ಮಳವಳ್ಳಿ(ಮಂಡ್ಯ): ರಾಜಕೀಯ ಅಸೂಯೆಯಿಂದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕೆಲಸ ಮಾಡಲು ಬಿಡದೆ, ಹೆಜ್ಜೆ ಹೆಜ್ಜೆಗೂ ಅಡ್ಡಿಪಡಿಸುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಳವಳ್ಳಿ ತಾಲೂಕಿನ ಹಂಡನಹಳ್ಳಿ ಗ್ರಾಮದಲ್ಲಿ ಸಿದ್ದಿ ವಿನಾಯಕ ದೇವರು ಹಾಗೂ ನಾಗದೇವತೆಗಳ ನೂತನ ಶಿಲಾ ಪ್ರತಿಷ್ಠಾಪನೆ ಮತ್ತು ಕುಂಬಾಭಿಷೇಕ ಮಹೋತ್ಸವದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ನೀಡಿದ್ದು, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳ ಯಾವುದೇ ಭಾಗಕ್ಕೆ ಒಂದೆರೆಡು ಕೈಗಾರಿಕೆ ತರಬೇಕುಂದು ಶ್ರಮ ಹಾಕುತ್ತಿದ್ದೇನೆ, ಆದರೆ, ರಾಜ್ಯ ಸರ್ಕಾರ ನನಗೆ ಬೆಂಬಲ ಕೊಡುತ್ತಿಲ್ಲ ಎಂದರು.
ಸ್ಥಳೀಯರಿಗೆ ಉದ್ಯೋಗ
ಕುದುರೆಮುಖ ಕಬ್ಬಿಣ ಮತ್ತು ಅದಿರು ಕಾರ್ಖಾನೆ ರಾಜ್ಯದ ಹೆಮ್ಮೆಯ ಕಾರ್ಖಾನೆಗಳಲ್ಲಿ ಒಂದು, ಮಂಗಳೂರಿನ ಕಡಲದಂಡೆಯಲ್ಲಿ ಅದರ ಪ್ರಮುಖ ಕಾರ್ಖಾನೆ ಇದೆ, ಸಾವಿರಾರು ಸ್ಥಳೀಯರಿಗೆ ಉದ್ಯೋಗ ನೀಡಿದೆ.
ಕುದುರೆಮುಖ ಗಣಿಗಾರಿಕೆ ಸ್ಥಗಿತವಾದ ಮೇಲೆ ಬಳ್ಳಾರಿಯ ಸಂಡೂರಿನ ದೇವದಾರಿಯಲ್ಲಿ 2018ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಹಣ ಪಡೆದುಕೊಂಡು ಅನುಮತಿ ನೀಡಿತ್ತು, ಗಣಿ ಹಂಚಿಕೆ ಮಾಡಲು ಕೋಟಿಗಟ್ಟಲೆ ಹಣ ಪಡೆದು ಅನೇಕ ವರ್ಷವಾದರೂ ಗಣಿ ಮಾಡಿಲ್ಲ, ಅಲ್ಲಿ ಗಣಿಗಾರಿಕೆ ಮಾಡದೆ ಕಾರ್ಖಾನೆಗೆ ಅದಿರು ಸಿಗದಂತಾಯಿತು.
ಉಕ್ಕು ಸಚಿವನಾದ ಕೂಡಲೇ ಅಧಿಕಾರಿಗಳು ಈ ವಿಷಯವನ್ನು ನನ್ನ ಗಮನಕ್ಕೆ ತಂದರು, ರಾಜ್ಯ ಸರ್ಕಾರ ಅಡ್ಡಿ ಮಾಡುತ್ತಿರುವ ಬಗ್ಗೆ ತಿಳಿಸಿದರು, ಕುದುರೆಮುಖ ಕಂಪನಿಗೆ ಬಳ್ಳಾರಿಯಲ್ಲಿ ಗಣಿಗಾರಿಕೆ ಮಾಡಲು ಹಣದ ಅವಶ್ಯಕತೆ ಇತ್ತು, 1,700 ಕೋಟಿ ರೂ. ಮೊತ್ತದ ಹಣಕಾಸು ನೆರವು ಕೊಡುವ ಪ್ರಸ್ತಾವನೆ ವಿತ್ತ ಸಚಿವಾಲಯಕ್ಕೆ ಹೋಗುವ ಕಡತಕ್ಕೆ ಸಹಿ ಹಾಕಿದೆ.
ಕೆಲಸ ಕಳೆದುಕೊಂಡರು
ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಸಚಿವನಾಗಿ ಮೊತ್ತ ಮೊದಲ ಸಹಿ ಹಾಕಿದೆ, ರಾಜಕೀಯವಾಗಿ ನನ್ನ ವಿರುದ್ಧ ಅಸೂಯೆ ಪಡುತ್ತಿರುವ ರಾಜ್ಯ ಸರ್ಕಾರ ಅದಕ್ಕೆ ಅಡ್ಡಿಪಡಿಸಿತು, ಮಂಗಳೂರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎರಡು ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡರು.
