಂಬಲ ಕೊಟ್ಟ ರಾಜಕಾರಣಿಗಳು, ಮಂತ್ರಿಗಳು, ಮಾಜಿ ಮಂತ್ರಿಗಳು, ಶಾಸಕರು, ಮಾಜಿ ಶಾಸಕರು ಯಾರೆಂಬುದನ್ನು ಮುಖ್ಯಮಂತ್ರಿ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ಹದಿಮೂರು ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಾಟದಲ್ಲಿ ರನ್ಯಾ ರಾವ್ ಬಂಧನವಾಗಿದೆ, ಚಿನ್ನ ವಶಕ್ಕೆ ಪಡೆಯಲಾಗಿದೆ.
ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿ ಮಗಳ ನೇತೃತ್ವದಲ್ಲಿ ಇಷ್ಟು ದೊಡ್ಡ ಚಿನ್ನ ಕಳ್ಳಸಾಗಾಟ ನಡೆದುದನ್ನು ನಾವೆಂದೂ ಕೇಳಿರಲಿಲ್ಲ, ಇದು ಗಂಭೀರ ಸ್ವರೂಪ ಪಡೆದುಕೊಂಡಿದೆ, ಇದು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಅಲ್ಲ, ಮುಖ್ಯಮಂತ್ರಿ ಉತ್ತರಿಸಬೇಕು ಎಂದರು.