ಬೆಂಗಳೂರು:ವಸತಿ ಸಚಿವ ಜಮೀರ್ ಅಹಮದ್ ಖಾನ್ ಸಿಡಿಸಿದ ಬಾಂಬ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಆಂತರಿಕ ಕದನದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಅಧಿಕಾರ ಹಂಚಿಕೆ ಕುರಿತಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬಣಗಳ ನಡುವೆ ವಾದ-ವಿವಾದ ಬಹಿರಂಗವಾಗೇ ನಡೆದು, ಸರ್ಕಾರ ಮತ್ತು ಪಕ್ಷಕ್ಕಾಗುತ್ತಿರುವ ಮುಜುಗರ ತಪ್ಪಿಸಲು ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಳ್ಳಂ ಬೆಳಗ್ಗೆ ನಗರಕ್ಕೆ ಧಾವಿಸಿದರು.
ಶಿವಕುಮಾರ್ ಜೊತೆ ಚರ್ಚೆ
ಪುಲಿಕೇಶಿ ವಿಧಾನಸಭಾ ಕ್ಷೇತ್ರದಲ್ಲಿಯೂ ಮತಗಳ್ಳತನ ಪ್ರಕರಣದ ಪರಿಶೀಲನೆ ನೆಪದಲ್ಲಿ ಸುರ್ಜೇವಾಲ ನಗರಕ್ಕೆ ಆಗಮಿಸುತ್ತಿದ್ದಂತೆ ಶಿವಕುಮಾರ್ ಅವರನ್ನು ತಾವು ತಂಗಿದ್ದ ಹೋಟೆಲ್ಗೆ ಕರೆಸಿಕೊಂಡು ಮುಖಾಮುಖಿ ಚರ್ಚೆ ಮಾಡಿದ್ದಾರೆ.
ನಂತರ ಶಿವಕುಮಾರ್ ಜೊತೆಗೂಡಿ ಪುಲಿಕೇಶಿ ವಿಧಾನಸಭಾ ಕ್ಷೇತ್ರದ ಕೆಲವು ಭಾಗಗಳಿಗೆ ತೆರಳಿ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರ ಜೊತೆ ಮತಗಳ್ಳತನದ ಬಗ್ಗೆ ಚರ್ಚೆ ನಡೆಸಿದರು.
ಕ್ಷೇತ್ರದಿಂದ ಹಿಂತಿರುಗಿದ ನಂತರವೂ ಸುರ್ಜೇವಾಲ ಹಾಗೂ ಶಿವಕುಮಾರ್ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಶಾಸಕರಿಗೂ ಬುಲಾವ್
ಸಂಜೆವರೆಗೂ ಮುಖ್ಯಮಂತ್ರಿ ಭೇಟಿ ಮಾಡದ ಸುರ್ಜೇವಾಲ, ಸಂಪುಟದ ಹಿರಿಯ ಸಚಿವರು ಮತ್ತು ಶಾಸಕರನ್ನು ತಮ್ಮ ಬಳಿ ಕರೆಸಿಕೊಂಡು ಚರ್ಚಿಸಿದರು.
ದಸರಾ ಉತ್ಸವಕ್ಕೂ ಮುನ್ನ ಜಮೀರ್ ಅಹಮದ್ ಬಳ್ಳಾರಿಯಲ್ಲಿ ಹಠಾತ್ ಹೇಳಿಕೆ ನೀಡಿ, ಇನ್ನು 8-10 ದಿನದಲ್ಲಿ ಮುಖ್ಯಮಂತ್ರಿ ಅವರು ಸಂಪುಟ ಪುನರ್ ರಚನೆ ಮಾಡಲಿದ್ದು ಬಿ.ನಾಗೇಂದ್ರ ಅವರನ್ನು ಮಂತ್ರಿಮಂಡಲಕ್ಕೆ ಮತ್ತೆ ಸೇರ್ಪಡೆ ಮಾಡಿಕೊಳ್ಳುತ್ತಾರೆ ಎಂದಿದ್ದರು.
