ಬೆಂಗಳೂರು:’ನಮಾಮಿ ಗಂಗೆ’ ಮಾದರಿಯಲ್ಲೇ ಕಾವೇರಿ ನದಿ ಶುದ್ಧೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ 3,000 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.
ಪರಿಸರವಾದಿ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ, ರಾಮದಾಸ್ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ವರದಿ ಆಧರಿಸಿ ಗಂಗಾ ನದಿ ಶುದ್ಧೀಕರಣ ಯೋಜನೆ ಮಾದರಿಯಲ್ಲೇ ಕಾವೇರಿ ನದಿ ಮಾಲಿನ್ಯ ಕೊನೆಗೊಳಿಸಲು ಮತ್ತು ನದಿ ಪುನರುಜ್ಜೀವನಗೊಳಿಸಲು ಪ್ರಧಾನಿ ಮೋದಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಮಾಲಿನ್ಯಕ್ಕೆ ಸಂಸ್ಥೆಗಳಿಗೆ ನೋಟಿಸ್
ಕಾವೇರಿ ಶುದ್ಧೀಕರಣಕ್ಕೆ ಕೇಂದ್ರ ಸರ್ಕಾರ ಬೃಹತ್ ಗಾತ್ರದ ಮೊತ್ತ ನೀಡಲು ಮುಂದಾಗುತ್ತಿದ್ದಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಎಂ.ಪಿ.ನರೇಂದ್ರ ಸ್ವಾಮಿ ಮತ್ತು ಇತರ ಸದಸ್ಯರು ತಲಕಾವೇರಿಯಿಂದ ಬಿಳಿಗುಂಡ್ಲುವರೆಗೆ ಅಧ್ಯಯನ ನಡೆಸಿ, ನದಿ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಕೆಲವು ಸಂಸ್ಥೆಗಳಿಗೆ ನೋಟಿಸ್ ನೀಡಿದ್ದಾರೆ.
ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸುವ ಉದ್ದೇಶದಿಂದ 400ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಮೂಲಸೌಕರ್ಯವನ್ನು ಮಂಡಳಿ ಒದಗಿಸುತ್ತಿದೆ.
ಕಾವೇರಿ ನದಿ ಕೇವಲ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರಣಗಳಿಗಷ್ಟೇ ಪ್ರಾಮುಖ್ಯತೆ ಪಡೆಯದೆ, ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಶೇಕಡ 30ರಷ್ಟು ಜನಸಂಖ್ಯೆಗೆ ಜೀವನಾಡಿಯಾಗಿದೆ.

2 ವರ್ಷಗಳಲ್ಲಿ ಯೋಜನೆ ಪೂರ್ಣ
ಇದನ್ನು ಮನಗಂಡ ಪ್ರಧಾನಿ ಮೋದಿ, ನಮಾಮಿ ಗಂಗೆ ಯೋಜನೆ ಮಾದರಿಯಲ್ಲೇ ಕಾವೇರಿ ನದಿ ನೀರು ಶುದ್ಧೀಕರಣಕ್ಕೆ ಹಣ ನೀಡಿರುವುದಲ್ಲದೆ, 2 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದಾರೆ.
ಯೋಜನೆಗೆ ಹಣ ಸಾಲದಾದರೆ ಮತ್ತಷ್ಟು ಹಣ ನೀಡಲೂ ಕೇಂದ್ರ ಸರ್ಕಾರ ಸಿದ್ಧವಿದ್ದು, ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಕೇಂದ್ರದ ಮಾರ್ಗಸೂಚಿಯಂತೆಯೇ ಕಾಮಗಾರಿಗಳನ್ನು ಕೈಗೊಳ್ಳಬೇಕು.
ಉದ್ದೇಶಿತ ಕ್ರಿಯಾ ಯೋಜನೆಗೆ ಕೇಂದ್ರ ಶೇಕಡ 100ರಷ್ಟು ಹಣ ಭರಿಸಲಿದೆ, ಆರಂಭಿಕ ಹಂತದಲ್ಲಿ ನದಿಯ ಮೇಲ್ಭಾಗ ಸ್ವಚ್ಛಗೊಳಿಸುವುದರಿಂದ ಹಿಡಿದು ತೇಲುವ ಘನತ್ಯಾಜ್ಯ ಸಮಸ್ಯೆ ಪರಿಹರಿಸುವವರೆಗೂ ಯಲ್ಲಪ್ಪ ರೆಡ್ಡಿ ಸಮಿತಿ ನೀಡಿದ ವರದಿ ಆಧರಿಸಿ ಮಾರ್ಗಸೂಚಿ ಒದಗಿಸಿದೆ.
