ನವದೆಹಲಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಸಮಯ ಎದುರಾದರೆ ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾಹಿತಿ ಪಡೆದಿದ್ದಾರೆ.
ಇಂದು ಸಂಸತ್ ಭವನದ ತಮ್ಮ ಕಚೇರಿಗೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ತುರ್ತಾಗಿ ಕರೆಸಿಕೊಂಡ ಷಾ, ಈ ಕುರಿತು ಮಾತುಕತೆ ನಡೆಸಿದರು.
ಮುಂದಿನ ನಡೆಯೇನು
ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಯಿಂದ ಇಳಿಯದಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಂದಿನ ನಡೆಯೇನು.
ನಾಯಕನ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ಅಭಿಪ್ರಾಯ ಯಾರ ಪರ ಮೂಡಬಹುದು, ಒಂದು ವೇಳೆ ಅವರಲ್ಲಿ ಒಡಕು ಉದ್ಭವಿಸಿದರೆ, ಮುಂದಿನ ನಡೆಗಳ ಬಗ್ಗೆಯೂ ವಿವರಣೆ ಪಡೆದಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರ ಹಗರಣಗಳ ಮಾಹಿತಿ ಪಡೆದಿದ್ದಲ್ಲದೆ, ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಹೋರಾಟ ಕುರಿತ ಕಾರ್ಯಕ್ರಮಗಳ ಮಾಹಿತಿ ಪಡೆದಿದ್ದಾರೆ.
ರಾಜಕೀಯ ಬೆಳವಣಿಗೆ ಮಾಹಿತಿ
ಅಮಿತ್ ಷಾ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆ ಕುರಿತು ತಮ್ಮಿಂದ ಮಾಹಿತಿ ಪಡೆದುಕೊಂಡರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳ ಬಗ್ಗೆ ಯಾವ ರೀತಿ ಹೋರಾಟ ರೂಪಿಸಿದ್ದೀರಿ ಎಂಬ ವಿವರ ಪಡೆದಿದ್ದಾರೆ ಎಂದರು.
ಕಳೆದ ವಾರ ತಮ್ಮ ದೆಹಲಿ ಭೇಟಿ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿನಡ್ಡ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ.

ದೆಹಲಿಗೆ ಬರಲು ಸೂಚನೆ
ರಾಷ್ಟ್ರೀಯ ಅಧ್ಯಕ್ಷರ ಜೊತೆ ಗೃಹ ಸಚಿವರನ್ನೂ ಭೇಟಿ ಮಾಡಿದ್ದನ್ನು ತಿಳಿಸಿದ ಅಶೋಕ್, ನಿನ್ನೆ ಕೇಂದ್ರ ಗೃಹ ಸಚಿವಾಲಯ ತಮ್ಮನ್ನು ಸಂಪರ್ಕಿಸಿ ದೆಹಲಿಗೆ ಬರುವಂತೆ ಸೂಚಿಸಿತು ಎಂದರು.
ಅವರ ಕರೆ ಮೇರೆಗೆ ಇಂದು ಸಂಸತ್ ಭವನದಲ್ಲಿ ಭೇಟಿಯಾಗಿ ರಾಜಕೀಯ ವಿಚಾರಗಳೂ ಸೇರಿದಂತೆ ಇತರ ವಿಷಯಗಳನ್ನು ಪ್ರಸ್ತಾಪಿಸಿರುವುದಾಗಿ ತಿಳಿಸಿದರು.
ಅಮಿತ್ ಷಾ ಭೇಟಿಗೂ ಮುನ್ನ ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಸುದೀರ್ಘವಾಗಿ ಚರ್ಚಿಸಿ, ನಂತರ ಗೃಹ ಸಚಿವರ ಕೊಠಡಿಗೆ ತೆರಳಿದರು.


