ಬೆಂಗಳೂರು:ರಾಷ್ಟ್ರಾದ್ಯಂತ ಹಿಂದುಳಿದ ಸಮುದಾಯಗಳನ್ನು ಪಕ್ಷಕ್ಕೆ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಸಿದ್ದರಾಮಯ್ಯ ಅವರಿಗೆ ರಾಷ್ಟ್ರಮಟ್ಟದಲ್ಲಿ ಅಧಿಕಾರ ದೊರಕಿಸಿಕೊಡುವ ಮೂಲಕ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಿನ ದಿನಗಳಲ್ಲಿ ರಾಜ್ಯ ನಾಯಕತ್ವ ವಹಿಸಿಕೊಳ್ಳಲು ಎಐಸಿಸಿ ದಾರಿ ಸುಗಮಗೊಳಿಸಿದೆ.
ರಾಷ್ಟ್ರಮಟ್ಟದ ಸೇವೆಗೆ ಆಹ್ವಾನ
ಮುಖ್ಯಮಂತ್ರಿ ಮತ್ತು ಅವರ ಆಪ್ತ ಸಚಿವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರಮಟ್ಟದ ಸೇವೆಗೆ ಬನ್ನಿ ಎಂದು ಆಹ್ವಾನ ನೀಡಿದ್ದರು.
ಅಷ್ಟೇ ಅಲ್ಲ, ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ನೀವು ದೆಹಲಿ ರಾಜಕಾರಣಕ್ಕೆ ಪ್ರವೇಶ ಮಾಡಿ ಎಂದ ಬೆನ್ನಲ್ಲೇ ಅವರಿಗೆ ಎಐಸಿಸಿ ಮಟ್ಟದ ಉನ್ನತ ಹುದ್ದೆ ದೊರಕಿಸಿಕೊಟ್ಟಿದ್ದಾರೆ.
ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಗೆ ಸಿದ್ದರಾಮಯ್ಯ ಅಧ್ಯಕ್ಷರಾದರೆ ಉಳಿದ 23 ಮಂದಿ ಸದಸ್ಯರುಗಳಿದ್ದು, ಅದರಲ್ಲಿ ಕೇಂದ್ರದ ಮಾಜಿ ಸಚಿವರುಗಳು, ನಾಲ್ವರು ಮಾಜಿ ಮುಖ್ಯಮಂತ್ರಿಗಳು, ಎಐಸಿಸಿ ಮಟ್ಟದಲ್ಲಿ ಪ್ರಧಾನಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು ಹಾಗೂ ಉತ್ತರ ಭಾರತದ ವರ್ಚಸ್ವಿ ಮುಖಂಡರಿದ್ದಾರೆ.
ವಿಧಾನಸಭಾ ಚುನಾವಣೆ
ಬಿಹಾರ ಸೇರಿದಂತೆ ಈ ವರ್ಷ ಎದುರಾಗಲಿರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಈ ಸಲಹಾ ಮಂಡಳಿ ರಚಿಸಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಮಟ್ಟದಲ್ಲಿ ಪಕ್ಷದ ಚುಕ್ಕಾಣಿ ಹಿಡಿದಿದ್ದರೆ, ಸಿದ್ದರಾಮಯ್ಯ ವರ್ಚಸ್ಸು ಬಳಸಿಕೊಂಡು ದೇಶಾದ್ಯಂತ ಹಿಂದುಳಿದ ಸಮುದಾಯದ ಮತಗಳನ್ನು ಸೆಳೆಯಲು ರಾಹುಲ್ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುಂಚೂಣಿಗೆ ಬಂದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಎಐಸಿಸಿ ನಾಯಕರಿಗೆ ದೊಡ್ಡ ತಲೆ ನೋವಾಗಿತ್ತು.

ಒಂದೇ ಕಲ್ಲಿಗೆ ಎರಡು ಹಣ್ಣು
ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಜೊತೆಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಸರ್ಕಾರ ಉಳಿಸಿಕೊಳ್ಳಲು ಒಂದೇ ಕಲ್ಲಿಗೆ ಎರಡು ಹಣ್ಣು ಉದುರಿಸಿದ್ದಾರೆ.
ಎಐಸಿಸಿ ಆದೇಶದಂತೆ ಸಿದ್ದರಾಮಯ್ಯ ಸಲಹಾ ಮಂಡಳಿ ನಾಯಕತ್ವ ವಹಿಸಿಕೊಂಡಿರುವುದಲ್ಲದೆ, ಮೊದಲ ಸಭೆಯನ್ನೂ ಕರೆದಿದ್ದಾರೆ.
ಸಿದ್ದರಾಮಯ್ಯ ಅವರೇ ಸ್ವತಃ ಮಂಡಳಿಯ ಇತರ ಸದಸ್ಯರಿಗೆ ಖುದ್ದು ಪತ್ರ ಬರೆದು ಆಹ್ವಾನ ನೀಡಿದ್ದು, ಬೆಂಗಳೂರಿನ ಕೆಪಿಸಿಸಿ ಕಚೇರಿ ಆವರಣದಲ್ಲಿನ ಭಾರತ್ ಜೋಡೊ ಭವನದಲ್ಲಿ ಜುಲೈ 15ರಂದು ಸಭೆ ನಡೆಯಲಿದೆ.
ರಾಷ್ಟ್ರೀಯ ಸಲಹಾ ಮಂಡಳಿ
ಎಐಸಿಸಿ ರಚಿಸಿರುವ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ನೇತೃತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದಾಗಿದ್ದು, ಮಂಡಳಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಾ.ಎಂ.ವೀರಪ್ಪ ಮೊಯಿಲಿ, ಅಶೋಕ್ ಗೆಹ್ಲೋಟ್, ಭೂಪೇಶ್ ಬಘೇಲ್, ಸಂಚಾಲಕ ಡಾ.ಅನಿಲ್ ಜೈಹಿಂದ್, ಕಾರ್ಯದರ್ಶಿ ಜಿತೇಂದರ್ ಬಘೇಲ್ ಹಾಗೂ ಸದಸ್ಯರಾಗಿ ಬಿ.ಕೆ.ಹರಿಪ್ರಸಾದ್, ವಿ.ನಾರಾಯಣಸ್ವಾಮಿ, ಸಚಿನ್ ಪೈಲಟ್, ಗುರುದೀಪ್ ಸಿಂಗ್ ಸಪ್ಪಲ್, ಅರುಣ್ ಯಾದವ್, ವಿಜಯ್ ನಾಮ್ದೇವ್ರಾವ್ ವಡೆಟ್ಟಿವಾರ್, ವಿ.ಹನುಮಂತರಾವ್, ಅಮಿತ್ ಚಾವ್ಡಾ, ಬಿ. ಮಹೇಶ್ಕುಮಾರ್ ಗೌಡ್, ಪೊನ್ನಮ್ ಪ್ರಭಾಕರ್, ಎಸ್. ಜೋತಿಮಣಿ (ಸಂಸದೆ), ಶ್ರೀಕಾಂತ್ ಜೇನಾ, ಕಮಲೇಶ್ವರ್ ಪಟೇಲ್, ಅಜಯ್ ಕುಮಾರ್ ಲಲ್ಲು, ಸುಭಾಷಿಣಿ ಯಾದವ್, ಅಡೂರು ಪ್ರಕಾಶ್ (ಸಂಸದ), ಧನೇಂದ್ರ ಸಾಹು, ಹೀನಾ ಕಾವ್ರೆ ಇರುತ್ತಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.