ಅಲ್ಲದೆ, ಸಿದ್ದರಾಮಯ್ಯ ಅವರೇ ಐದು ವರ್ಷಗಳ ಆಡಳಿತಾವಧಿ ಪೂರ್ಣಗೊಳಿಸುತ್ತಾರೆ ಎಂದು ಬಾಂಬ್ ಸಿಡಿಸಿದ್ದರು.
ಶಿವಕುಮಾರ್ ಬಣ
ತದನಂತರ ಶಿವಕುಮಾರ್ ಅವರ ಹತ್ತಿರ ಸಂಬಂಧಿ ಹಾಗೂ ಶಾಸಕ ರಂಗನಾಥ್ ಸೇರಿದಂತೆ ಕೆಲವರು ಉಪಮುಖ್ಯಮಂತ್ರಿ ಪರ ಬಹಿರಂಗವಾಗಿಯೇ ಹೇಳಿಕೆ ನೀಡಿ, ಶಿವಕುಮಾರ್ ಪಕ್ಷಕ್ಕಾಗಿ ಹಗಲು-ರಾತ್ರಿ ದುಡಿದಿದ್ದು, ಇದೇ ಅವಧಿಯಲ್ಲೇ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದರು.
ಶಿವಕುಮಾರ್ ಬೆಂಬಲಿಗರು ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುತ್ತಿದ್ದಂತೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರು ಪ್ರವಾಸದಲ್ಲಿದ್ದ ಸಿದ್ದರಾಮಯ್ಯ, ಐದು ವರ್ಷ ಪೂರ್ಣಾವಧಿಗೆ ನಾನೇ ಮುಖ್ಯಮಂತ್ರಿ ಎನ್ನುವ ಮೂಲಕ ತಿರುಗೇಟು ನೀಡಿದರು.
ಅಲ್ಲದೆ, ಮುಂದಿನ ವರ್ಷದ ದಸರಾ ಮಹೋತ್ಸವವನ್ನೂ ನಾನೇ ನಡೆಸುತ್ತೇನೆ ಎಂಬ ಹೇಳಿಕೆ ನೀಡುತ್ತಿದ್ದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಕೆಲವರು ಮುಖ್ಯಮಂತ್ರಿ ಹೇಳಿಕೆ ಬೆಂಬಲಿಸಿದರು.
ನೋಟಿಸ್ ಜಾರಿ
ಇದರ ಬೆನ್ನಲ್ಲೇ ಶಿವಕುಮಾರ್ ತಮ್ಮ ಪರ ಧ್ವನಿ ಎತ್ತಿದವರಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದರಾದರೂ, ಮುಖ್ಯಮಂತ್ರಿ ಪರ ಹೇಳಿಕೆ ನೀಡಿದ ಸಚಿವರು ಮತ್ತು ಇತರರಿಗೆ ಯಾವುದೇ ವಿವರಣೆ ಕೇಳಿ ನೋಟಿಸ್ ಜಾರಿ ಮಾಡದಿರುವುದು ಕಾಂಗ್ರೆಸ್ ವಲಯದಲ್ಲಿ ಕುತೂಹಲ ಮೂಡಿಸಿದೆ.
ಪಕ್ಷದ ವರಿಷ್ಠರು ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಬಹಿರಂಗ ಚರ್ಚೆ ಮಾಡಬಾರದೆಂದು ಪದೇ ಪದೇ ಎಚ್ಚರಿಸಿದರೂ ಮುಖ್ಯಮಂತ್ರಿ ಆಪ್ತ ಬಳಗದ ಸಚಿವರುಗಳೇ ಬಾಂಬ್ ಸಿಡಿಸಿ ರಾಜಕೀಯ ಮಾಡುತ್ತಿದ್ದಾರೆಂದು ಶಿವಕುಮಾರ್ ಆಪ್ತರು ವರಿಷ್ಠರಿಗೂ ದೂರು ತಲುಪಿಸಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ಉಸ್ತುವಾರಿ ಸುರ್ಜೇವಾಲ ನಗರಕ್ಕೆ ಧಾವಿಸಿ, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುತ್ತಿದ್ದಾರೆ.

