ಬೆಂಗಳೂರು:ಬೆಸ್ಕಾಂ ಮತ್ತು ಇತರ ಎಸ್ಕಾಂಗಳ ಸ್ಮಾರ್ಟ್ ಮೀಟರ್ ಟೆಂಡರ್ನಲ್ಲಿ ಸುಮಾರು 15,568 ಕೋಟಿ ರೂ.ಗಳ ಬೃಹತ್ ಅವ್ಯವಹಾರ ನಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಇಂದಿಲ್ಲಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವ್ಯವಹಾರದ ಗಾತ್ರ ಇನ್ನೂ ದೊಡ್ಡದೇ ಇದೆ, ಎಸ್ಕಾಂಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್ಸಿ) ನಿಯಮಗಳಿಗೆ ಬದ್ಧವಾಗಿರಬೇಕು, ನಿಯಮಗಳಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯ ಎಂಬುದಾಗಿ ಎಲ್ಲೂ ಉಲ್ಲೇಖ ಇಲ್ಲ ಎಂದರು.
ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಬಹುದೇ ಹೊರತು ಖಾಯಂ ಗ್ರಾಹಕರು, ಹೊಸ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡುವಂತಿಲ್ಲ.
ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲ
ಸೆಂಟ್ರಲ್ ಇಲೆಕ್ಟ್ರಿಸಿಟಿ ಅಥಾರಿಟಿ ನಿಯಮಾವಳಿ ಪ್ರಕಾರ ಸಹಾ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲ, ಕೆಟಿಪಿಪಿ ಕಾಯ್ದೆಯಡಿ ಬಿಡ್ ಕೆಪ್ಯಾಸಿಟಿ ಟೆಂಡರ್ನಲ್ಲಿ ತಿಳಿಸಿಲ್ಲ, ಅದು 6,800 ಕೋಟಿ ರೂ. ಇರಬೇಕಿತ್ತು, ಬಿಡ್ಡಿಂಗ್ ಸಾಮರ್ಥ್ಯ ಇಲ್ಲದಿರುವುದೇ ಮೊದಲ ಹಗರಣವಾಗಿದೆ.
ಕೆಟಿಪಿಪಿ ಕಾಯ್ದೆ ಪ್ರಕಾರ ವ್ಯವಹಾರ 1,920 ಕೋಟಿ ರೂ. ಇರಬೇಕಾಗಿತ್ತು. ಟೆಂಡರ್ನಲ್ಲಿ ಬರೀ 107 ಕೋಟಿ ರೂ. ಎಂದು ನಮೂದಿಸಲಾಗಿದೆ, ಬ್ಲ್ಯಾಕ್ಲಿಸ್ಟ್ನಲ್ಲಿರುವ ಕಂಪೆನಿಗಳಿಗೆ ಗುತ್ತಿಗೆ ಕೊಡುವುದಕ್ಕೂ ನಿಯಮಗಳಲ್ಲಿ ಅವಕಾಶ ಇಲ್ಲ.
ಯೋಜನೆಯ ಅಂದಾಜು ವೆಚ್ಚ 571 ಕೋಟಿ ರೂ. ಎಂಬುದಾಗಿ ತಿಳಿಸಿ ನಂತರ ತಿದ್ದುಪಡಿ ಮಾಡಲಾಗಿದೆ, ಟೆಂಡರ್ನ ಒಟ್ಟು ಮೊತ್ತ ತಿಳಿಸದೇ ಟೆಂಡರ್ ಕರೆಯಲಾಗಿದೆ.
ಅನರ್ಹ ಸಂಸ್ಥೆಗೆ ಟೆಂಡರ್
ಕೆಟಿಪಿಪಿ ಕಾಯ್ದೆಯೂ ಇಲ್ಲ, ಕೇಂದ್ರ ಸರ್ಕಾರದ ನಿಯಮಾವಳಿಗಳನ್ನೂ ಜಾರಿ ಮಾಡಿಲ್ಲ, ಸ್ಮಾರ್ಟ್ ಮೀಟರ್ ತಯಾರಿಸದ, ಅಳವಡಿಸದ, ಡಿಜಿಟಲ್ ಮೀಟರ್ ಅಳವಡಿಸಿದ ವ್ಯಕ್ತಿಯನ್ನೇ ಪರಿಗಣಿಸಲಾಗಿದೆ, ಪ್ರಿಬಿಡ್ನಲ್ಲಿ ರಾಜಶ್ರೀ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ ಸ್ಮಾರ್ಟ್ ಮೀಟರ್ ಗರಿಷ್ಠ ತಯಾರಾಗುತ್ತದೆ, ಅರ್ಹರನ್ನು ಹೊರಗಿಟ್ಟು ಬರೀ ಫೋನ್ ತಯಾರಕರನ್ನು ಆಯ್ಕೆ ಮಾಡಲಾಗಿದೆ, ಕೇಂದ್ರದ ನಿಯಮಗಳ ಪ್ರಕಾರ ಒಂದು ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಸಿದ ಅನುಭವ ಇರಬೇಕು, ಆದರೆ, ಉತ್ಪಾದನೆಯೇ ಮಾಡದ 10 ಲಕ್ಷ ಸಾಮಾನ್ಯ ಮೀಟರ್ ಅಳವಡಿಕೆಯನ್ನೇ ಮಾನದಂಡ ಮಾಡಿಕೊಳ್ಳಲಾಗಿದೆ.
