ಬೆಂಗಳೂರು:ಅತ್ಯಾಚಾರ ಅಪರಾಧಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಸೆರೆವಾಸ ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 10 ಲಕ್ಷ ರೂ. ದಂಡ ಹಾಕಿ ಮಹತ್ವದ ತೀರ್ಪು ನೀಡಿದೆ.
ಮೈಸೂರಿನ ಕೆ.ಆರ್.ನಗರದ ಮಹಿಳೆ ಮೇಲೆ ಅತ್ಯಾಚಾರ ಅಪರಾಧಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಪ್ರಜ್ವಲ್ ದೋಷಿ ಎಂದಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದರು.
ಸಂತ್ರಸ್ತೆಗೆ 7 ಲಕ್ಷ ರೂ.
ಅಪರಾಧಿ ಮತ್ತು ಅವರ ಪರ ವಕೀಲರು ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಮಾಡಿಕೊಂಡ ಮನವಿ ಪರಿಗಣಿಸದ ನ್ಯಾಯಾಲಯ ಜೀವನಪರ್ಯಂತ ಸೆರೆವಾಸ ಜೊತೆಗೆ ಎರಡು ವಿಧಿಗಳಡಿ ದಂಡವನ್ನೂ ವಿಧಿಸಿತು. ದಂಡದ ಮೊತ್ತದಲ್ಲಿ 7 ಲಕ್ಷ ರೂ.ಗಳನ್ನು ಸಂತ್ರಸ್ತೆಗೆ ನೀಡುವಂತೆ ಆದೇಶಿಸಿದೆ.
ಐಪಿಸಿ ಸೆಕ್ಷನ್ 376 (2) (ಕೆ) ಹಾಗೂ 376 (2) (ಎನ್) ಅಡಿ ಪ್ರಜ್ವಲ್ ರೇವಣ್ಣಗೆ ಗರಿಷ್ಠ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
ಶಿಕ್ಷೆ ಪ್ರಮಾಣವನ್ನು ಕಿಕ್ಕಿರಿದ ನ್ಯಾಯಾಲಯದಲ್ಲಿ ಮಧ್ಯಾನ್ಹ ಪ್ರಕಟಿಸಲಾಯಿತು.
ಶಿಕ್ಷೆ ಪ್ರಮಾಣ ವಾದ-ಪ್ರತಿವಾದ
ಇದಕ್ಕೂ ಮುನ್ನ ಬೆಳಗ್ಗೆ ಶಿಕ್ಷೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಮತ್ತು ಪ್ರಜ್ವಲ್ ಪರ ವಕೀಲರ ವಾದವನ್ನು ವಿಶೇಷ ನ್ಯಾಯಾಲಯದ ಜಡ್ಜ್ ಆಲಿಸಿದರು.
ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ವಾದ ಮಂಡಿಸಿ, ಅಪರಾಧಿ ಪ್ರಜ್ವಲ್ ಜೀವಕ್ಕಿಂತ ಹೆಚ್ಚಿನ ಹಾನಿ ಸಂತ್ರಸ್ತ ಮಹಿಳೆಗೆ ಆಗಿದೆ, ಒಪ್ಪಿಗೆ ಇಲ್ಲದೇ ಲೈಂಗಿಕ ಕ್ರಿಯೆ ಚಿತ್ರೀಕರಿಸಿ, ಬ್ಲಾಕ್ಮೇಲ್ ಮಾಡಿ ಅತ್ಯಾಚಾರ ನಡೆಸಲಾಗಿದೆ.
ಅತ್ಯಾಚಾರ ನಡೆಸಿದ ರೀತಿ ಅಪರಾಧಿಯ ವಕ್ರ ಮನಃಸ್ಥಿತಿ ತೋರಿಸುತ್ತದೆ, ಸಂಸದನಾಗಿ, ಕಾನೂನು ತಿಳಿದೂ ನೀಚ ಕೃತ್ಯ ಎಸಗಿರುವುದು ಗಂಭೀರ ಅಪರಾಧ, ಈತನ ವಿರುದ್ಧ ಇನ್ನಷ್ಟು ಅತ್ಯಾಚಾರ ಮೊಕದ್ದಮೆಗಳಿವೆ, ಬಹಳಷ್ಟು ಮಹಿಳೆಯರ ಅಶ್ಲೀಲ ವಿಡಿಯೋ ಮಾಡಲಾಗಿದೆ.

ತಪ್ಪಿಗೆ ಪಶ್ಚಾತ್ತಾಪವೇ ಕಾಣುತ್ತಿಲ್ಲ
ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಿರುವುದೂ ಗಂಭೀರ ಅಪರಾಧ, ಮಾಡಿದ ತಪ್ಪಿಗೆ ಪಶ್ಚಾತ್ತಾಪವೇ ಕಾಣುತ್ತಿಲ್ಲ, ಅಪರಾಧಿಗೆ ಜೀವನಪರ್ಯಂತ ಸೆರೆವಾಸ ಶಿಕ್ಷೆ ವಿಧಿಸುವ ಮೂಲಕ ಸಮಾಜಕ್ಕೆ ಸಂದೇಶ ನೀಡಬೇಕು, ಹಣ, ಅಧಿಕಾರ ಬಲ ಇರುವವರಿಗೆ ಕಡಿಮೆ ಶಿಕ್ಷೆಯಾಗಬಾರದು ಎಂದರು.
