ಬೆಂಗಳೂರು:ಅಧಿಕಾರ ಹಸ್ತಾಂತರ ಕೂಗಿನ ಬೆನ್ನಲ್ಲೇ ಮುಖ್ಯಮಂತ್ರಿ ಆಪ್ತ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣ ತಮ್ಮ ತುಮಕೂರಿನ ಕ್ಯಾತ್ಸಂದ್ರ ನಿವಾಸದಲ್ಲೇ ಅಹಿಂದ ಸಭೆ ನಡೆಸುವ ಮೂಲಕ ನವೆಂಬರ್ ಕ್ರಾಂತಿಗೆ ಮುನ್ನುಡಿ ಬರೆಯುತ್ತಿದ್ದಾರೆ.
ನವೆಂಬರ್ 7ರಂದು ತುಮಕೂರು ವಿಶ್ವ ವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಹಾಗೂ ಅಲ್ಲಿನ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ 300 ಹಾಸಿಗೆಗಳ ನೂತನ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಪುಟ ಸಹೋದ್ಯೋಗಿಗಳು ಭಾಗಿಯಾಗಲಿದ್ದಾರೆ.
ಡಿ.ಕೆ.ಶಿವಕುಮಾರ್ಗೂ ಆಹ್ವಾನ
ಸರ್ಕಾರಿ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಆಹ್ವಾನ ನೀಡಿದ್ದಾರೆ.
ಆದರೆ, ಶಿವಕುಮಾರ್ ಈ ಕಾರ್ಯಕ್ರದಲ್ಲಿ ಭಾಗಿಯಾಗದೆ, ಇಂದಿನಿಂದ ಮೂರು ದಿನ ದೆಹಲಿ ಹಾಗೂ ಬಿಹಾರ ಪ್ರವಾಸ ಕೈಗೊಂಡಿದ್ದಾರೆ.
ರಾಜಣ್ಣ ಈ ಅವಕಾಶವನ್ನೇ ಬಳಸಿಕೊಂಡು, ಮುಖ್ಯಮಂತ್ರಿ ಅವರಿಗೆ ಬಲ ತುಂಬುವ ಮತ್ತು ಸದ್ಯಕ್ಕೆ ನಾಯಕತ್ವ ಬದಲಾವಣೆ ಬೇಡ ಎಂಬ ನಿರ್ಣಯ ಕೈಗೊಳ್ಳುವ ಉದ್ದೇಶದಿಂದ ಅಹಿಂದ ಸಭೆ ಕರೆದಿದ್ದಾರೆ.
’ವೈಟ್ ಹೌಸ್’ನಲ್ಲಿ ಬೋಜನಕೂಟ
ಕ್ಯಾತ್ಸಂದ್ರದಲ್ಲಿನ ರಾಜಣ್ಣ ನಿವಾಸ ’ವೈಟ್ ಹೌಸ್’ನಲ್ಲಿ ಮಧ್ಯಾನ್ಹ 1-30ರಿಂದ 3ರ ಸಮಯದಲ್ಲಿ ಅಹಿಂದ ನಾಯಕರ ಸಭೆ ಮತ್ತು ಬೋಜನಕೂಟ ಏರ್ಪಡಿಸಲಾಗಿದೆ.
ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಹಿರಿಯ ಸಹೋದ್ಯೋಗಿಗಳಾದ ಡಾ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ.ಮಹದೇವಪ್ಪ, ಬೈರತಿ ಸುರೇಶ್, ಜಮೀರ್ ಅಹಮದ್ ಖಾನ್ ಸೇರಿದಂತೆ 70 ಮಂದಿ ಅಹಿಂದ ಸಚಿವರು, ಶಾಸಕರಿಗೆ ರಾಜಣ್ಣ ಬೋಜನಕೂಟಕ್ಕೆ ಆಹ್ವಾನಿಸಿದ್ದಾರೆ.
ರಾಜಣ್ಣ 150 ಮುಖಂಡರಿಗೆ ಬೋಜನಕೂಟದ ವ್ಯವಸ್ಥೆ ಮಾಡಿದ್ದು, 70ಕ್ಕೂ ಹೆಚ್ಚು ಸಚಿವರು, ಶಾಸಕರು ಭಾಗವಹಿಸಲಿದ್ದಾರಂತೆ.
ಕ್ರಾಂತಿಯ ಮೊದಲ ಸಭೆ
ಸಿದ್ದರಾಮಯ್ಯ ಅವರನ್ನು ಬೆಂಬಲಿಸುವುದು ಹಾಗೂ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರಬೇಕು, ಅವರ ಹಿಂದೆ ನಾವಿದ್ದೇವೆ ಎಂಬುದನ್ನು ವರಿಷ್ಠರ ಗಮನಕ್ಕೆ ತರುವ ನವೆಂಬರ್ ಕ್ರಾಂತಿಯ ಮೊದಲ ಸಭೆ ಇದಾಗಲಿದೆ.
’ವೈಟ್ಹೌಸ್’ನಲ್ಲಿ ಬೋಜನಕೂಟ ಹಾಗೂ ಸಭೆ ನಂತರ ಸಿದ್ದರಾಮಯ್ಯ ಚಿತ್ರದುರ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ, ಅವರು ತೆರಳಿದ ನಂತರ ಉಳಿದ ನಾಯಕರು ತಮ್ಮ ಗೌಪ್ಯ ಸಭೆ ಮುಂದುವರೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಾ.ಪರಮೇಶ್ವರ್ ತುಮಕೂರಿನಲ್ಲೇ ಬಿಡಾರ
ಸರ್ಕಾರಿ ಸಮಾರಂಭ ಮತ್ತು ರಾಜಣ್ಣ ಅವರ ಮನೆಯಲ್ಲಿನ ಬೋಜನಕೂಟ ಯಶಸ್ವಿಗೊಳಿಸುವ ಉದ್ದೇಶದಿಂದ ಡಾ.ಪರಮೇಶ್ವರ್ ಸಹಾ ಕಳೆದ ಮೂರು ದಿನಗಳಿಂದ ತುಮಕೂರಿನಲ್ಲೇ ಬಿಡಾರ ಹೂಡಿದ್ದಾರೆ.
ಈ ಮಧ್ಯೆ, ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು ರಾಜಣ್ಣ ಊಟಕ್ಕೆ ಕರೆದಿದ್ದಾರೆ, ನಾನು ಸಿದ್ದರಾಮಯ್ಯ ಸೇರಿದಂತೆ ಕೆಲವು ಸಚಿವರು ಮತ್ತು ಶಾಸಕರು ಹೋಗುತ್ತಿದ್ದೇವೆ, ಇದರಲ್ಲಿ ತಪ್ಪೇನಿದೆ ಎಂದಿದ್ದಾರೆ.