ಮೊದಲು ಟ್ರಾನ್ಸ್ಫಾರ್ಮರ್, ಫೀಡರ್ಗಳಿಗೆ ಇದನ್ನು ಅಳವಡಿಸಿ ಸಾಗಾಟದಲ್ಲಿ ಆಗುವ ನಷ್ಟ ತಿಳಿಯಬೇಕು, ನಂತರ ರಾಜ್ಯದ ಗ್ರಾಹಕರಿಗೆ ಅಳವಡಿಸಬೇಕು, ಕೇಂದ್ರದ ಆರ್ಡಿಎಸ್ಎಸ್ ಅಡಿ ಲಭ್ಯವಿರುವ 3 ಸಾವಿರ ಕೋಟಿ ರೂ. ಬಳಸಿಲ್ಲ ಎಂದರು.
9,260 ರೂ. ಹೆಚ್ಚು ಮೊತ್ತ
ಕಾಂಗ್ರೆಸ್ ಆಳ್ವಿಕೆಯ ಹಿಮಾಚಲ ಪ್ರದೇಶ, ತೆಲಂಗಾಣ, ಕೇರಳದಲ್ಲಿ ಕಡಿಮೆ ಮೊತ್ತಕ್ಕೆ ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ, ಕರ್ನಾಟಕದಲ್ಲಿ ಒಂದು ಮೀಟರ್ಗೆ 17 ಸಾವಿರ ರೂ. ನಿಗದಿಪಡಿಸಲಾಗಿದೆ, ಬೇರೆ ರಾಜ್ಯದಲ್ಲಿ ಪ್ರತಿ ಮೀಟರ್ಗೆ 7,740 ರೂ. ನಿಗದಿಯಾಗಿದೆ, ಬೆಸ್ಕಾಂ ಹಾಗೂ ಮತ್ತಿತರ ಎಸ್ಕಾಂಗೆ ಹೋಲಿಸಿದರೆ ಇದು 9,260 ರೂ. ಹೆಚ್ಚು ಮೊತ್ತವಾಗಿದೆ ಎಂದರು.
ಬಿಹಾರದಲ್ಲೂ ಇದೇ ಮಾದರಿಯ ಹಗರಣ ನಡೆದಿದ್ದು, ಐಎಎಸ್ ಅಧಿಕಾರಿ, ಸಚಿವರು ಬಂಧಿತರಾಗಿದ್ದಾರೆ, ಸ್ಮಾರ್ಟ್ ಮೀಟರ್, ಸಾಫ್ಟ್ವೇರ್, ಔಟ್ಲೆಟ್, ಸಿಬ್ಬಂದಿ ಸಂಬಳವನ್ನು ವೆಚ್ಚವಾಗಿ ತೋರಿಸಲಾಗಿದೆ, ಕೆಟಿಪಿಪಿ ಕಾಯ್ದೆಯನ್ನು ಎಲ್ಲ ಹಂತದಲ್ಲೂ ಉಲ್ಲಂಘಿಸಲಾಗಿದೆ.
ಇದೊಂದು ಹಗಲುದರೋಡೆ, ಸರ್ಕಾರ ಉತ್ತರ ಕೊಡಬೇಕು, ಕಾನೂನು ಇಲ್ಲದೆಯೇ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಲು ಹೊರಟಿದ್ದಾರೆ, ಅಲ್ಲದೆ, ಬ್ಲ್ಯಾಕ್ಲಿಸ್ಟ್ ಆದವರಿಗೆ ಗುತ್ತಿಗೆ ನೀಡಲಾಗಿದೆ.
ರಾಜಕೀಯ ಪ್ರೇರಿತ ಆರೋಪವಲ್ಲ
ನಾವು ಸತ್ಯ ಹೇಳಿದ್ದೇವೆಯೇ ಹೊರತು ಇದು ರಾಜಕೀಯ ಪ್ರೇರಿತ ಆರೋಪವಲ್ಲ, ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಬಿಸಿ ಮುಟ್ಟಿಸುವುದಾಗಿ ಎಚ್ಚರಿಸಿದರು.
ಇಲಾಖಾ ಅಧಿಕಾರಿಗಳು, ಬೆಸ್ಕಾಂ, ಕೆಪಿಟಿಸಿಎಲ್ ಪ್ರಧಾನ ವ್ಯವಸ್ಥಾಪಕರು, ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಏನೂ ತಪ್ಪಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ, ಭ್ರಷ್ಟಾಚಾರ ನಡೆದಿರುವ ಕುರಿತು ದಾಖಲೆಸಮೇತ ತಿಳಿಸಲಾಗುವುದು, ಸದನದಲ್ಲೂ ವಿಷಯ ಪ್ರಸ್ತಾಪವಾಗಿದೆ, ಆದರೆ ಸಚಿವರು ಸ್ಪಷ್ಟ ಉತ್ತರ ನೀಡಿಲ್ಲ ಎಂದರು.