ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ ಮಾಸ್ಕ್ ಧರಿಸುವುದು ಕಡ್ಡಾಯ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ವರ, ಶೀತ, ನೆಗಡಿ ಇದ್ದವರು, ಜನದಟ್ಟಣೆ ಸ್ಥಳಗಳಲ್ಲಿ ಹಿರಿಯರು ಹಾಗೂ ಗರ್ಭಿಣಿಯರು ಮಾಸ್ಕ್ ಧರಿಸಬೇಕು.
ಹವಾಮಾನ ವೈಪರೀತ್ಯ
ಈ ಬಾರಿ ನಿಗದಿತ ಸಮಯಕ್ಕೂ ಮುನ್ನವೇ ಮಳೆ ಹೆಚ್ಚಾಗಿರುವುದು ಮತ್ತು ಹವಾಮಾನ ವೈಪರೀತ್ಯದಿಂದ ಶೀತ ಸಮಸ್ಯೆ ಎದುರಾಗಿದೆ.
ಸರ್ಕಾರ ತೀವ್ರ ನಿಗಾ ವಹಿಸಿದ್ದು ಕೋವಿಡ್ ಪ್ರಕರಣಗಳು ಕಂಡುಬರುತ್ತಿದ್ದರೂ ತೀವ್ರವಾಗಿ ಹರಡುತ್ತಿಲ್ಲ, ಆದ್ದರಿಂದ ಸಾರ್ವಜನಿಕರಲ್ಲಿ ಭಯಭೀತಿ ಬೇಡ, ಆದರೆ, ಎಚ್ಚರ ವಹಿಸಿ ಎಂದರು.
ಸರ್ಕಾರ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ, ಕೋವಿಡ್ ಲಸಿಕೆ ಪಡೆಯಲು ಇಚ್ಛಿಸುವವರು, ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದಾಗಿದ್ದು, ವ್ಯವಸ್ಥೆ ಮಾಡಲಾಗಿದೆ.
ಪೋಷಕರಿಗೆ ಕರೆ ಮಾಡಿ
ಬೇಸಿಗೆ ರಜೆ ಬಳಿಕ ಶಾಲೆಗಳು ಪ್ರಾರಂಭವಾಗಲಿದ್ದು ವಿದ್ಯಾರ್ಥಿಗಳಿಗೆ ಜ್ವರ, ಶೀತ, ಕೆಮ್ಮು ಶಾಲೆಗಳಿಗೆ ಕಳುಹಿಸಬೇಡಿ, ಒಂದು ವೇಳೆ ಶಾಲೆಯಲ್ಲಿ ಮಕ್ಕಳಿಗೆ ಶೀತ, ನೆಗಡಿ ಆರಂಭವಾದರೆ, ಕೂಡಲೇ ಪೋಷಕರಿಗೆ ದೂರವಾಣಿ ಕರೆ ಮಾಡಿ ಕಳುಹಿಸಿಕೊಡಬೇಕು.
ವೈದ್ಯಕೀಯ ಶಿಕ್ಷಣ ಇಲಾಖೆಯ ಎಲ್ಲ ಆಸ್ಪತ್ರೆ ನಿರ್ದೇಶಕರೊಂದಿಗೆ ಸಭೆ ನಡೆಸಲಾಗಿದೆ, ಲ್ಯಾಬ್ ವ್ಯವಸ್ಥೆ, ನಾಲ್ಕು ವಿಭಾಗಗಳಲ್ಲಿ ಟೆಸ್ಟಿಂಗ್, ಆಕ್ಸಿಜನ್, ಹಾಸಿಗೆ, ವೆಂಟಿಲೇಟರ್ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಕೋವಿಡ್ ಲಸಿಕೆ
ಬೆಂಗಳೂರಿನಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ, ದೊಡ್ಡ ಪ್ರಮಾಣದಲ್ಲಿ ಹರಡುತ್ತಿಲ್ಲ, ಜನತೆ ಆತಂಕಕ್ಕೆ ಒಳಗಾಗದೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿದರೆ ಎಲ್ಲರಿಗೂ ಕ್ಷೇಮ, ಜನರಿಗೆ ಈಗಾಗಲೇ ಕೋವಿಡ್ ಲಸಿಕೆ ನೀಡಲಾಗಿದೆ, ಮತ್ತೆ ಅವಶ್ಯಕತೆ ಇದ್ದಲ್ಲಿ ಕೇಂದ್ರ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ವ್ಯಾಕ್ಸಿನ್ ತರಿಸಲಾಗುವುದು.
ಕೋವಿಡ್ ಟೆಸ್ಟ್ಗೆ ಅಗತ್ಯವಿರುವ ಸೌಲಭ್ಯಗಳ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ, ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ ಮಾಸ್ಕ್ ಧರಿಸಬೇಕು, ಔಷಧ ಲಭ್ಯತೆ ಹಾಗೂ ಆಕ್ಸಿಜನ್ ಬೆಡ್ಗಳ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದರು.

