ಬೆಂಗಳೂರು:ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡೋ ಧಮ್ ಇದೆಯಾ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಉತ್ತರನ ಪೌರುಷ ಒಲೆಯ ಮುಂದೆ” ಎನ್ನುವ ಹಾಗೆ ನಿಮ್ಮ ಪ್ರತಾಪ ಬರೀ ಮಾಧ್ಯಮಗಳ ಮುಂದೆ ಡೈಲಾಗ್ ಹೊಡೆಯೋದಕ್ಕೆ ಮಾತ್ರ ಸೀಮಿತನಾ.
ಇಂದಿರಾ ಗಾಂಧಿಗೆ ಕಪ್ಪು ಬಾವುಟ
ರಾಜ್ಯದಲ್ಲಿ ಬಿಜೆಪಿಗೆ ಒಂದೇ ಒಂದು ಸಭೆ ಮಾಡಲೂ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದೀರಲ್ಲ, ನಿಮಗೆ ನಿಜವಾಗಿಯೂ ತಾಕತ್ತಿದ್ದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಕಪ್ಪು ಬಾವುಟ ತೋರಿಸಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಪಕ್ಷದಿಂದ ಉಚ್ಛಾಟನೆ ಮಾಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ನಿಮ್ಮ ಪಕ್ಷದ ಸರ್ವೋಚ್ಚ ನಾಯಕಿ ಪ್ರಧಾನಿ ಆಗಿದ್ದಾಗ ಕಪ್ಪು ಬಾವುಟ ತೋರಿಸಿದ್ದ ವ್ಯಕ್ತಿಯನ್ನ ಪಕ್ಷಕ್ಕೆ ಕರೆತಂದು ಎರಡು ಬಾರಿ ಮುಖ್ಯಮಂತ್ರಿ ಮಾಡಿ, ಅವರ ಋಣದಲ್ಲಿ ಅಧಿಕಾರ ಅನುಭವಿಸುತ್ತಿದ್ದೀರಲ್ಲ, ಬಿಜೆಪಿ ಮಾಡುವ ಪ್ರತಿಭಟನೆಗೆ ಧಮ್ಕಿ ಹಾಕುವ ಯಾವ ನೈತಿಕತೆ ನಿಮಗಿದೆ ಎಂದಿದ್ದಾರೆ.
