ಬೆಂಗಳೂರು:ಶಾಸಕರಾದ ರಾಜುಕಾಗೆ ಮತ್ತು ಬಸವರಾಜ ಮತ್ತಿಮೋಡ್ ಅವರಿಗೆ ಅಧಿಕಾರಿಗಳಿಂದ ಅಪಮಾನ ವಿಚಾರವನ್ನು ಹಕ್ಕುಬಾಧ್ಯತಾ ಸಮಿತಿಗೆ ವರ್ಗಾಯಿಸಿ ಸಭಾಧ್ಯಕ್ಷ ಯು.ಟಿ.ಖಾದರ್ ಆದೇಶ ನೀಡಿದರು.
ವಿಧಾನಸಭೆಯಲ್ಲಿಂದು ಇಬ್ಬರು ಶಾಸಕರು ತಮಗಾದ ಅಪಮಾನ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದಾಗ ಪಕ್ಷಬೇಧ ಮರೆತು ಬಹುತೇಕ ಶಾಸಕರು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜೇಂದ್ರ ಕುಮಾರ್ ಕಟಾರಿಯಾ
ವಿಷಯ ಪ್ರಸ್ತಾಪಿಸಿದ ರಾಜು ಕಾಗೆ, ಫೆಬ್ರವರಿ 11 ರಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಭೆ ನಂತರ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಬಳಿ ತೆರಳಿ ತಮ್ಮ ಕ್ಷೇತ್ರದಲ್ಲಿನ ಭವನವೊಂದರ ನಿರ್ಮಾಣ ಕೆಲಸ ವಿಚಾರವಾಗಿ ಪ್ರಸ್ತಾಪಿಸಿದಾಗ, ಜಿಲ್ಲಾಧಿಕಾರಿಗಳಿಗೂ ತಲೆಯಿಲ್ಲ, ನಿಮಗೂ ತಲೆಯಿಲ್ಲ ಎಂದು ಅಪಮಾನ ಮಾಡಿದರು.
ನನ್ನ ಮಾತಿಗೂ ಬೆಲೆ ಕೊಡದೆ ಉದ್ಧಟತನದ ಮಾತನ್ನಾಡಿದ್ದಾರೆ, 25 ವರ್ಷದಿಂದ ಶಾಸಕನಾಗಿದ್ದು, ಇಂತಹ ಉದ್ಧಟತನವನ್ನು ಯಾವ ಅಧಿಕಾರಿಯೂ ತೋರಿರಲಿಲ್ಲ, ಸರ್ವಾಧಿಕಾರಿ ಧೋರಣೆ ಸರಿಯಲ್ಲ, ಸಾರ್ವಜನಿಕ ಕೆಲಸ ಮಾಡುವುದು ಅಧಿಕಾರಿ ಹೊಣೆಗಾರಿಕೆ, ನಾವು ಜನಪ್ರತಿನಿಧಿ, ನಮಗೆ ಘೋರ ಅಪಮಾನ ಮಾಡಿದ ಅಧಿಕಾರಿಗೆ ಶಿಕ್ಷೆಯಾಗಬೇಕು, ಅಧಿಕಾರಿಯನ್ನು ವರ್ಗಾ ಮಾಡಬೇಕು, 50 ರಿಂದ 60 ಶಾಸಕರು ಸಹಿ ಹಾಕಿ ಪತ್ರ ಕೊಟ್ಟಿದ್ದಾರೆ, ಇದನ್ನು ಹಕ್ಕುಚ್ಯುತಿ ಸಮಿತಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಎಂ.ಟಿ.ಕೃಷ್ಣಪ್ಪ ದನಿಗೂಡಿಸಿ, ಇದು ಸದನದ 224 ಶಾಸಕರಿಗೆ ಮಾಡಿರುವ ಅಪಮಾನ, ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಸಿ.ಸಿ.ಪಾಟೀಲ್ ಮಾತನಾಡಿ, ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸದ ಬಗ್ಗೆ ಅಧಿಕಾರಿಯ ಬಳಿ ಮಾತನಾಡಲು ರಾಜು ಕಾಗೆ ಹೋದಾಗ ದುರ್ವರ್ತನೆ ತೋರಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಮಹೇಶ್ ಮೇಘಣ್ಣನವರ್
