ಬೆಂಗಳೂರು:ಬಾಂಗ್ಲಾ ಸೇರಿದಂತೆ ಯಾವುದೇ ರಾಷ್ಟ್ರದ ಪ್ರಜೆಗಳು ಕರ್ನಾಟಕದಲ್ಲಿ ಅನಧಿಕೃತವಾಗಿ ನೆಲೆಸಿದ್ದರೆ ಅಂತಹವರನ್ನು ಪತ್ತೆ ಹಚ್ಚಿ ಹೊರಹಾಕುವ ಕೆಲಸ ಕ್ಷಿಪ್ರವಾಗಿ ನಡೆಯುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಿ, ಅವರನ್ನು ಕಾನೂನಾತ್ಮಕವಾಗಿ ಭಾರತದ ಗಡಿಗೆ ಬಿಡುವ ಕೆಲಸ ನಡೆದಿದೆ.
ಅಪರಾಧ ಚಟುವಟಿಕೆ
ಅಕ್ರಮ ವಲಸಿಗರಾಗಿ ಬಂದು ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಕೆಲವು ಅನುಮಾನಾಸ್ಪದ ವ್ಯಕ್ತಿಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು, ದಾಖಲೆಗಳನ್ನು ಪೋಲಿಸರು ಪರಿಶೀಲಿಸುತ್ತಿದ್ದಾರೆ.
ನಗರಗಳಲ್ಲಷ್ಟೇ ಅಲ್ಲದೆ, ದೊಡ್ಡ ದೊಡ್ಡ ಉದಿಮೆಗಳು ಮತ್ತು ಕಾಫಿ ತೋಟಗಳಲ್ಲಿ ಬಾಂಗ್ಲಾ ಪ್ರಜೆಗಳು ನೆಲೆಸಿದ್ದಾರೆಂಬ ಮಾಹಿತಿ ಬರುತ್ತಿವೆ.
ಕಟ್ಟೆಚ್ಚರಕ್ಕೆ ಸೂಚನೆ
ಇದನ್ನು ಗಮನದಲ್ಲಿ ಇಟ್ಟುಕೊಂಡು ವಿವಿಧ ಉದ್ದಿಮೆಗಳು, ತೋಟದ ಮಾಲೀಕರು ತಮ್ಮಲ್ಲಿರುವ ನೌಕರರ ಬಗ್ಗೆ ಪೂರ್ಣ ಮಾಹಿತಿಯನ್ನು ಸ್ಥಳೀಯ ಪೋಲಿಸ್ ಠಾಣೆಗಳಿಗೆ ನೀಡುವಂತೆ ಆದೇಶಿಸಲಾಗಿದೆ.
ಇಲಾಖೆ ಅಧಿಕಾರಿಗಳು ಹಠಾತ್ ಭೇಟಿ ನೀಡಿ ಸಂಶಯಾಸ್ಪದ ವ್ಯಕ್ತಿಗಳ ಗುರುತಿನಚೀಟಿ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ದಾಖಲೆ ಪರಿಶೀಲನೆ
ಬೆಂಗಳೂರು ನಗರ ಸೇರಿದಂತೆ ಕೆಲವು ಪಟ್ಟಣಗಳ ಸರ್ಕಾರಿ ಜಾಗದಲ್ಲಿ ಗುಂಪು ಗುಂಪಾಗಿ ಬೀಡುಬಿಟ್ಟಿರುವ ಅಕ್ರಮ ವಲಸಿಗರ ದಾಖಲೆ ಪರಿಶೀಲನೆ ಕಾರ್ಯವೂ ನಡೆದಿದೆ ಎಂದರು.
ಅಕ್ರಮ ವಲಸಿಗರು ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇದನ್ನು ಏಕಕಾಲದಲ್ಲಿ ನಿಯಂತ್ರಿಸಲು ಕಾರ್ಯಾಚರಣೆ ನಡೆದಿದೆ ಎಂದರು.

