ಬೆಂಗಳೂರು:ಚಿತ್ರನಟಿ ರನ್ಯಾ ರಾವ್ ದುಬೈನಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಶಿಷ್ಟಾಚಾರ ಸೌಲಭ್ಯ ದುರ್ಬಳಕೆಗೆ ಸಂಬಂಧಿಸಿದಂತೆ ಆಕೆಯ ತಂದೆ, ಪೋಲಿಸ್ ಮಹಾನಿರ್ದೇಶಕ ರಾಮಚಂದ್ರ ರಾವ್ ಪಾತ್ರ ಕುರಿತು ತನಿಖೆ ನಡೆಸುವಂತೆ ಸರ್ಕಾರ ಆದೇಶಿಸಿದೆ.
ರನ್ಯಾ ರಾವ್ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯಗಳ ಬಳಕೆ ಪಡೆದುಕೊಳ್ಳಲು ಕಾರಣವಾದ ಸಂಗತಿ ಮತ್ತು ಸಂದರ್ಭಗಳು, ಈ ಪ್ರಕರಣದಲ್ಲಿ ರಾಮಚಂದ್ರ ರಾವ್ ಅವರ ಪಾತ್ರ ಏನಿದೆ ಎಂಬ ಬಗ್ಗೆ ತಿಳಿಯಲು ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತ ಅವರಿಂದ ತನಿಖೆ ನಡೆಸಿ, ಒಂದು ವಾರದಲ್ಲಿ ವರದಿ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ.
ತನಿಖೆ ತಕ್ಷಣ ಪ್ರಾರಂಭಿಸಿ
ಐಪಿಎಸ್ ಅಧಿಕಾರಿ ವಿರುದ್ಧ ತನಿಖೆಯನ್ನು ತಕ್ಷಣ ಪ್ರಾರಂಭಿಸಿ, ನಿಗದಿತ ಸಮಯದೊಳಗೆ ವರದಿ ನೀಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಅಧೀನ ಕಾರ್ಯದರ್ಶಿ ನಾಗಪ್ಪ ಎಸ್. ಪರೀಟ್ ಆದೇಶ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ನಟಿ ರನ್ಯಾ ರಾವ್ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ದುಬೈನಿಂದ ಬೆಂಗಳೂರಿಗೆ ಸಾಗಾಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.
ಬಂಧನ ಸಂದರ್ಭದಲ್ಲಿ ಇವರು ಶಿಷ್ಟಾಚಾರ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡು ಈ ಅಕ್ರಮ ಎಸಗಿರುವ ಬಗ್ಗೆ ವರದಿಯಾಗಿರುತ್ತದೆ.

ಶಿಷ್ಟಾಚಾರ ಸೇವೆ ಬಳಕೆ
ಅಲ್ಲದೆ, ಉನ್ನತ ಅಧಿಕಾರಿಗಳಿಗೆ ವಿಮಾನ ನಿಲ್ದಾಣಗಳಲ್ಲಿ ನೀಡಲಾಗುವ ಶಿಷ್ಟಾಚಾರಗಳನ್ನು ತಮ್ಮ ತಂದೆಯವರಾದ ಪೋಲಿಸ್ ಮಹಾನಿರ್ದೇಶಕರ ಹೆಸರನ್ನು ಬಳಕೆ ಮಾಡಿಕೊಂಡು ಅವರಿಗೆ ನೀಡುವ ಶಿಷ್ಟಾಚಾರ ಸೇವೆಗಳನ್ನು ರನ್ಯಾ ರಾವ್ ದುರ್ಬಳಕೆ ಮಾಡಿಕೊಂಡು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯಿಂದ ತಪ್ಪಿಸಿಕೊಂಡು ಅಕ್ರಮ ಕೃತ್ಯಗಳನ್ನು ನಡೆಸಿರುವ ಬಗ್ಗೆ ವರದಿಯಾಗಿರುತ್ತದೆ.
ಆದ್ದರಿಂದ ಶಿಷ್ಟಾಚಾರ ಸೌಲಭ್ಯಗಳ ಬಳಕೆ ಪಡೆದುಕೊಳ್ಳಲು ಹಾಗೂ ಕಾರಣವಾದ ಸಂಗತಿಗಳು, ಸಂದರ್ಭದಲ್ಲಿ ಪೋಲಿಸ್ ಅಧಿಕಾರಿಯ ಪಾತ್ರ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ.