ಬೆಂಗಳೂರು:ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.
ದಸರಾ ಮಹೋತ್ಸವ ಉದ್ಘಾಟಿಸುವಂತೆ ಮುಖ್ಯಮಂತ್ರಿ ಪತ್ರ ಮುಖೇನ ಕೋರಿದ್ದಾರೆ, ಆದರೆ, ಅವರಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ದೆಹಲಿಗೆ ತೆರಳಿ ಆಹ್ವಾನ
ಸ್ವತಃ ಮುಖ್ಯಮಂತ್ರಿ ಅವರೇ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಲಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 22ರಿಂದ 11 ದಿನಗಳವರೆಗೆ ದಸರಾ ಮಹೋತ್ಸವ ಜರುಗಲಿದೆ, ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಉದ್ಘಾಟಿಸಬೇಕೆಂದು ಕೋರಲಿದ್ದಾರೆ.
ನಗರದಲ್ಲಿ ನಡೆದ ದಸರಾ ಉನ್ನತಮಟ್ಟದ ಸಭೆಯಲ್ಲಿ ಈ ಬಾರಿ ಯಾರಿಂದ ಉದ್ಘಾಟನೆ ಮಾಡಿಸಬೇಕೆಂಬ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸಭೆ ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟಿತು.
ಮುಖ್ಯಮಂತ್ರಿ ದೃಢ ನಿರ್ಧಾರ
ಈ ಬಾರಿಯ ದಸರಾ ಉತ್ಸವವನ್ನು ಮಹಿಳೆಯೊಬ್ಬರಿಂದ, ಅದರಲ್ಲೂ ಸೋನಿಯಾ ಗಾಂಧಿ ಅವರಿಂದಲೇ ಉದ್ಘಾಟನೆ ಮಾಡಿಸಬೇಕೆಂಬ ದೃಢ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಂಡಿದ್ದಾರೆ.
ವಿಧಾನಮಂಡಲದ ಮಳೆಗಾಲದ ಅಧಿವೇಶನ ಮುಗಿಯುತ್ತಿದ್ದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾಎಚ್.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ದೆಹಲಿಗೆ ತೆರಳಿ ಸೋನಿಯಾ ಅವರಿಗೆ ಆಹ್ವಾನ ನೀಡಲಿದ್ದಾರಂತೆ.
ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಪಾತ್ರ ವಹಿಸಿರುವ ಸೋನಿಯಾ ಗಾಂಧಿ 2004ರಲ್ಲಿ ಯುಪಿಎ ಮೈತ್ರಿಕೂಟ ಬಹುಮತ ಗಳಿಸಿದರೂ ಪ್ರಧಾನಿ ಆಗುವ ಉತ್ಸಾಹ ತೋರಲಿಲ್ಲ.

ಪ್ರಧಾನಿ ಹುದ್ದೆ ತ್ಯಾಗ
ಎರಡನೇ ಬಾರಿಗೂ ತಾವು ಪ್ರಧಾನಿಯಾಗದೆ, ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್ ಅವರನ್ನೇ ಮುಂದುವರೆಸಿದರು.
ಈ ಸನ್ನಿವೇಶದಲ್ಲಿ ಒತ್ತಡ ಮತ್ತು ವಿರೋಧಗಳು ವ್ಯಕ್ತಗೊಂಡರೂ ಸೋನಿಯಾ ತಮ್ಮ ನಿಲುವಿನಿಂದ ಹಿಂದೆ ಸರಿಯದೆ, ಅಧಿಕಾರದಿಂದ ದೂರ ಸರಿದರು.
ಕಾಂಗ್ರೆಸ್ ಮೈತ್ರಿಕೂಟದಲ್ಲಿ ಒಡಕು ಮೂಡದಂತೆ ನೋಡಿಕೊಂಡರು, ಸತತ 10 ವರ್ಷ ಯುಪಿಎ ಮೈತ್ರಿಕೂಟ ಅಧಿಕಾರದಲ್ಲಿರಲು ಪ್ರಮುಖ ಪಾತ್ರ ವಹಿಸಿದ್ದರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಅವರು ಸೋನಿಯಾ ಅವರಿಂದ ದಸರಾ ಉದ್ಘಾಟಿಸಲು ಮುಂದಾಗಿದ್ದಾರೆ.
ಇದಕ್ಕೂ ಮಿಗಿಲಾಗಿ ತಮ್ಮ ಕಾಂಗ್ರೆಸ್ ಸೇರ್ಪಡೆ ನಂತರ ಸತತ 18 ವರ್ಷ ಅಧಿಕಾರ ನಿರ್ವಹಿಸಲು ಅವಕಾಶ ಮಾಡಿಕೊಟ್ಟ ಗೌರವಾರ್ಥ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ.


