ಬೆಂಗಳೂರು:ಈ ಬಾರಿಯ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿ ಸಮೀಕ್ಷೆಯಿಂದ ಯಾರೂ ಹೊರಗುಳಿಯದಂತೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಡಿಸೆಂಬರ್ ಒಳಗೆ ವರದಿ ಸರ್ಕಾರದ ಕೈಸೇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧುಸೂದನ್ ನಾಯಕ್ ನೇತೃತ್ವದ ಸಮಿತಿ ಮತ್ತು ಹಿಂದುಳಿದ ವರ್ಗಗಳ ಆಯೋಗ ವೈಜ್ಞಾನಿಕ ಮಾನದಂಡದಲ್ಲಿ ಸಮೀಕ್ಷೆ ನಡೆಸಿ ವರದಿ ನೀಡಲಿದೆ ಎಂದರು.
ಸಾಮಾಜಿಕ ನ್ಯಾಯ
ಎಲ್ಲಾ ಜಾತಿ-ಧರ್ಮದವರ ದತ್ತಾಂಶ ಅಂಗೈಯಲ್ಲಿದ್ದರೆ ಮಾತ್ರ ಸಾಮಾಜಿಕ ನ್ಯಾಯದ ವಿಶೇಷ ಕಾರ್ಯಕ್ರಮ ರೂಪಿಸಲು ಸಾಧ್ಯ, ಅಮೆರಿಕದಲ್ಲೂ ಕರಿಯರಿಗೆ ಅವಕಾಶಗಳನ್ನು ನೀಡುವ ದೃಢವಾದ ಕ್ರಮಗಳಿವೆ, ನಮ್ಮಲ್ಲಿ ಮೀಸಲಾತಿ ಇದೆ.
ಬಡತನ, ನಿರುದ್ಯೋಗ, ಅನಕ್ಷರತೆ ಹೋಗಲಾಡಿದಲು ಸಂವಿಧಾನದ ಕಲಂ 15, 16(5)ರಡಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.
ರಾಜ್ಯದ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯಲು ಹೊಸದಾಗಿ, ಆದಷ್ಟೂ ಜಾಗ್ರತೆಯಿಂದ ಸಮೀಕ್ಷೆ ನಡೆಸಿ ವರದಿ ಕೊಡಲು ಸೂಚಿಸಲಾಗಿದೆ.
ಸಮೀಕ್ಷೆ 22 ರಿಂದ ಅಕ್ಟೋಬರ್ 7ರವರೆಗೆ
ಈ ತಿಂಗಳ 22 ರಿಂದ ಅಕ್ಟೋಬರ್ 7 ರೊಳಗೆ ಸಮೀಕ್ಷೆ ಮುಗಿಸಲಾಗುವುದು, ಇದಕ್ಕಾಗಿ 1,75,000 ಸರ್ಕಾರಿ ಶಾಲಾ ಶಿಕ್ಷಕರನ್ನು ವಿಶೇಷ ಭತ್ಯೆ ನೀಡಿ ಸಮೀಕ್ಷೆಗೆ ತೊಡಗಿಸಿಕೊಳ್ಳಲಾಗುತ್ತಿದೆ.
ಸಮೀಕ್ಷೆಗೆ 425 ಕೋಟಿ ರೂ. ಅಂದಾಜು ವೆಚ್ಚವಾಗಲಿದ್ದು, ಇದರಲ್ಲಿ ಸಮೀಕ್ಷೆ ನಡೆಸುವವರಿಗೆ ನೀಡುವ ವಿಶೇಷ ಭತ್ಯೆ 325 ಕೋಟಿ ರೂ. ಆಗಲಿದ್ದು, ಅಗತ್ಯಬಿದ್ದರೆ ಹೆಚ್ಚಿನ ಹಣ ನೀಡಲಾಗುವುದು.
ಪ್ರತಿ ಮನೆಗೂ ವಿದ್ಯುತ್ ಸಂಪರ್ಕವಿದೆ, ಮೀಟರ್ ರೀಡರ್ಗಳು ಜಿಯೋ ಟ್ಯಾಗ್ ಮಾಡುವ ಜೊತೆಗೆ, 2 ಕೋಟಿ ಮನೆಗಳಿಗೆ ಪ್ರತ್ಯೇಕ ಗುರುತಿನ ನಂಬರ್ ನೀಡಿ ಸ್ಟಿಕ್ಕರ್ ಅಂಟಿಸುತ್ತಾರೆ.
60 ಪ್ರಶ್ನೆಗಳಿಗೆ ಉತ್ತರ
ಆಶಾ ಕಾರ್ಯಕರ್ತೆಯರು ನಾಳೆಯಿಂದಲೇ ಮನೆ ಮನೆಗೆ ಹೋಗಿ 60 ಪ್ರಶ್ನೆಗಳ ನಮೂನೆ ಪ್ರತಿ ತಲುಪಿಸಲಿದ್ದು, ನಂತರ ಸಮೀಕ್ಷಕರು ತೆರಳಿ, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಮೊಬೈಲ್ಗೆ ಲಿಂಕ್ ಮಾಡುವುದರ ಜೊತೆಗೆ, ವಿದ್ಯುತ್ ಸಂಪರ್ಕ ಇಲ್ಲದ ಹಾಗೂ ಮೊಬೈಲ್ ಇಲ್ಲದವರ ಮನೆಗಳಿಗೂ ಹೋಗಿ ಒಟ್ಟು 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿದ್ದಾರೆ.
ರಾಜ್ಯದ ಜನತೆ ಯಾರೊಬ್ಬರೂ ತಪ್ಪಿಸಿಕೊಳ್ಳದೆ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು, ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ಸಮೀಕ್ಷೆ ಕುರಿತು ಯಾವುದೇ ದೂರು ಅಥವಾ ಮಾಹಿತಿ ಪಡೆಯಬಹುದಾಗಿದ್ದು, ಆನ್ಲೈನ್ ಮೂಲಕವೂ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಜಾತಿ ಹೇಳಿಕೊಳ್ಳಲು ಕಷ್ಟ ಆಗುವವರು ಸಹಾಯವಾಣಿಗೆ ಕರೆ ಮಾಡಿ ಜಾತಿ ಹೇಳಬಹುದು, ಮತಾಂತರಗೊಂಡವರು ಅಥವಾ ಜಾತಿ ಗೊಂದಲ ಇದ್ದಲ್ಲಿ ಆಯೋಗದ ತಜ್ಞರ ತಂಡ ವಿಶ್ಲೇಷಣೆ ಮಾಡಿ ತೀರ್ಮಾನಿಸುತ್ತದೆ.
ಜಾತಿಗಳಲ್ಲಿ ವೈರುಧ್ಯತೆ
ಸಮಾಜದಲ್ಲಿ ಅನೇಕ ಜಾತಿಗಳಿದ್ದು, ಹಲವು ಜಾತಿಗಳು ವೈರುಧ್ಯತೆಯಿಂದ ಕೂಡಿವೆ, ಅಸಮಾನತೆ ಈಗಲೂ ಇದೆ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಅಸಮಾನತೆ ತೊಲಗಿಸಲೇ ಬೇಕಿದೆ ಎಂದರು.
ಗ್ಯಾರಂಟಿ ಯೋಜನೆಗಳ ಮೂಲಕ ಅಸಮಾನತೆ ಸ್ವಲ್ಪಮಟ್ಟಿಗೆ ಕಡಿಮೆ ಮಾಡಲು ಪ್ರಯತ್ನ ಮಾಡಿದ್ದೇವೆ ಎಂದರು.

