ಬೆಂಗಳೂರು:ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಬಿಜೆಪಿ-ಜೆಡಿಎಸ್ ಸಂಘಟಿತ ಹೋರಾಟಕ್ಕೆ ನಿರ್ಧರಿಸಿವೆ.
ಮೈತ್ರಿ ಪಕ್ಷಗಳ ಸಮನ್ವಯತೆ ಉದ್ದೇಶದಿಂದ ರಾಜ್ಯ ಮತ್ತು ಗ್ರೇಟರ್ ಬೆಂಗಳೂರಿಗೆ ಪ್ರತ್ಯೇಕ ಸಮನ್ವಯ ಸಮಿತಿಗಳನ್ನು ರಚಿಸಲು ತೀರ್ಮಾನಿಸಿವೆ.
ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಇಂದಿಲ್ಲಿ ಭೇಟಿ ಮಾಡಿ ದೀಪಾವಳಿ ಶುಭಾಶಯ ವಿನಿಮಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇನ್ನೆರಡು ವಾರದಲ್ಲಿ ಸಮನ್ವಯ ಸಮಿತಿಗಳು ರಚನೆ ಆಗಲಿವೆ ಎಂದರು.
ಜೆಡಿಎಸ್ ಸದಸ್ಯರ ಹೆಸರು
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ, ಭ್ರಷ್ಟಾಚಾರ ವಿರುದ್ಧ ಹೋರಾಟ, ಮುಂಬರುವ ಚುನಾವಣೆಗಳನ್ನು ಮೈತ್ರಿ ಪಕ್ಷಗಳು ಸಂಘಟಿತವಾಗಿ ಎದುರಿಸುವ ಸಂಬಂಧ ಸಮನ್ವಯ ಸಮಿತಿ ರಚಿಸುವಂತೆ ಕುಮಾರಸ್ವಾಮಿ ಸಲಹೆ ಮಾಡಿದ್ದಲ್ಲದೆ, ಇನ್ನು ಮೂರ್ನಾಲ್ಕು ದಿನದಲ್ಲಿ ಸಮಿತಿಯಲ್ಲಿ ಜೆಡಿಎಸ್ ಸದಸ್ಯರ ಹೆಸರನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ವರಿಷ್ಠರು ಮತ್ತು ನಾಯಕರೊಂದಿಗೆ ಈ ಸಂಬಂಧ ಚರ್ಚಿಸಿ ಸಮನ್ವಯ ಸಮಿತಿ ರಚಿಸುವುದಾಗಿ ತಿಳಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಗೆ ರಾಜ್ಯದ ಜನ ಹಿಡಿಶಾಪ ಹಾಕುತ್ತಿದ್ದಾರೆ, ಮಹಾನಗರದ ಅವ್ಯವಸ್ಥೆ ನೀವೇ ನೋಡುತ್ತಿದ್ದೀರಿ ಎಂದು ಮಾಧ್ಯಮದವರಿಗೆ ತಿಳಿಸಿದರು.
ಸಚಿವರಿಗೆ ಅಹಂಕಾರ
ಸಚಿವರು ಅಹಂಕಾರದಿಂದ ಮೆರೆಯುತ್ತಿದ್ದಾರೆ, ಮೋಹನ್ದಾಸ್ ಪೈ, ಕಿರಣ್ ಮಜುಂದಾರ್ ಷಾ ಅವರಂಥ ಹಿರಿಯರು ಬೆಂಗಳೂರಿನ ರಸ್ತೆಗಳ ಕುರಿತು ಸಲಹೆ ನೀಡಿದರೆ, ಕಿವಿಗೆ ಹಾಕಿಕೊಳ್ಳುತ್ತಿಲ್ಲ, ಸಚಿವರೇ ನಿಂದಿಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಇದು ಶೋಭೆ ತರುವುದಿಲ್ಲ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಟೀಕೆ, ಸಲಹೆಗಳು ಬಂದಾಗ, ಉದ್ಯಮಿ ಮೋಹನ್ದಾಸ್ ಪೈ ಅವರನ್ನು ಮನೆಗೆ ಕರೆಸಿಕೊಂಡು ಚಹಾ ನೀಡಿ ಸಲಹೆ ಪಡೆಯುವ ಮೂಲಕ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದರು.
ಈಗ ತುಘಲಕ್ ಸರ್ಕಾರ ಇದೆ ಎಂಬುದಾಗಿ ಜನ ಹೇಳುತ್ತಿದ್ದಾರೆ, ಭ್ರಷ್ಟಾಚಾರದ ಹಣ ಬಿಹಾರ ಚುನಾವಣೆಗೆ ಬಳಕೆ ಆಗುತ್ತಿದೆ ಎಂಬುದಕ್ಕೆ ಸಾಕ್ಷಿ ಕೊಡಿ ಎನ್ನುತ್ತಿದ್ದಾರೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಣದ ಬಳಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮರೆತು ಹೋಯಿತೇ ಎಂದರು.
