ಬೆಂಗಳೂರು:ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ವೀರಶೈವ ಸಮಾಜ ವಿಭಜಿಸುವ ಕೆಲಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಮುಂದಾಗಿದ್ದಾರೆ ಎಂದು ಸಮುದಾಯದ ಬಿಜೆಪಿ ಮುಖಂಡರು ಇಂದಿಲ್ಲಿ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ತಮ್ಮ ರಾಜಕೀಯ ಉದ್ದೇಶಕ್ಕಾಗಿ ನಡೆಸುತ್ತಿರುವ ಜಾತಿ ಗಣತಿಯನ್ನೇ ವಿರೋಧಿಸಿರುವ ಸಮುದಾಯ, ನಮ್ಮಲ್ಲಿ ಯಾವುದೇ ವಿಭಜನೆ ಇಲ್ಲ, ಒಗ್ಗಟ್ಟಿನಿಂದಿದ್ದೇವೆ ಎಂದಿದ್ದಾರೆ.
ಬಿಜೆಪಿ ಮುಖಂಡರ ಸಭೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿರುವುದಲ್ಲದೆ, ಸಮಾಜದ ಮಠಾಧೀಶರು ಹಾಗೂ ವೀರಶೈವ ಮಹಾಸಭಾದ ಜೊತೆ ಚರ್ಚಿಸುವ ತೀರ್ಮಾನ ಕೈಗೊಂಡಿದ್ದಾರೆ.
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಸಮೀಕ್ಷೆ ನೆಪದಲ್ಲಿ ಜಾತಿ ಗಣತಿ ನಡೆಸುವ ಷಡ್ಯಂತ್ರ, ಕುತಂತ್ರ ಇದಾಗಿದೆ ಎಂದು ಕಿಡಿಕಾರಿದರು.
ಜನಗಣತಿ ನಿಯಮದಡಿ ಇಲ್ಲದ ವಿಷಯಗಳನ್ನು ಸೇರಿಸಿ ಗಣತಿ ನಡೆಸುತ್ತಿರುವುದು ಸರಿಯಲ್ಲ, ಕುರುಬ ಕ್ರಿಶ್ಚಿಯನ್, ದಲಿತ ಕ್ರಿಶ್ಚಿಯನ್, ನಾಸ್ತಿಕರು ಎಂಬ ಜಾತಿಗಳನ್ನು ಹುಟ್ಟುಹಾಕಿ ಸಮೀಕ್ಷೆ ನಡೆಸಲಾಗುತ್ತಿದೆ.
ನಾಸ್ತಿಕ ಜಾತಿ ಹುಟ್ಟಿದ್ದೆಲ್ಲಿ
ಜಾತಿ ಕಾಲಂನಲ್ಲಿ ನಾಸ್ತಿಕರು ಎಂಬುದನ್ನು ಸೇರಿಸಿರುವುದೇ ತೀವ್ರ ಗೊಂದಲಮಯವಾಗಿದೆ, ಇಂತಹ ಜಾತಿ ಹುಟ್ಟಿದ್ದೆಲ್ಲಿ ಎಂದು ಪ್ರಶ್ನಿಸಿದ್ದಾರೆ.
ಜಾತಿ ಗಣತಿ ಹೆಸರಿನಲ್ಲಿ ಎಲ್ಲಾ ಸಮಾಜವನ್ನು ಒಡೆಯಲು ಸಿದ್ದರಾಮಯ್ಯ ಮುಂದಾಗಿದ್ದಾರೆ, ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಜಾತಿ ವೈಷಮ್ಯ ಹುಟ್ಟುಹಾಕಲು ಹುನ್ನಾರ ನಡೆಸಿದ್ದಾರೆ.
ಸಮಾಜವಾದದ ಹಿನ್ನೆಲೆಯಿಂದ ಬಂದಂತಹ ಸಿದ್ದರಾಮಯ್ಯ ಈ ಕೂಡಲೇ ಇಂತಹ ಸಮೀಕ್ಷೆ ಕೈಬಿಡದಿದ್ದರೆ ರಾಜಕೀಯ ಅಧಃಪತನದತ್ತ ಸಾಗುವುದು ಖಂಡಿತ ಎಂದರು.