ದುರಸ್ತಿ, ಆಧುನೀಕರಣ
ಈ ಯೋಜನೆಯಡಿ ಗ್ರಾಮೀಣ ಭಾಗದ ಚರಂಡಿಗಳ ನೀರು ನೇರವಾಗಿ ನದಿ ಸೇರುವುದನ್ನು ತಡೆಯುವುದು, ಶೌಚಾಲಯಗಳ ನಿರ್ಮಾಣ, ಜನ ಮತ್ತು ನದಿಗಳ ನಡುವಿನ ಸಂಬಂಧ ಸುಧಾರಿಸಲು ವಿವಿಧೆಡೆ ಘಟ್ಟಗಳ ನಿರ್ಮಾಣ, ದುರಸ್ತಿ ಮತ್ತು ಆಧುನೀಕರಣ ಇದರ ಭಾಗವಾಗಿದೆ.
ಕಾವೇರಿ ನದಿ ಮಾಲಿನ್ಯ ತಡೆಗಟ್ಟುವ ಜೊತೆಗೆ ಪುನರುಜ್ಜೀವಗೊಳಿಸುವಂತೆಯೂ ಪ್ರಧಾನಿ ಆದೇಶಿಸಿದ್ದಾರೆ.
ನಮಾಮಿ ಗಂಗೆ ಮಾದರಿಯಲ್ಲಿ ಮೂರು ಹಂತಗಳಲ್ಲಿ ಯೋಜನೆಯನ್ನು ವಿಂಗಡಿಸಿ ಅನುಷ್ಟಾಗೊಳಿಸಲು ಸೂಚಿಸಲಾಗಿದೆ.
ಕಾಮಗಾರಿ ಆರಂಭ
ನಗರ ಮತ್ತು ಕೈಗಾರಿಕಾ ತ್ಯಾಜ್ಯಗಳು ನದಿಗೆ ಸೇರದಂತೆ ತಡೆಯಲು ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಸ್ಥಳಗಳನ್ನು ಗುರುತಿಸಿ, ಈಗಾಗಲೇ ಕೆಲವೆಡೆ ಕಾಮಗಾರಿಯೂ ಆರಂಭಗೊಂಡಿದೆ.
ಕಾವೇರಿ ನದಿ ಪಾತ್ರದ ನಗರ ಮತ್ತು ಪಟ್ಟಣಗಳ ಮಾರುಕಟ್ಟೆಗಳಲ್ಲಿ ಶುದ್ಧೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ, ಕೈಗಾರಿಕಾ ಮಾಲಿನ್ಯ ತಡೆಗೆ ಕೆಲವು ಸುಧಾರಿತ ಯೋಜನೆಗಳ ಅನುಷ್ಟಾನಕ್ಕೂ ಸೂಚಿಸಿದೆ.
’ಶೂನ್ಯ ದ್ರವ ತ್ಯಾಜ್ಯ’
ನದಿಗೆ ಕಲ್ಮಶ, ತ್ಯಾಜ್ಯ ನೀರು ಸೇರದಂತೆ ’ಶೂನ್ಯ ದ್ರವ ತ್ಯಾಜ್ಯ’ ಸಾಧನೆಗೆ ಸೂಚಿಸಲಾಗಿದೆ, ಈ ಭಾಗದ ಕೈಗಾರಿಕೆಗಳು, ಆಸ್ಪತ್ರೆ, ವಾಣಿಜ್ಯ ಸಂಸ್ಥೆಗಳು ತ್ಯಾಜ್ಯ ಹರಿಸದಂತೆ ಸದಾ ನಿಗಾವಹಿಸಲು ತಿಳಿಸಲಾಗಿದೆ.
ಇವುಗಳ ಜೊತೆಗೆ ಜೀವ ವೈವಿಧ್ಯ ಸಂರಕ್ಷಣೆ, ಅರಣ್ಯೀಕರಣ ಮತ್ತು ಜಲ ಗುಣಮಟ್ಟ ಮೇಲ್ವಿಚಾರಣೆ ವಿಧಾನಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.

