ಬೆಂಗಳೂರು:ಅಧಿಕಾರ ಹಂಚಿಕೆ ವೇಳೆ ನಡೆದ ಒಪ್ಪಂದದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿ ಮುಗಿದಿದ್ದು, ನನಗೆ ಅಧಿಕಾರ ಹಸ್ತಾಂತರಿಸಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ವರಿಷ್ಠರ ಮುಂದೆ ಪಟ್ಟು ಹಿಡಿದಿದ್ದಾರೆ.
“ಜೈ ಹಿಂದ್ ಸಭಾ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಆಗಮಿಸಿರುವ ಕಾಂಗ್ರೆಸ್ನ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ನಿನ್ನೆ ರಾತ್ರಿ ರೇಸ್ಕೋರ್ಸ್ ರಸ್ತೆಯಲ್ಲಿರುವ ಪಂಚತಾರಾ ಹೋಟೆಲೊಂದರಲ್ಲಿ ಭೇಟಿ ಮಾಡಿದ ಶಿವಕುಮಾರ್ ಹಕ್ಕೋತ್ತಾಯ ಮಂಡಿಸಿದ್ದಾರೆ.
ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಿ
ಅಧಿಕಾರ ಬಿಟ್ಟುಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಕೋರಿದ್ದೇನೆ, ಅಲ್ಲದೆ, ಈ ಸಂಬಂಧ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗಮನಕ್ಕೂ ತಂದಿರುವ ವಿಚಾರ ನಿಮಗೂ ತಿಳಿದಿದೆ.
ಅಂದು ಆಗಿರುವ ಒಪ್ಪಂದದಂತೆ ಮೊದಲ ಎರಡು ವರ್ಷ ಸಿದ್ದರಾಮಯ್ಯ, ನಂತರದ ಸಮಯದಲ್ಲಿ ನನಗೆ ಅಧಿಕಾರ ಎಂಬುದಾಗಿ ನೀವುಗಳೇ ಸೂತ್ರ ರಚಿಸಿದ್ದಿರಿ.
ಆದರೆ, ಇದೀಗ ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸೂತ್ರ ಪ್ರಕಾರ ಅಧಿಕಾರ ಕೊಡಿಸಿ
ನಿಮ್ಮ ಸೂತ್ರದ ಪ್ರಕಾರ ನನಗೆ ಅಧಿಕಾರ ಕೊಡಿಸಬೇಕು, ಈಗ ಬಿಟ್ಟರೆ ಮುಂದೆ ಮುಖ್ಯಮಂತ್ರಿ ಆಗುವುದಕ್ಕೆ ಅಡೆ-ತಡೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ಪಕ್ಷ ಸಂಘಟನೆ ವಿಚಾರದಲ್ಲಿ ನನ್ನ ಬಗ್ಗೆ ನಿಮಗೆ ಎಲ್ಲವೂ ತಿಳಿದಿದೆ, ಅದೇ ರೀತಿ ಉತ್ತಮ ಆಡಳಿತ ನೀಡಿ ಕಾಂಗ್ರೆಸ್ ಅನ್ನು ರಾಜ್ಯದಲ್ಲಿ ಪುನಃ ಅಧಿಕಾರಕ್ಕೆ ತರುವ ಭರವಸೆ ನೀಡುತ್ತೇನೆ ಎಂದಿದ್ದಾರೆ.
ಜೊತೆಗೆ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ಹಾಗೂ ನನ್ನ ಸಹೋದರ ಡಿ.ಕೆ.ಸುರೇಶ್ ಅವರನ್ನು ನೇಮಿಸಿ, ಈ ಕುರಿತು ನೀವುಗಳು ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿ.
ಹಾಲು ಒಕ್ಕೂಟ ಅಧ್ಯಕ್ಷ ಸ್ಥಾನ
ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಸುರೇಶ್ ಕರ್ನಾಟಕ ಹಾಲು ಒಕ್ಕೂಟಕ್ಕೆ ಆಯ್ಕೆಗೊಂಡಿದ್ದಾರೆ, ಹಾಲಿ ಅಧ್ಯಕ್ಷರ ಆಡಳಿತಾವಧಿ ಜೂನ್ಗೆ ಮುಗಿಯಲಿದೆ, ನಂತರ ನಡೆಯುವ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನನ್ನ ಸಹೋದರ ಸ್ಪರ್ಧಿಸಲಿದ್ದಾರೆ ಎಂದಿದ್ದಾರೆ.
ಶಿವಕುಮಾರ್ ಮಾತಿಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಹಾ ಸಮ್ಮತಿಸಿದ್ದಾರೆ.
ಉಪಮುಖ್ಯಮಂತ್ರಿ ಮಾತನ್ನು ತಾಳ್ಮೆಯಿಂದ ಆಲಿಸಿದ ವೇಣುಗೋಪಾಲ್, ನವೆಂಬರ್ ವೇಳೆಗೆ ನಿಮಗೆ ಧಕ್ಕಬೇಕಾದ ಸ್ಥಾನ ದೊರೆಯಲಿದೆ, ನೀವು ಆತಂಕಗೊಳ್ಳುವುದು, ದುಡುಕುವುದು ಬೇಡ, ಸಮಾಧಾನದಿಂದಿರಿ ಎಂದು ಸಲಹೆ ಮಾಡಿದ್ದಾರೆ.

