ಬೆಂಗಳೂರು:ನಿವೃತ್ತ ಪೋಲಿಸ್ ಮಹಾನಿರ್ದೇಶಕ (ಡಿಜಿಪಿ) ಓಂ ಪ್ರಕಾಶ್ ಹತ್ಯೆ ಪ್ರಕರಣದ ಸಮಗ್ರ ತನಿಖೆ ಮುಗಿಯುವವರೆಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಂ ಪ್ರಕಾಶ್ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ, ಇದರಲ್ಲಿ ದೊರೆಯುವ ಮಾಹಿತಿ ಪರಿಶೀಲಿಸಬೇಕಿದೆ, ಒಳ್ಳೆಯ ಅಧಿಕಾರಿ, ಒಳ್ಳೆ ವ್ಯಕ್ತಿ, ಈ ರೀತಿ ಆಗಬಾರದಿತ್ತು ಎಂದರು.

ಕೌಟುಂಬಿಕ ಸಮಸ್ಯೆ ದೂರು
ಘಟನೆಗೆ ಇಂತಹುದೇ ಕಾರಣ ಎಂದು ಹೇಳಲಾಗದು, ಕೌಟುಂಬಿಕ ಸಮಸ್ಯೆ ಬಗ್ಗೆ ಈ ಹಿಂದೆ ದೂರು ಕೊಟ್ಟಿರುವುದನ್ನೂ ತನಿಖೆ ವೇಳೆ ಪರಿಶೀಲಿಸಲಾಗುತ್ತದೆ.
ಸಮಗ್ರವಾಗಿ ತನಿಖೆ ಆಗುವವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ, ಓಂಪ್ರಕಾಶ್ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ, ಪತ್ನಿಯ ಕಾಯಿಲೆ ಕುರಿತು ಈಗಲೇ ಹೇಳಲಾಗದು.
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿಗೆ ಯಾವ ಶಸ್ತ್ರ ಬಳಸಿದ್ದರು, ಅದಕ್ಕೆ ಏನಾದರು ಕುರುಹು ಸಿಗುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ, ಗಂಭೀರ ತನಿಖೆ ನಡೆಸುವಂತೆ ಸೂಚಿಸಲಾಗಿದೆ, ಇಂತಹ ಘಟನೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಜೆಪಿ ಅನವಶ್ಯಕ ಆರೋಪ
ಬಿಜೆಪಿ ಎಲ್ಲ ವಿಷಯದಲ್ಲೂ ಆರೋಪ ಮಾಡುತ್ತಾರೆ, ಸಕಾರಾತ್ಮಕ ಟೀಕೆ ಮಾಡುವಂತೆ ಹೇಳುತ್ತೇವೆ, ಅನವಶ್ಯಕ ಆರೋಪ ಮಾಡುವುದರಿಂದ ಪ್ರಯೋಜನವಿಲ್ಲ, ಜಾತಿ ಗಣತಿ ಮೂಲ ಪ್ರತಿ ಇಲ್ಲದೇ ವರದಿ ಸಿದ್ಧಪಡಿಸಲು ಹೇಗೆ ಸಾಧ್ಯ.
ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡುವಾಗ ವಿರೋಧ ಪಕ್ಷದ ಆರೋಪಗಳನ್ನು ಗಮನಿಸುತ್ತೇವೆ, ಗಂಭೀರ ಆರೋಪಗಳ ಕುರಿತು ಚರ್ಚೆ ಮಾಡುತ್ತೇವೆ.
ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸುವಲ್ಲಿ ಈವರೆಗೆ ಹತ್ತು ಸಮಿತಿಗಳ ರಚನೆಯಾಗಿದೆ, ಕೆಲವು ಸಮಿತಿಗಳು ಸಮೀಕ್ಷೆ ಮಾಡಿವೆ, ಕೆಲವು ಸ್ಯಾಂಪಲ್ ಡೇಟಾ ಸಂಗ್ರಹಿಸಿ ವರದಿ ಮಾಡಿವೆ, ಇದೇ ಮೊದಲನೇ ಬಾರಿಗೆ ಸಂಪೂರ್ಣ ಡೇಟಾ ಸಂಗ್ರಹಿಸಿ ವರದಿ ನೀಡಲಾಗಿದೆ, ಇದಕ್ಕೆ ಹೆಚ್ಚು ಮಹತ್ವ ಬರುತ್ತದೆಯೇ ಹೊರತು ಬೇರೆ ಯಾವುದಕ್ಕೂ ಅಲ್ಲ ಎಂದರು.
ಸ್ಥಿತಿಗತಿ ಅಧ್ಯಯನ
ಮೂಲವಾಗಿ ನೋಡಬೇಕಿರುವುದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ವರದಿ, ಆ ದೃಷ್ಟಿಯಲ್ಲಿ ಸ್ವಾಭಾವಿಕವಾಗಿ ಜನಗಣತಿ ಆಗಬೇಕಾಗುತ್ತದೆ, ಸಮುದಾಯಗಳು ಹಿಂದುಳಿದಿದ್ದಾವೆಯೇ ಅಥವಾ ಮುಂದುವರಿದಿವೆಯೇ ಎಂಬುದರ ಅಧ್ಯಯನ ಮಾಡಿ ಹೇಳಲು ಆಯಾ ಜಾತಿಯ ಸಂಖ್ಯೆ ನೋಡಬೇಕಾಗುತ್ತದೆ.
ಅದರ ಆಧಾರದ ಮೇಲೆ ವಿಶ್ಲೇಷಣೆಗಳಾಗುತ್ತವೆ, ಕೆಲವರು ಸರಿ ಇದೆ ಎನ್ನುತ್ತಾರೆ, ಇನ್ನು ಕೆಲವರು ಸರಿ ಇಲ್ಲ ಎನ್ನುತ್ತಾರೆ, ಚರ್ಚೆ, ವಿಶ್ಲೇಷಣೆ, ತಪ್ಪು-ಒಪ್ಪುಗಳ ಅಧ್ಯಯನ ಮಾಡಿ ನಂತರ ಸರ್ಕಾರ ಅಂತಿಮ ತೀರ್ಮಾನಕ್ಕೆ ಬರಬೇಕಾಗುತ್ತದೆ.
ಆ ಪ್ರಕ್ರಿಯೆ ಪ್ರಾರಂಭವಾಗಿದೆ, ಕ್ಯಾಬಿನೆಟ್ನಲ್ಲಿ ಚರ್ಚೆಯಾಗಿದೆ, ಆದರೆ, ಸಂಪೂರ್ಣ ಚರ್ಚೆಯಾಗಿಲ್ಲ ಎಂಬ ಕಾರಣಕ್ಕೆ ನಿರ್ಧಾರ ಮುಂದೂಡಲಾಗಿದೆ, ಮುಂದೊಂದು ದಿನ ಚರ್ಚೆ ಮಾಡುತ್ತೇವೆ, ಬಹಳಷ್ಟು ಮಂತ್ರಿಗಳು ತಮ್ಮ ಸಮುದಾಯಗಳ ಬಗ್ಗೆ ಮಾತನಾಡಿದ್ದಾರೆ, ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರು.