ಬಸವರಾಜ್ ಮತ್ತಿಮೋಡ್ ಮಾತನಾಡಿ, ತಮ್ಮ ಕ್ಷೇತ್ರ ವ್ಯಾಪ್ತಿಯ ಪುರಸಭೆ ಚುನಾವಣೆ ವೇಳೆ ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್ ತಮ್ಮನ್ನು ನೂಕಿದ್ದಾರೆ, ಇಬ್ಬರು ಸದಸ್ಯರ ಅಪಹರಣಕ್ಕೆ ಸಹಕರಿಸಿದ್ದಾರೆ, ಶಾಸಕರಿಗೆ ಗೌರವವೇ ಇಲ್ಲದಂತಾಗಿದೆ. ಎದೆ ಮೇಲೆ ಕೈ ಹಾಕಿ ನೂಕಿದ್ದಾರೆ, ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಆಡಳಿತ ಪಕ್ಷದವರಿಗೆ ಒಂದು ಪೆಟ್ಟಾದರೆ, ವಿರೋಧಪಕ್ಷದವರಿಗೆ ಎರಡು ಪೆಟ್ಟು ಎನ್ನುವಂತಾಗಿದೆ, ಅಧಿಕಾರಿಗಳೇ ಗೌರವ ಕೊಡಲ್ಲ ಎಂದರೆ ಹೇಗೆ, ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಗೆ ಪ್ರಶ್ನೆ ಮಾಡುವ ಅಧಿಕಾರವಿದೆ, ಅಧಿಕಾರಿಗಳು ಬೆಲೆ ಕೊಡುವುದಿಲ್ಲ ಎಂದಾದರೆ ಸಮಿತಿಯನ್ನು ಮುಚ್ಚಿಬಿಡಿ, ಅಧಿಕಾರಿಗಳೇ ರಾಜ್ಯಭಾರ ಮಾಡಲಿ, ನಾವು ಸದನಕ್ಕೆ ಏಕೆ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಬೆಳಗಾವಿಯಲ್ಲಿ ಲಿಂಗಾಯತರ ಸಮಾವೇಶ ವೇಳೆ ಎಡಿಜಿಪಿ ಕಾನೂನು ಮೀರಿ ವರ್ತಿಸಿದ್ದಾರೆ, ಇಂತಹ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು, ಸೂಕ್ತ ನಿರ್ದೇಶನ ನೀಡಬೇಕು ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಪ್ರಶ್ನಿಸಲು ಸುಪ್ರೀಂಕೋರ್ಟ್ಗೂ ಅಧಿಕಾರವಿಲ್ಲ
ವಿರೋಧಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ನಡೆದ ವಿಚಾರ ಪ್ರಸ್ತಾಪಿಸಿ, ಶಾಸಕಾಂಗಕ್ಕೆ ಅಗೌರವ ಸಲ್ಲಿಸಿದರೆ ಸಭಾಧ್ಯಕ್ಷರು ಕೈಗೊಳ್ಳುವ ಕ್ರಮ ಪ್ರಶ್ನಿಸಲು ಸುಪ್ರೀಂಕೋರ್ಟ್ಗೂ ಅಧಿಕಾರವಿಲ್ಲ, ತಪ್ಪಿತಸ್ತ ಅಧಿಕಾರಿಗಳನ್ನು ವರ್ಗಾ ಮಾಡಿ ಸಭಾಧ್ಯಕ್ಷರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಅಧಿಕಾರಿಗಳ ರಕ್ಷಣೆ ಮಾಡುವುದಾಗಲೀ, ತಪ್ಪು ಮಾಡಿದವರ ಬಗ್ಗೆ ಸಬೂಬು ಹೇಳುವುದಾಗಲೀ ಮಾಡುವುದಿಲ್ಲ, ಶಾಸಕರಿಬ್ಬರು ಸದನದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ, ಶಾಸಕರು, ಸಂಬಂಧಿಸಿದ ಅಧಿಕಾರಿಗಳು, ಕಂದಾಯ ಸಚಿವರು ಹಾಗೂ ಸಮಿತಿ ಅಧ್ಯಕ್ಷ ಸಿ.ಸಿ.ಪಾಟೀಲ್ ಅವರನ್ನು ತಮ್ಮ ಕಚೇರಿಗೆ ಕರೆಸಿ ಚರ್ಚೆ ಮಾಡಿ ಮುಂದಿನ ನಿರ್ಣಯ ಕೈಗೊಳ್ಳಬೇಕು ಎಂಬ ಸಲಹೆ ನೀಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಶೋಕ್, ಇದು ಕಾಜಿ ನ್ಯಾಯ, ಇದು ಬೇಡ, ತಪ್ಪು ಮಾಡಿದ ಅಧಿಕಾರಿಗಳಿಗೆ ಛೀಮಾರಿ ಹಾಕಿ ಎಂದಾಗ ಹಲವು ಸದಸ್ಯರು ದನಿಗೂಡಿಸಿದರು.