ಪ್ರಾಸಿಕ್ಯೂಷನ್ ಪರ ಎಸ್ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿ, ಸಂಸದರಾದವರೇ ನೀಚ ಕೃತ್ಯ ಎಸಗಿದ್ದು, ಕಿರಿಯ ವಯಸ್ಸಿನ ರಾಜಕಾರಣಿಯನ್ನು ಜನ ಆಯ್ಕೆ ಮಾಡಿರುವುದು ಏಕೆ, ಈತ ಮಾಡಿದ್ದೇನು ಎಂಬುದನ್ನು ಗಮನಿಸಬೇಕು, ಜೀವಾವಧಿ ಶಿಕ್ಷೆ, ಜೊತೆಗೆ ಅತಿ ಹೆಚ್ಚು ದಂಡ ವಿಧಿಸಬೇಕು.
ಮೊಕದ್ದಮೆಯೊಂದರಲ್ಲಿ ಅಪರಾಧಿಗೆ 25 ಲಕ್ಷ ರೂ.ವರೆಗೆ ದಂಡ ವಿಧಿಸಿದ ಉದಾಹರಣೆ ಇದೆ, ಪ್ರಜ್ವಲ್ ಬಡವನಲ್ಲ, ಕರೋಡ್ಪತಿ, ಹೆಚ್ಚಿನ ದಂಡ ವಿಧಿಸಿ ಅದರ ದೊಡ್ಡ ಭಾಗವನ್ನು ಸಂತ್ರಸ್ತೆಗೆ ನೀಡಬೇಕು, ಸಂತ್ರಸ್ತೆ ವಿಡಿಯೋ ವೈರಲ್ ಆಗಿರುವುದರಿಂದ ದುಡಿಯಲು ಎಲ್ಲೂ ಹೋಗದಂತಾಗಿದೆ, ಆಕೆಗೂ ಪರಿಹಾರದ ಅಗತ್ಯವಿದೆ ಎಂದರು.
ಚುನಾವಣೆ ವೇಳೆ ಏಕೆ ವಿಡಿಯೊ ವೈರಲ್
ಪ್ರಜ್ವಲ್ ರೇವಣ್ಣ ಪರ ವಕೀಲರಾದ ನಳಿನಾ ಮಾಯೇಗೌಡ ವಾದ ಮಂಡಿಸಿ, ಸರ್ಕಾರಿ ವಕೀಲರುಗಳು ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಮಾಜಕ್ಕೆ ಸಂದೇಶ ನೀಡಬೇಕೆಂಬ ವಾದ ಮಂಡಿಸಿದ್ದಾರೆ, ಯುವ ಸಂಸದನಾಗಿ ಜನಸೇವೆ ಮಾಡಿದ್ದು, ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ, 2024ರ ಲೋಕಸಭಾ ಚುನಾವಣೆ ವೇಳೆಯೇ ವಿಡಿಯೋಗಳನ್ನು ಏಕೆ ವೈರಲ್ ಮಾಡಲಾಯಿತು.
ಮೊಕದ್ದಮೆ ಪ್ರಜ್ವಲ್ ವಿರುದ್ಧ ರಾಜಕೀಯ ಪ್ರೇರಿತವಾಗಿದೆ, ಆರೋಪಿಯ ರಾಜಕೀಯ ಸ್ಥಾನಮಾನ ಶಿಕ್ಷೆಗೆ ಕಾರಣವಾಗಬಾರದು, ಹಾಗಾದರೆ, ಇಷ್ಟು ದಿನದ ಒಳ್ಳೆ ಹೆಸರು ಏನಾಗಬೇಕು.
ಪ್ರಜ್ವಲ್ಗೆ 34 ವರ್ಷ, ಆತನ ಭವಿಷ್ಯವನ್ನೂ ಗಮನದಲ್ಲಿಡಬೇಕು, ಮಾಧ್ಯಮಗಳಲ್ಲಿ ಆತನ ತೇಜೋವಧೆಯಾಗಿದೆ, ಬಂಧನವಾದ ದಿನದಿಂದಲೂ ಜೈಲಿನಲ್ಲಿದ್ದಾನೆ, ವಯಸ್ಸಾದ ತಂದೆ ತಾಯಿ ಇದ್ದಾರೆ, ತಾತ ಮಾಜಿ ಪ್ರಧಾನಿ.

ಅಪರಾಧಿಗೇ ಹೆಚ್ಚಿನ ಹಾನಿ
ಸಂತ್ರಸ್ತೆ ಸಮಾಜದಿಂದ ತಿರಸ್ಕೃತಗೊಂಡಿಲ್ಲ, ತನ್ನ ಸಂಸಾರದೊಂದಿಗೆ ಜೀವನ ಸಾಗಿಸುತ್ತಿದ್ದಾರೆ, ವಿವಾಹವಾಗಿ ಮಕ್ಕಳಿವೆ, ಜೀವನ ನಡೆಯುತ್ತಿದೆ, ಸಂತ್ರಸ್ತೆಗಿಂತ ಅಪರಾಧಿಗೇ ಹೆಚ್ಚಿನ ಹಾನಿಯಾಗಿದೆ ಎಂದು ವಾದಿಸಿದರು.
ಅಪರಾಧಿ ಪರ ವಕೀಲರ ವಾದಕ್ಕೆ ಪ್ರಾಸಿಕ್ಯೂಷನ್ ಪರ ವಕೀಲ ಬಿ.ಎನ್.ಜಗದೀಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

