ಬೆಂಗಳೂರು:ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರುಗಳನ್ನು ಹೊರಗಿಟ್ಟು ಬಿಜೆಪಿಯ ಹೊಸ ಕೋರ್ ಕಮಿಟಿ ರಚನೆಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಂದಾಗಿದ್ದಾರೆ.
ಅಲ್ಲದೆ, ಹಿಂದುಳಿದ ವರ್ಗದ ಯಾವುದೇ ನಾಯಕರಿಗೆ ಪಕ್ಷದ ಉನ್ನತ ಮಟ್ಟದ ಈ ಸಮಿತಿಯಲ್ಲಿ ಅವಕಾಶ ನೀಡಿಲ್ಲ.
ಪ್ರಮುಖ ಸಭೆಗಳಿಂದ ದೂರ
ಪಟ್ಟಿಯಿಂದ ನಮ್ಮನ್ನು ಕೈಬಿಡಲಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಅಶೋಕ್, ಕಳೆದ ವಾರ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸೇರಿದಂತೆ ಪ್ರಮುಖ ಸಭೆಗಳಿಂದ ದೂರ ಉಳಿದಿದ್ದಾರೆ.
ವಿಜಯೇಂದ್ರ ಮತ್ತು ಅಶೋಕ್ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಮತ್ತಷ್ಟು ಉಲ್ಬಣಗೊಂಡಿದೆ.
ರಾಜ್ಯಾಧ್ಯಕ್ಷರು ಹೇಳುವುದನ್ನು ಅಶೋಕ್ ಪಾಲಿಸುತ್ತಿಲ್ಲ, ಪ್ರತಿಪಕ್ಷ ನಾಯಕರು ಹೇಳುವುದನ್ನು ವಿಜಯೇಂದ್ರ ಪಾಲನೆ ಮಾಡದೆ, ವಿರುದ್ಧ ದಿಕ್ಕಿನಲ್ಲಿ ಉಭಯ ನಾಯಕರು ನಡೆಯುತ್ತಿರುವುದು ಪಕ್ಷದ ವರಿಷ್ಠರು ಮತ್ತು ರಾಜ್ಯ ನಾಯಕರಿಗೆ ತಲೆ ನೋವಾಗಿದೆ.
ಹೊರಗಿಡಲು ಸಾಧ್ಯವಿಲ್ಲ
ಪಕ್ಷ ಅಧಿಕಾರದಲ್ಲಿದ್ದರೆ, ಮುಖ್ಯಮಂತ್ರಿ, ಇಲ್ಲವೇ ಪ್ರತಿಪಕ್ಷವಾಗಿದ್ದರೆ ಶಾಸಕಾಂಗ ಪಕ್ಷದ ನಾಯಕರನ್ನು ಕೋರ್ ಕಮಿಟಿಯಿಂದ ಹೊರಗಿಡಲು ಸಾಧ್ಯವಿಲ್ಲ.
ಆದರೂ, ಅಶೋಕ್ ಅಲ್ಲದೆ, ಹಿಂದುಳಿದ ವರ್ಗದವರಿಗೂ ಅವಕಾಶ ನೀಡದೆ, ಕೋರ್ ಕಮಿಟಿ ಪುನರ್ ರಚಿಸಿ ವರಿಷ್ಠರ ಅನುಮತಿಗೆ ಕಳುಹಿಸಿರುವುದು ರಾಜ್ಯ ಬಿಜೆಪಿಯಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿದೆ.
ವಿಧಾನಸಭೆ ಒಳಗೆ ಹಾಗೂ ಹೊರಗೆ ವಿಜಯೇಂದ್ರ ಮತ್ತು ಅಶೋಕ್ ತಮ್ಮ ತಮ್ಮ ಅನಿಸಿಕೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ.
ತಮ್ಮವರದೇ ಮೇಲುಗೈ
ಅಶೋಕ್, ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್ ಸೇರಿದಂತೆ ಕೆಲವು ಹಿರಿಯ ಮುಖಂಡರು ವಿಜಯೇಂದ್ರ ವಿರುದ್ಧ ಇದ್ದರೂ ಕಡೆಗಣಿಸಿ ಪಕ್ಷದ ಪದಾಧಿಕಾರಿ ಹಾಗೂ ಜಿಲ್ಲಾಧ್ಯಕ್ಷರ ನೇಮಕಾತಿಯಲ್ಲಿ ತಮ್ಮವರದೇ ಮೇಲುಗೈ ಮಾಡಿಕೊಂಡಿದ್ದಾರೆ.
ಕೋರ್ ಕಮಿಟಿಯಲ್ಲಿ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಹೆಚ್ಚು ಪ್ರಾತಿನಿಧ್ಯ ನೀಡಿದ್ದು, ಪರಿಶಿಷ್ಟರಲ್ಲಿ ಎಡಗೈ ಮತ್ತು ಬಲಗೈಗೆ ತಲಾ ಒಂದು ಸ್ಥಾನ ಹಾಗೂ ಅಲ್ಪಸಂಖ್ಯಾತರೊಬ್ಬರಿಗೆ ಸ್ಥಾನ ನೀಡಲಾಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ವಿಧಾನ ಪರಿಷತ್ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಜಯೇಂದ್ರ ಸಿದ್ಧಪಡಿಸಿರುವ ಕೋರ್ ಕಮಿಟಿಯಲ್ಲಿದ್ದಾರೆ.
ಕೇಂದ್ರ ಸಚಿವರೂ ಇಲ್ಲ
ಪ್ರಲ್ಹಾದ್ ಜೋಷಿ ಸೇರಿದಂತೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಅವರಿಗೂ ಅವಕಾಶ ನೀಡಿಲ್ಲ.
ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅವರನ್ನು ಕೈಬಿಟ್ಟು ತಮ್ಮ ಆಪ್ತ, ಮಾಜಿ ಶಾಸಕ ನಂದೀಶ್ ರೆಡ್ಡಿಗೆ ಅವಕಾಶ ನೀಡಲಾಗಿದೆ.
ಅಗರ್ವಾಲ್ ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ವೇಳೆ ಸರಣಿ ಸಭೆ ಹಾಗೂ ಕೋರ್ ಕಮಿಟಿ ಸಭೆ ನಂತರ ವಿಜಯೇಂದ್ರ ಅವರು, ಉನ್ನತ ಸಮಿತಿ ಪುನರ್ ರಚನೆಯನ್ನು ಅವರ ಗಮನಕ್ಕೆ ತಂದು ಪಟ್ಟಿ ಸಿದ್ಧಪಡಿಸಿದ್ದಾರೆ.
ಚರ್ಚಿಸಿ ತೀರ್ಮಾನ
ಅಶೋಕ್ ಸೇರಿದಂತೆ ಕೆಲವರ ಹೆಸರು ಕೈಬಿಟ್ಟಿರುವುದನ್ನು ಗಮನಿಸಿದ ಅಗರ್ವಾಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಹಾಗೂ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೊಂದಿಗೆ ಚರ್ಚಿಸಿ ಪಟ್ಟಿ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷರ ನೇಮಕಾತಿ ಮಾದರಿಯಲ್ಲೇ ಕೋರ್ ಕಮಿಟಿ ರಚಿಸಿದ್ದು, ಇದಕ್ಕೆ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುವರೆಂಬುದನ್ನು ಕಾದುನೋಡಬೇಕಿದೆ.