ವಾಲ್ಮೀಕಿ ಹಣ ತೆಲಂಗಾಣಕ್ಕೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ತೆಲಂಗಾಣ ಬ್ಯಾಂಕ್ನ ಸಾವಿರಾರು ಬೇನಾಮಿ ಖಾತೆಗೆ ಹಾಕಿ ಚಿನ್ನ ಖರೀದಿಸಲಿಲ್ಲವೇ, ಈ ಹಣವನ್ನು ಲೋಕಸಭಾ ಚುನಾವಣೆಯಲ್ಲೂ ಬಳಸಲಾಗಿತ್ತು ಎಂಬುದಾಗಿ ಜಾರಿ ನಿರ್ದೇಶನಾಲಯವೇ (ಇ.ಡಿ) ನೇರವಾಗಿ ಆರೋಪಿಸಿದೆ.
ನೀರಾವರಿ ಇಲಾಖೆಯಲ್ಲಿ ಶೇ.60 ರಿಂದ 70ರಷ್ಟು ಕಮಿಷನ್ ಕೇಳುತ್ತಿರುವ ಕುರಿತು ಗುತ್ತಿಗೆದಾರರ ಸಂಘ ಪತ್ರ ಬರೆದಿದೆ, ಅಧಿಕೃತ ದೂರು ನೀಡಲಿ ಎಂಬುದಾಗಿ ಶಿವಕುಮಾರ್ ಹೇಳಿದ್ದಾರೆ, ಅಧಿಕೃತವಾಗಿ ಪತ್ರವೇ ಬರೆದಿರುವಾಗ ಇನ್ಯಾವ ದೂರು ಬೇಕು.
ಮರಳು ಮಾಫಿಯ ನಡೆಯತ್ತಿದೆ ಎಂಬುದಾಗಿ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪತ್ರ ಬರೆದಿದ್ದಾರೆ, ಕರ್ನಾಟಕ ಸರ್ಕಾರಕ್ಕೆ ಇದರಿಂದ 400 ರಿಂದ 500 ಕೋಟಿ ರೂ. ನಷ್ಟವಾಗುತ್ತಿದೆ ಎಂದಿದ್ದಾರೆ, ರಾಜ್ಯದಲ್ಲಿನ ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರು.
ಇಸ್ಪೀಟ್, ಮಟ್ಕಾ ದಂಧೆ
ಶಿವಮೊಗ್ಗ ಸೇರಿ ಅನೇಕ ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿಗಳು, ಆಡಳಿತ ಪಕ್ಷದ ಶಾಸಕರ ಕುಮ್ಮಕ್ಕಿನಿಂದ ಇಸ್ಪೀಟ್, ಒಸಿ, ಮಟ್ಕಾ ದಂಧೆ ನಡೆಯುತ್ತಿದೆ, ಬಡ ಜನತೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬೇರೆ ರಾಜ್ಯಗಳ ಪ್ರವಾಸ ವೇಳೆ ಕರ್ನಾಟಕ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿ ಎನ್ನುತ್ತಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ, ನಿಮ್ಮ ಗ್ಯಾರಂಟಿಗಳು ರೋಲ್ ಮಾಡೆಲ್ ಅಲ್ಲ, ಉಡಾಫೆ ಮಾತುಗಳನ್ನು ಬಿಡಿ, ರಾಜ್ಯ ಕೊಳ್ಳೆ ಹೊಡೆಯುವುದನ್ನು ಜನತೆ ಗಮನಿಸುತ್ತಿದ್ದಾರೆ.
ಪ್ರಿಯಾಂಕ್ ಖರ್ಗೆಗೆ ದುರ್ಬುದ್ಧಿ
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಏಕೆ ದುರ್ಬುದ್ಧಿ ಬಂದಿತೋ ಗೊತ್ತಿಲ್ಲ, ಅನಾವಶ್ಯಕವಾಗಿ ಆರ್ಎಸ್ಎಸ್ ಬಗ್ಗೆ ಟೀಕಿಸುತ್ತಿದ್ದಾರೆ, ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವೇ ಅಥವಾ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕುವ ತಂತ್ರವೇ ಗೊತ್ತಿಲ್ಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದಂತೆ ಪ್ರಿಯಾಂಕ್ ಖರ್ಗೆ ಏಕಾಂಗಿಯಾಗಿದ್ದಾರೆ.
ಆಡಳಿತ ಪಕ್ಷದ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ, ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ಯಶಸ್ವಿಯಾಗಿ ನಡೆಯಲಿದೆ, ಯಾವುದೇ ಗೊಂದಲವಿಲ್ಲ ಎಂದರು.

