ಬೆಂಗಳೂರು:ಗಣತಿದಾರರಿಗೆ ಆಸ್ತಿ ವಿವರಗಳ ಮಾಹಿತಿ ನೀಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರಾಕರಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ಸದಾಶಿವನಗರದ ನಿವಾಸದಲ್ಲಿ ಗಣತಿದಾರರಿಗೆ ತಮ್ಮ ಕುಟುಂಬದ ವಿವರ ನೀಡುವ ಮೂಲಕ ಉದ್ಘಾಟಿಸಿದರು.
ಪತ್ನಿ ಉಷಾ ಜೊತೆಗೂಡಿ ಸಮೀಕ್ಷೆದಾರರ ಸುದೀರ್ಘ ಪ್ರಶ್ನೆಗಳಲ್ಲಿ ಕೆಲವಕ್ಕೆ ಉತ್ತರ ನೀಡಿ, ಇನ್ನು ಕೆಲವು ಪ್ರಶ್ನೆಗಳಿಗೆ ಇಲ್ಲ ಎಂಬುದಾಗಿ ತಿಳಿಸಿದರು.
ಅನಗತ್ಯ ಪ್ರಶ್ನೆಗಳು
ಹಿಂದುಳಿದ ವರ್ಗಗಳ ಆಯೋಗ ಅನಗತ್ಯವಾಗಿ ಪ್ರಶ್ನೆಗಳನ್ನು ತುಂಬಿರುವುದಕ್ಕೆ ಸಮೀಕ್ಷೆದಾರರು ಮತ್ತು ಹಿರಿಯ ಅಧಿಕಾರಿಗಳ ಮುಂದೆಯೇ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ನಾನು ಹಿಂದೂ ಒಕ್ಕಲಿಗ ಸಮುದಾಯಕ್ಕೆ ಸೇರಿದವನು, ಉಪಜಾತಿ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಒಂದರ ನಂತರ ಒಂದರಂತೆ ಗಣತಿದಾರರು ಪ್ರಶ್ನೆ ಕೇಳುತ್ತಿರುವುದಕ್ಕೆ ಸ್ವಲ್ಪ ಆವೇಶಕ್ಕೂ ಒಳಗಾದರು.
ನ್ಯಾಯಾಲಯವೇ ಹೇಳಿದೆ
ಒಂದು ಹಂತದಲ್ಲಿ ನ್ಯಾಯಾಲಯವೇ ಹೇಳಿದೆ, ಅಗತ್ಯ ಮಾಹಿತಿಯನ್ನಷ್ಟೇ ನೀಡುತ್ತೇನೆ, ನಮ್ಮ ಮನೆಯಲ್ಲಿರುವ ಚಿನ್ನಾಭರಣ, ಆಸ್ತಿ ಬಗ್ಗೆ ಮಾಹಿತಿ ನೀಡುವುದಿಲ್ಲ.
ನಾನು ಇದುವರೆಗೂ ಯಾವುದೇ ಮೀಸಲಾತಿ ಸೌಲಭ್ಯ ಪಡೆದಿಲ್ಲ, ಅಷ್ಟೇ ಅಲ್ಲ ವಸತಿ ಶಾಲೆಗಳಲ್ಲಿ ಶಿಕ್ಷಣವನ್ನೂ ಪಡೆದಿಲ್ಲ, ಶಿಕ್ಷಣಕ್ಕಾಗಿ ಯಾವುದೇ ಸರ್ಕಾರಿ ಸೌಲತ್ತು ಪಡೆದಿಲ್ಲ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.
ಉದ್ಯೋಗ ಏನು ಎಂಬ ಪ್ರಶ್ನೆಗೆ ರಾಜಕೀಯ ಮತ್ತು ಉದ್ಯಮಿಯಾಗಿ ತೊಡಗಿಸಿಕೊಂಡಿದ್ದೇನೆ ಎಂದರು.
ಇಷ್ಟೆಲ್ಲಾ ಮಾಹಿತಿ ಅಗತ್ಯವೇ
ಅರವತ್ತು ಪ್ರಶ್ನೆಗಳ ಸರಮಾಲೆ ಆಲಿಸಿದ ನಂತರ ಅಲ್ಲಿಯೇ ಇದ್ದ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ತುಳಸಿ ಮದಿನೇನಿ, ಜಿಬಿಎ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ನಗರ ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಹಾಗೂ ರಾಜೇಂದ್ರನ್ ಅವರುಗಳನ್ನು ಉದ್ದೇಶಿಸಿ, ಇಷ್ಟೆಲ್ಲಾ ಮಾಹಿತಿ ಕೇಳುವ ಅಗತ್ಯವಿದೆಯೇ ಎಂದು ಸಲಹೆ ನೀಡಿದರು.
ಸಮೀಕ್ಷೆದಾರರಿಗೆ ಮಾಹಿತಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಾರ್ವಜನಿಕರು ಗಣತಿದಾರರಿಗೆ ಮಾಹಿತಿ ನೀಡಬೇಕು ಎಂದರು.
ತಾಳ್ಮೆ ಕಳೆದುಕೊಳ್ಳುವಷ್ಟು ಪ್ರಶ್ನೆ
ತಾಳ್ಮೆ ಕಳೆದುಕೊಳ್ಳುವಷ್ಟು ದೀರ್ಘ ಪ್ರಶ್ನೆಗಳನ್ನು ಕೇಳುತ್ತಾರೆ, ಇದರ ಅಗತ್ಯವಿಲ್ಲ, ಗ್ರಾಮೀಣ ಭಾಗದಲ್ಲಾದರೆ ವಿವರಣೆ ನೀಡುತ್ತಾರೆ, ನಗರ ಪ್ರದೇಶಗಳಲ್ಲಿ ಎಲ್ಲರೂ ಒತ್ತಡದಲ್ಲಿ ಇರುವುದರಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲು ಸಾಧ್ಯವಿಲ್ಲ.
ಆದಷ್ಟು ಕಡಿಮೆ ಪ್ರಶ್ನೆಗಳನ್ನು ಕೇಳಿ ಎಂಬುದಾಗಿ ಅಧಿಕಾರಿಗಳಿಗೆ ತಿಳಿಸಿದ್ದೇನೆ, ಯಾರಿಗೂ ಬಲವಂತ ಮಾಡಿ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಬೇಡಿ ಎಂದಿದ್ದೇನೆ ಎಂದರು.

