ಬೆಂಗಳೂರು:ದೀಪಾವಳಿ ಕೊಡುಗೆ ಕೊಡುತ್ತಿದ್ದೇವೆ ಎನ್ನುತ್ತಾ, ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
’ಬಿ’ ಖಾತಾದಿಂದ ’ಎ’ ಖಾತಾಗೆ ಪರಿವರ್ತನೆ ಮಾಡುವ ಹೆಸರಿನಲ್ಲಿ 15,000 ಕೋಟಿ ರೂ.ವರೆಗೆ ಸುಲಿಗೆ ಮಾಡಲು ಹೊರಟಿದೆ ಎಂದರು.
ಜನರಿಗೆ ಮಹಾನ್ ದೋಖಾ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ದೊಡ್ಡ ಜಾಹೀರಾತು ನೋಡಿ ರಾಜ್ಯ ಸರ್ಕಾರ ದೀಪಾವಳಿ ಕೊಡುಗೆ ನೀಡುತ್ತಿದೆ ಎಂದುಕೊಂಡಿದ್ದೆ, ಇದು ಜನರಿಗೆ ಮಾಡುತ್ತಿರುವ ಮಹಾನ್ ದೋಖಾ ಎಂದರು.
ಖಾತಾ ಪರಿವರ್ತನೆ ಅರ್ಜಿಗೆ 500 ರೂ. ಶುಲ್ಕ, ಇದರ ಹೆಸರಿನಲ್ಲೇ ನೂರಾರು ಕೋಟಿ ರೂ. ಸುಲಿಗೆ, 30×40 ನಿವೇಶನಕ್ಕೆ 4 ರಿಂದ 8 ಲಕ್ಷ ರೂ.ವರೆಗೆ ಕಿತ್ತುಕೊಳ್ಳುತ್ತಿದ್ದಾರೆ, ಈ ಮೊದಲು 10 ರಿಂದ 13 ಸಾವಿರ ರೂ. ಕಟ್ಟಬೇಕಿದ್ದ ಬೆಂಗಳೂರು ಜನರು ಇನ್ನು ಮುಂದೆ ಲಕ್ಷಗಳಲ್ಲಿ ಹಣ ತೆರಬೇಕಿದೆ.
ಜನರ ಮೇಲೆ ತೆರಿಗೆ ವಿಧಿಸಿ 6ನೇ ಗ್ಯಾರಂಟಿ ಕೊಡಲು ಸರ್ಕಾರ ಹೊರಟಿದೆ, ಕೇವಲ ಹಣ ಮಾಡುವುದಕ್ಕೆ ಸೀಮಿತವಾಗಿದ್ದು ಪ್ರತಿಯೊಂದರಲ್ಲೂ ದುಡ್ಡು ಮಾಡುವ ಆಲೋಚನೆ ಮಾಡುತ್ತಿದೆ.
ಹಣಕ್ಕೆ ಕೈ ಹಾಕುತ್ತಿದೆ
ಸರ್ಕಾರದ ಬಳಿ ಹಣ ಇಲ್ಲ, ಕಂಡ ಕಂಡ ಕಡೆ ಹಣಕ್ಕೆ ಕೈ ಹಾಕುತ್ತಿದೆ, ಬೆಂಗಳೂರಿನ ಗುಂಡಿ ಮುಚ್ಚುವುದಿರಲಿ, ರಾಜ್ಯದ ಗುಂಡಿಗಳನ್ನೂ ಮುಚ್ಚೋಕೆ ಆಗುತ್ತಿಲ್ಲ.
ನಾನು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಎಷ್ಟು ಕೊಟ್ಟಿದ್ದೇನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ಕೊಟ್ಟಿದ್ದಾರೆ ಎಂಬುದನ್ನು ಜನರ ಮುಂದೆ ಇಡಲಿ ಎಂದರು.