ಕೊನೆಗೆ ಕುದುರೆಮುಖ ಸಂಸ್ಥೆ ರಾಷ್ಟ್ರೀಯ ಖನಿಜಾವೃದ್ಧಿ ನಿಗಮದಲ್ಲಿ ವಿಲೀನ ಮಾಡುವ ನಿರ್ಧಾರ ಕೈಗೊಂಡೆ, ಹೆಚ್ಎಂಟಿ ಅಭಿವೃದ್ಧಿ ವಿಷಯದಲ್ಲೂ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತ ಅಡ್ಡಗಾಲು ಹಾಕುತ್ತಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವೈಜಾಗ್ ಕಾರ್ಖಾನೆ ಪುನಃಶ್ಚೇತನ ಉದ್ದೇಶದಿಂದ ಹಲವು ಬಾರಿ ನನ್ನನ್ನು ಭೇಟಿಯಾಗಿ, ಸಭೆಗಳಿಗೆ ಬಂದರು, ಆ ರಾಜ್ಯದ ನಾಯಕರು ಪಕ್ಷಾತೀತವಾಗಿ ಬೇಡಿಕೆ ಇಟ್ಟರು, ಅವರ ಬದ್ಧತೆ ನಮ್ಮ ಸರ್ಕಾರಕ್ಕೆ ಏಕಿಲ್ಲ, ನಮ್ಮ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೆರೆಸುವುದು ಎಷ್ಟು ಸರಿ, ಇದರಿಂದ ಯಾರಿಗೆ ನಷ್ಟ, ಯುವಜನರಿಗೆ ಉದ್ಯೋಗ ದೊರೆಯುತ್ತಿಲ್ಲ, ಅದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.
ಒಳ್ಳೆ ಕೆಲಸ ಬೆಂಬಲಿಸುತ್ತಿಲ್ಲ
ಅಭಿವೃದ್ಧಿಯಲ್ಲಿ ಕೂಡ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ, ತಮ್ಮ ರಾಜಕೀಯ ವಿರೋಧಿಗಳಿಗೆ ಸಹಕಾರ ನೀಡುವುದಿರಲಿ, ಅವರ ಒಳ್ಳೆಯ ಕೆಲಸಗಳನ್ನು ಬೆಂಬಲಿಸುವುದನ್ನೂ ಮಾಡುತ್ತಿಲ್ಲ, ಹೀಗಾದರೆ ರಾಜ್ಯಕ್ಕೆ ಕೈಗಾರಿಕೆಗಳು ಎಲ್ಲಿಂದ ಬರುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
ಮಂಡ್ಯ ಜನರು ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದೀರಿ, ನಿಮ್ಮ ಋಣ ತೀರಿಸುತ್ತೇನೆ, ಇಲ್ಲಿ ದೇವರ ಕಾರ್ಯದಲ್ಲಿ ಭಾಗಿಯಾಗಿದ್ದೇನೆ, ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ, ಮಂಡ್ಯ ಜನರ ನಿರೀಕ್ಷೆಗಳನ್ನು ತಪ್ಪದೇ ಈಡೇರಿಸುತ್ತೇನೆ ಎಂದು ವಚನ ನೀಡಿದರು.
ಶುಭ ಕಾರ್ಯಗಳು, ದೇವರ ಕಾರ್ಯಗಳು ರಾಜಕೀಯ, ಪಕ್ಷ ರಾಜಕೀಯಕ್ಕೆ ಮೀರಿ ನಡೆಯಬೇಕು, ಹಳ್ಳಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸಬಾರದು, ನಮ್ಮ ಬಾಲ್ಯ ಹೇಗಿತ್ತು ಎಂಬುದನ್ನು ನೆನೆಪು ಮಾಡಿಕೊಂಡರೆ ಈಗಲೂ ಭಾವುಕನಾಗುತ್ತೇನೆ.
ನಾವು ಸಂಕುಚಿತರಾಗುತ್ತಿದ್ದೇವೆ
ಹಿಂದಿನ ದಿನಗಳಲ್ಲಿ ಯಾವುದೇ ಸೌಲಭ್ಯ ಇರಲಿಲ್ಲ, ತಾಂತ್ರಿಕತೆ ಅನುಕೂಲಗಳು ಕಡಿಮೆ ಇದ್ದವು, ಆಗ ಎಲ್ಲರೂ ಪರಸ್ವರ ಅನ್ಯೋನ್ಯತೆ, ಪ್ರೀತಿ ವಿಶ್ವಾಸದಿಂದ ಬದುಕುತ್ತಿದ್ದರು, ಅಂತಹ ವಾತಾವರಣ ಇಲ್ಲವಾಗಿದೆ, ನಾವು ಸಂಕುಚಿತರಾಗುತ್ತಿದ್ದೇವೆ ಎಂದರು.
ಯಾರ ಮನೆಯಲ್ಲಾದರೂ ಮದುವೆ ನಡೆದರೆ ಇಡೀ ಊರಿಗೆ ಊರೇ ನೆರೆದಿರುತ್ತಿತ್ತು, ಸೌದೆ ಒಡೆಯುವುದರಿಂದ ಮೊದಲುಗೊಂಡು, ಚಪ್ಪರ ಹಾಕುವುದು, ಅಡುಗೆ ಮಾಡುವುದು, ಬಡಿಸುವುದು ಎಲ್ಲವನ್ನೂ ಊರಿನ ಜನರೇ ಮಾಡುತ್ತಿದ್ದರು, ಪಂಕ್ತಿಯಲ್ಲಿ ಕೂತು ಬೂಂದಿ, ಪಾಯಸ ಸವಿಯುತ್ತಿದ್ದ ದಿನಗಳು ನನಗೆ ಇನ್ನೂ ನೆನಪಿವೆ.
ಆದಿಚುಂಚನಗಿರಿ ಮಹಾಸಂಸ್ಥಾನದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ರಾಮನಗರ ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರ ಸ್ವಾಮೀಜಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.