ಮೈಸೂರು:ಸಂಕ್ರಾತಿ ಹಬ್ಬದ ನಂತರ ಬಜೆಟ್ ಸಿದ್ಧತೆ ಕೈಗೊಳ್ಳುವುದಲ್ಲದೆ, ಮಂತ್ರಿಮಂಡಲ ಪುನರ್ ರಚನೆಗೆ ವರಿಷ್ಠರ ಅನುಮತಿ ಕೋರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸುವುದರ ಮೂಲಕ ಅಧಿಕಾರ ಹಸ್ತಾಂತರ ವಿಷಯಕ್ಕೆ ಕೊನೆ ಮೊಳೆ ಹೊಡೆದಂತಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ಅಧಿಕಾರ ಹಸ್ತಾಂತರ ವಿವಾದಕ್ಕೆ ತೆರೆ ಎಳೆದಿರುವುದಲ್ಲದೆ, ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಯಾವುದೇ ಗೊಂದಲಗಳಿಗೆ ಒಳಗಾಗದಂತೆ ಅಭಿವೃದ್ಧಿ ಕಾರ್ಯಗಳಿಗೆ ಗಮನ ಹರಿಸುವಂತೆ ಪರೋಕ್ಷ ಸಂದೇಶ ನೀಡಿದ್ದಾರೆ.
ನಾನೇ ಮುಖ್ಯಮಂತ್ರಿ
ಮುಖ್ಯಮಂತ್ರಿ ಗಾದಿಗೇರಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೆರೆಮರೆಯಲ್ಲಿ ಒಂದೆಡೆ ಪ್ರಯತ್ನ ನಡೆಸಿದ್ದರೆ, ಮತ್ತೊಂದೆಡೆ ಉಳಿದ ಅವಧಿಗೂ ನಾನೇ ಮುಖ್ಯಮಂತ್ರಿ ಎಂಬಂತೆ ಸಿದ್ದರಾಮಯ್ಯ ಬಿಂಬಿಸಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸ್ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅವಧಿಯ ದಾಖಲೆಯನ್ನು ಜನರ ಆಶೀರ್ವಾದದಿಂದ ಮುರಿಯಲು ಸಾಧ್ಯವಾಗಿದೆ ಎಂಬುದಾಗಿ ಸಮರ್ಥಿಸಿಕೊಂಡಿದ್ದಾರೆ.
ದೇವರಾಜ್ ಅರಸ್ ಸುದೀರ್ಘ ಅವಧಿಯ ಮುಖ್ಯಮಂತ್ರಿ ದಾಖಲೆಯನ್ನು ತಮ್ಮ ಆಡಳಿತ ಮುರಿಯಲಿದ್ದು, ಅರಸು ಮೈಸೂರಿನವರೇ ಆಗಿರುವುದು ಸಂತೋಷದ ಸಂಗತಿಯಾಗಿದೆ.

ಹೋಲಿಕೆ ಸರಿಯಲ್ಲ
ಇದುವರೆಗೆ ತಾವು ಹದಿಮೂರು ಚುನಾವಣೆ ಎದುರಿಸಿ 8ಕ್ಕೂ ಹೆಚ್ಚು ಬಾರಿ ಗೆಲುವು ಸಾಧಿಸಿದ್ದು, ದೇವರಾಜ ಅರಸು ಜನಪ್ರಿಯ ನಾಯಕರಾಗಿದ್ದರು, ಅಂತಹ ಮಹಾನ್ ನಾಯಕನಿಗೂ, ನನಗೂ ಹೋಲಿಕೆ ಸರಿಯಲ್ಲ, ಅರಸು ಅವಧಿಯಲ್ಲಿ ರಾಜ್ಯದ ಪರಿಸ್ಥಿತಿ ವಿಭಿನ್ನವಾಗಿತ್ತು.
ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ, ನನ್ನ ಅವಧಿ ಮೀರಿಸುವ ನಾಯಕರೂ ಬರಬಹುದು, ನನಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವವರೂ ಬರಬಹುದು.
ದಾಖಲೆ ನಿರ್ಮಾಣ ಸಂದರ್ಭದ ಕುರುಹಾಗಿ ಸಾಧನಾ ಸಮಾವೇಶ ಆಯೋಜಿಸುವ ನಿರ್ಧಾರ ಕೈಗೊಂಡಿಲ್ಲ.
ತನಿಖೆಯಿಂದ ಸತ್ಯಾಸತ್ಯತೆ
ಬಳ್ಳಾರಿ ಸಂರ್ಘಷದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿರುವ ಘಟನೆ ಸಿಐಡಿ ತನಿಖೆಗೆ ವಹಿಸುವ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸಲಿದ್ದು, ತನಿಖೆ ನಂತರ ಸತ್ಯಾಸತ್ಯತೆ ತಿಳಿಯಲಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಿಂದ ರಾಜ್ಯಕ್ಕೆ ವಾರ್ಷಿಕ 12 ರಿಂದ 15 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ.
ಕೇಂದ್ರ ಸರ್ಕಾರವೇ ಸಂಪೂರ್ಣ ಅನುದಾನ ನೀಡುವ ಮನರೇಗಾ ಯೋಜನೆ ರದ್ದುಪಡಿಸಿ, ವಿಬಿ-ಜಿ-ರಾಮ್-ಜಿ ಕಾಯ್ದೆ ಜಾರಿಯಿಂದ ಕೇಂದ್ರ ಮತ್ತು ರಾಜ್ಯದ ಪಾಲು 60:40ರ ಅನುಪಾತವಾಗಿದ್ದು, ರಾಜ್ಯ ಸರ್ಕಾರದ ಮೇಲೆ ಸುಮಾರು 3,000 ಕೋಟಿ ರೂ. ಹೊರೆ ಬೀಳಲಿದೆ ಎಂದಿದ್ದಾರೆ.
ಹುಲಿಗಳ ಸಂಖ್ಯೆ ಹೆಚ್ಚಳ
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವ ಕುರಿತು ಅರಣ್ಯ ಇಲಾಖೆ ಸಭೆಯಲ್ಲಿ ಚರ್ಚಿಸಲಾಗುವುದು, ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಅರಣ್ಯಗಳಿಂದ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿವೆ.
ಹುಲಿಗಳ ಸೆರೆಹಿಡಿದು ಮತ್ತೊಂದು ಅರಣ್ಯ ಪ್ರದೇಶಕ್ಕೆ ವರ್ಗಾಯಿಸಲು ಕ್ರಮಕೈಗೊಳ್ಳುವಂತೆ ಅರಣ್ಯ ಸಿಬ್ಬಂದಿಗೆ ಸೂಚಿಸಲಾಗಿದೆ.
ಮೈಸೂರಿನ ಅರಮನೆ ಮುಂಭಾಗದಲ್ಲಿ ಬಲೂನ್ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟ ಮಹಿಳೆಯರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದಿದ್ದಾರೆ.