ಅಧಿಕಾರಿಗಳ ವರ್ತನೆ ಸಹಿಸುವುದಿಲ್ಲ
ಸಭಾಧ್ಯಕ್ಷರು ಮಾತನಾಡಿ, ಶಾಸಕರಾದ ರಾಜು ಕಾಗೆ ಹಾಗೂ ಮತ್ತಿಮೋಡ್ ತಮಗಾದ ಅಪಮಾನದ ಬಗ್ಗೆ ಲಿಖಿತ ದೂರು ನೀಡಿದ್ದಾರೆ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಲಬುರಗಿ ಹೆಚ್ಚುವರಿ ಎಸ್ಪಿ ಅವರಿಂದ ಆದ ಅಪಮಾನ ಪ್ರಸ್ತಾಪಿಸಿದ್ದಾರೆ, ಸೌಜನ್ಯ ತೋರದ ಅಧಿಕಾರಿಗಳ ವರ್ತನೆ ಸಹಿಸುವುದಿಲ್ಲ, ಜನಪ್ರತಿನಿಧಿಗಳಿಗೆ ಗೌರವ ಕೊಡಬೇಕು, ಇದು ಸದನಕ್ಕೆ ಮಾಡಿರುವ ಅಪಮಾನ, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಬೇರೆಯವರಿಗೂ ಎಚ್ಚರಿಕೆ ಗಂಟೆಯಾಗಬೇಕು, ನಾವೇಕೆ ಅಧಿಕಾರಿಗಳಿಗೆ ಸಮಯ ಕೊಡಬೇಕು, ವಿಷಯವನ್ನು ಹಕ್ಕುಬಾಧ್ಯತಾ ಸಮಿತಿಗೆ ವಹಿಸುತ್ತೇನೆ ಎಂದರು.
ಎಚ್.ಕೆ.ಪಾಟೀಲ್ ಮಾತನಾಡಿ, ಸಾಮಾಜಿಕ ನ್ಯಾಯ ಅಧಿಕಾರಿಗಳಿಗೂ ಕೊಡಬೇಕು, ನಿಮ್ಮ ನಿರ್ಣಯ ಪುನರ್ ಪರಿಶೀಲಿಸಿ ಎಲ್ಲರನ್ನೂ ಕರೆದು ಮಾತನಾಡಿ ಎಂದರು.
ಕಾನೂನು ಸಚಿವರ ಸಲಹೆ ಒಪ್ಪದ ಸಭಾಧ್ಯಕ್ಷರು, ನನ್ನ ಆತ್ಮಸಾಕ್ಷಿ ಪ್ರಕಾರ ಇಂತಹ ಅಧಿಕಾರಿಗಳಿಗೆ ಯಾವುದೇ ಅವಕಾಶ ಕೊಡಬಾರದು, ಹಕ್ಕುಚ್ಯುತಿ ಸಮಿತಿ ಮುಂದೆ ಹೋಗಲಿ, ನಮಗೆ ಅಧಿಕಾರಿ ಮುಖ್ಯವಲ್ಲ, ಶಾಸಕರು ಮುಖ್ಯ, ಶಾಸಕರಿಗೆ ಅಗೌರವ ತೋರುವುದನ್ನು ಸಹಿಸುವುದಿಲ್ಲ, ಅಧಿಕಾರಿಗಳು ಸರ್ಕಾರದ ಸೇವಕರು, ಶಾಸಕರ ಅಪಮಾನ ಸಹಿಸುವುದಿಲ್ಲ, ಶಾಸಕರು ಕರೆದಾಗ ಮಾತನಾಡಬೇಕಿತ್ತು, ಅವರಿಗೆ ಶಿಕ್ಷೆಯಾಗಲಿ ಎಂದು ಖಾರವಾಗಿ ನುಡಿದರು.
ಶಾಸಕರು ಪಕ್ಷಬೇಧ ಮರೆತು ಸಭಾಧ್ಯಕ್ಷರ ನಿರ್ಣಯ ಸ್ವಾಗತಿಸಿದರು.