ಸಂವಿಧಾನದಡಿ ಅವಕಾಶವೇ ಇಲ್ಲ
ಸಂವಿಧಾನದ ವಿಧಿಯಡಿ ಅವಕಾಶ ಇಲ್ಲದೇ ಇದ್ದರೂ ರಾಜ್ಯ ಸರ್ಕಾರ ಜಾತಿ ಗಣತಿ ನಡೆಸುತ್ತಿದೆ, ಇದರ ಹಿಂದೆ ಕುತಂತ್ರ, ಷಡ್ಯಂತ್ರವೂ ಇದೆ.
ಸಮೀಕ್ಷೆಯ ಕಾಲಂಗಳನ್ನು ಗಮನಿಸಿದರೆ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ, ನಾಸ್ತಿಕರು ಜೊತೆಗೆ ಇತರೆ ಎಂಬುದೂ ಕೂಡ ಕಾನೂನುಬಾಹಿರ.
ಸಿದ್ದರಾಮಯ್ಯ ತಮ್ಮ ಮನಃಸ್ಥಿತಿಯನ್ನು ಮುಂದಿಟ್ಟುಕೊಂಡು ಜಾತಿಗಣತಿ ನಡೆಸಿ ಜಾತಿ-ಜಾತಿಗಳನ್ನು ವಿಭಜಿಸುವ ಕೆಲಸಕ್ಕೆ ಕೈಹಾಕಿದ್ದಾರೆ.
ಸಮಾಜ ಒಡೆಯುವ ಕುತಂತ್ರ
ಈ ಸಮೀಕ್ಷೆಯಿಂದ ವೀರಶೈವ ಸಮಾಜ ಒಡೆಯುವ ಕುತಂತ್ರ ಇದಾಗಿದೆ, 2014ರಲ್ಲಿ ಸಮಾಜ ಒಡೆಯುವ ಪ್ರಯತ್ನ ನಡೆಸಿ ಜನತೆಯಿಂದ ತಿರಸ್ಕರಿಸಲ್ಪಟ್ಟಿದ್ದರು.
ಅಂದು ನಮ್ಮ ಸಮಾಜ ಒಗ್ಗಟ್ಟಾಗಿ ನಿಂತಿತ್ತು, ಇದೀಗ ಮತ್ತೆ ಅಂತಹ ಕೆಲಸಕ್ಕೆ ಸಿದ್ದರಾಮಯ್ಯ ಹಿಂಬಾಗಿಲಿನಿಂದ ಕೈಹಾಕಿದ್ದಾರೆ, ನಾವೆಲ್ಲರೂ ಒಂದಾಗಿದ್ದೇವೆ.
ಇದನ್ನು ನಮ್ಮ ಮಠಾಧೀಶರು ಹಾಗೂ ಸಮಾಜಕ್ಕೂ ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಸಮಾಜ ಒಗ್ಗೂಡಿಸಲು ತೀರ್ಮಾನ
ಸಮಾಜದ ಗೊಂದಲ ಸರಿಪಡಿಸಲು ಮತ್ತು ಒಗ್ಗೂಡಿಸಲು, ಸಮಾಜವನ್ನು ಸಮರ್ಪಕ ದಿಕ್ಕಿನಲ್ಲಿ ಒಯ್ಯುವಲ್ಲಿ ಕಾರ್ಯಪ್ರವೃತ್ತರಾಗಲು ತೀರ್ಮಾನ ಮಾಡಿದ್ದೇವೆ.
ಕೆಲವು ಹಿರಿಯರು ವೀರಶೈವ ಮಹಾಸಭಾದ ಪ್ರಮುಖರ ಜೊತೆ ಅಲ್ಲದೆ, ಪಂಚ ಪೀಠಾಧೀಶ್ವರರು, ವಿರಕ್ತ ಮಠದ ಸ್ವಾಮೀಜಿಗಳ ಜೊತೆ ಚರ್ಚಿಸಿ, ಒಳಪಂಗಡ ಮರೆತು ಒಟ್ಟಾಗಿ, ಒಂದಾಗಿ ಸಮಾಜ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಮುಂದೆ ಸಾಗಲು ನಿರ್ಧರಿಸಿದ್ದೇವೆ ಎಂದರು.
ಇಂದಿನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಅಲ್ಲದೆ ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ, ಕೇಂದ್ರದ ಮಾಜಿ ಸಚಿವ ಸಿದ್ದೇಶ್ವರ್, ಪ್ರಮುಖರಾದ ವಿಜಯ್ ಸಂಕೇಶ್ವರ್ ಸೇರಿದಂತೆ ಶಾಸಕರು ಹಾಗೂ ಮಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

