ಬೆಂಗಳೂರು:ಮುಂಬರುವ ದಿನಗಳಲ್ಲಿ ಬಿಹಾರ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮತಗಳ ಕ್ರೋಡೀಕರಣಕ್ಕೆ ರಣನೀತಿ ರೂಪಿಸಿಲು ಎಸಿಸಿಸಿ ನಾಳೆಯಿಂದ ನಗರದಲ್ಲಿ ಎರಡು ದಿನಗಳ ಸಮಾವೇಶ ನಡೆಸುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಚಿಸಲಾಗಿರುವ ಎಐಸಿಸಿ ಹಿಂದುಗಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಸಭೆ ಆಯೋಜಿಸಲಾಗಿದೆ.
ನಾಲ್ಕು ರಾಜ್ಯಗಳ ಚುನಾವಣೆ
ಬಿಹಾರ, ಪಶ್ಚಿಮ ಬಂಗಾಳ, ಕೇರಳ ಹಾಗೂ ತಮಿಳುನಾಡು ವಿಧಾನಸಭೆಗಳಿಗೆ ಚುನಾವಣೆ ಮುಂದಿನ ದಿನಗಳಲ್ಲಿ ನಡೆಯಲಿವೆ.
ಈ ನಾಲ್ಕೂ ರಾಜ್ಯಗಳಲ್ಲಿ ಬಿಹಾರದಲ್ಲಿ ಎನ್ಡಿಎ ಮೈತ್ರಿ ಸರ್ಕಾರವಿದ್ದು, ಉಳಿದ ರಾಜ್ಯಗಳು ಪ್ರಾದೇಶಿಕ ಪಕ್ಷಗಳ ಹಿಡಿತದಲ್ಲಿವೆ.
ಈ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕವಾಗಿವೆ, ಇದನ್ನು ಗಮನದಲ್ಲಿಟ್ಟುಕೊಂಡು ಸಮುದಾಯಗಳನ್ನು ಸೆಳೆಯಲು ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ವರ್ಚಸ್ಸು ಬಳಸಿಕೊಳ್ಳಲು ಎಐಸಿಸಿ ನಿರ್ಧರಿಸಿದೆ.
ನಾಳೆ, ನಾಡಿದ್ದು ಸಭೆ
ಕೆಪಿಸಿಸಿ ಕಚೇರಿಯಲ್ಲಿ ನಾಳೆ ಸಂಜೆ 5 ಗಂಟೆಗೆ ದುಂಡುಮೇಜಿನ ಸಭೆ ನಡೆಯಲಿದ್ದು, ಜುಲೈ 16ರಂದು ಬೆಳಗ್ಗೆ 10 ಗಂಟೆಗೆ ಎರಡನೇ ಸಭೆ ನಡೆಯಲಿದೆ.
ಹಿಂದುಳಿದ ವರ್ಗಗಳ ಸಮಸ್ಯೆಗಳು ಹಾಗೂ ಪರಿಹಾರಕ್ಕೆ ಸಂಬಂಧಿಸಿದಂತೆ ಚಿಂತನೆ ನಡೆಸಿ, ಕೆಲವು ನಿರ್ಣಯಗಳನ್ನು ಸಭೆ ಕೈಗೊಳ್ಳಲಿದೆ.
ನಿರ್ಣಯಗಳನ್ನು ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸಿಕೊಂಡು ಪಕ್ಷಕ್ಕೆ ರಾಜಕೀಯ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಹೊರಟಿದೆ.

ಸದಸ್ಯರಿಗೆ ಖುದ್ದು ಆಹ್ವಾನ
ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಸಭೆ ಉಸ್ತುವಾರಿಯನ್ನು ಸಿದ್ದರಾಮಯ್ಯ ಅವರಿಗೆ ವಹಿಸಿದ್ದು, ನಗರದಲ್ಲಿ ನಡೆಯಲಿರುವ ಮೊದಲ ಸಭೆಗೆ ಹಾಜರಾಗುವಂತೆ ಎಲ್ಲಾ 23 ಸದಸ್ಯರಿಗೆ ಖುದ್ದು ಆಹ್ವಾನ ನೀಡಿದ್ದಾರೆ.
ಜುಲೈ 16ರಂದು ನಡೆಯುವ ಸಭೆಗೆ ಸಲಹಾ ಮಂಡಳಿ ಸದಸ್ಯರಲ್ಲದೆ, ರಾಷ್ಟ್ರಮಟ್ಟದಲ್ಲಿ ಪಕ್ಷದ ಹಿಂದುಳಿದ ಸಮುದಾಯಗಳಿಗೆ ಸೇರಿದ ಸಂಸದರು, ಶಾಸಕರು ಹಾಗೂ ಮುಖಂಡರನ್ನು ಆಹ್ವಾನಿಸಲಾಗಿದೆ.
ಕೆಪಿಸಿಸಿ, ಸಭೆ ಉಸ್ತುವಾರಿ ವಹಿಸಿಕೊಂಡಿರುವುದರಿಂದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಾ ಉಪಸ್ಥಿತರಿರುವರು.


