ನವದೆಹಲಿ:ವಿಧಾನಮಂಡಲದ ಜಂಟಿ ಅಧಿವೇಶನ ಮುಗಿಯುತ್ತಿದ್ದಂತೆ ಅಧಿಕಾರ ಹಸ್ತಾಂತರ ಗೊಂದಲ ಬಗೆಹರಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಸಭೆ ನಂತರ ಶಿವಕುಮಾರ್ ಅವರಿಗೆ ಈ ಭರವಸೆ ದೊರೆತಿದೆ.
ಅಸ್ಸಾಂ ಚುನಾವಣೆ ಸಭೆ
ಪಕ್ಷ ಅಸ್ಸಾಂ ಚುನಾವಣಾ ಉಸ್ತುವಾರಿ ವಹಿಸಿದ್ದರಿಂದ ಶುಕ್ರವಾರ ರಾತ್ರಿ ನಡೆದ ಸಭೆಯಲ್ಲಿ ಶಿವಕುಮಾರ್ ಪಾಲ್ಗೊಂಡಿದ್ದರು.
ಸಭೆ ನಂತರ ಅಧಿಕಾರ ಹಸ್ತಾಂತರ ವಿಷಯ ಪ್ರಸ್ತಾಪಿಸಿ, ಈ ಹಿಂದೆ ನೀಡಿದ ಭರವಸೆ ಈಡೇರಿಸಿ, ಇನ್ನು ಹೆಚ್ಚು ದಿನ ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಸ್ಪಷ್ಟ ನುಡಿಗಳಲ್ಲಿ ತಿಳಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಎದುರೇ ಈ ಮಾತುಗಳನ್ನು ನಿಮ್ಮ ಗಮನಕ್ಕೆ ತಂದಿದ್ದೆ, ನಂತರವೂ ವಿಧಾನಮಂಡಲ ಅಧಿವೇಶನ ಕರೆಯಲಾಗಿದೆ ಎಂದಿದ್ದಾರೆ.
ರಾಹುಲ್ ಆಶ್ವಾಸನೆ
ಶಿವಕುಮಾರ್ ಮಾತು ಆಲಿಸಿದ ನಂತರ, ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಮ್ಮುಖದಲ್ಲೇ, ಜಂಟಿ ಅಧಿವೇಶನ ಕಲಾಪ ಮುಗಿಯುತ್ತಿದ್ದಂತೆ ಅಧಿಕಾರ ಹಸ್ತಾಂತರ ಗೊಂದಲ ಪರಿಹರಿಸುತ್ತೇವೆ ಎಂಬ ಆಶ್ವಾಸನೆಯನ್ನು ರಾಹುಲ್ ನೀಡಿದ್ದಾರೆ.
ಫೆಬ್ರವರಿ ಮೊದಲ ವಾರದಲ್ಲಿ ಎಲ್ಲದಕ್ಕೂ ಸ್ಪಷ್ಟ ಚಿತ್ರಣ ದೊರೆಯಲಿದ್ದು, ನೀವು ಅಸ್ಸಾಂ ಚುನಾವಣೆ ಕಡೆ ಗಮನ ಹರಿಸಿ ಎಂಬುದಾಗಿ ಶಿವಕುಮಾರ್ ಅವರಿಗೆ ಸೂಚಿಸಿದರು ಎನ್ನಲಾಗಿದೆ.
ಈ ಬೆಳವಣಿಗೆ ನಂತರವೇ ಶಿವಕುಮಾರ್ ತಾವು, ಜನವರಿ 18ರಿಂದ ಕೈಗೊಳ್ಳಬೇಕಿದ್ದ ದಾವೋಸ್ ವಿದೇಶ ಪ್ರವಾಸ ರದ್ದುಗೊಳಿಸಿದ್ದಾರೆ.
ವಿದೇಶ ಪ್ರವಾಸ ರದ್ದು
ಅವರ ಹಿಂದಿನ ಕಾರ್ಯಕ್ರಮದಂತೆ ಜನವರಿ 22 ಇಲ್ಲವೇ 27ಕ್ಕೆ ಹಿಂತಿರುಗಬೇಕಿತ್ತು, ರಾಹುಲ್ ಅವರಿಂದ ಸ್ಪಷ್ಟ ಭರವಸೆ ದೊರೆಯುತ್ತಿದ್ದಂತೆ ಪ್ರವಾಸ ರದ್ದು ಮಾಡಿದ್ದಾರೆ.
ಪ್ರವಾಸ ರದ್ದು ಮಾಡಿರುವ ಬಗ್ಗೆ ಸ್ವತಃ ಪತ್ರಿಕಾ ಹೇಳಿಕೆ ನೀಡಿರುವ ಶಿವಕುಮಾರ್, ಜನವರಿ 18ರಂದು ನಿಗದಿಯಾಗಿದ್ದ ’ವರ್ಲ್ಡ್ ಎಕನಾಮಿಕ್ ಫೋರಂ’ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುತ್ತಿಲ್ಲ.
ಬೆಂಗಳೂರು ಹಾಗೂ ನವದೆಹಲಿಯಲ್ಲಿ ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ತಮ್ಮ ದಾವೋಸ್ ಪ್ರವಾಸ ರದ್ದು ಮಾಡಿರುವುದಾಗಿ ತಿಳಿಸಿದ್ದಾರೆ.
ಕೆ.ಜೆ.ಜಾರ್ಜ್-ರಾಹುಲ್ ಭೇಟಿ
ಶಿವಕುಮಾರ್ ದೆಹಲಿಗೆ ತೆರಳಿದ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆ.ಜೆ.ಜಾರ್ಜ್ ಅವರನ್ನು ರಾಷ್ಟ್ರ ರಾಜಧಾನಿಗೆ ಕಳುಹಿಸಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಸಿದ್ದರು.
ಐದು ಮಂದಿಯನ್ನು ಕೈಬಿಟ್ಟು, ಏಳು ಮಂದಿಯನ್ನು ಮಂತ್ರಿ ಮಾಡಲು ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡಿ ಎಂದು ವಕಾಲತ್ತು ವಹಿಸಿದ್ದರು.
ಜನವರಿ 25 ಅಥವಾ 27ಕ್ಕೆ ಸಂಪುಟ ಪುನರ್ ರಚನೆಗೆ ಅವಕಾಶ ನೀಡಿ ನಂತರ ನೀವು ರಾಜಕೀಯವಾಗಿ ಯಾವುದೇ ನಿರ್ಧಾರ ಕೈಗೊಳ್ಳಿ, ಮುಖ್ಯಮಂತ್ರಿ ತಮ್ಮ ಸಂಪುಟ ಪುನರ್ ರಚಿಸುವುದಾಗಿ ಸಾರ್ವಜನಿಕವಾಗಿ ಭರವಸೆ ನೀಡಿದ್ದಾರೆ.
ಮಂತ್ರಿಮಂಡಲ ಪುನರ್ ರಚನೆಗೆ ಮನವಿ
ಇದಕ್ಕೆ ವಿರುದ್ಧವಾಗಿ ನೀವು ರಾಜಕೀಯ ನಿರ್ಧಾರ ಕೈಗೊಂಡರೆ, ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡಿದಂತಾಗುತ್ತದೆ, ಇದನ್ನು ಗಮನದಲ್ಲಿ ಇಟ್ಟುಕೊಂಡು ಮಂತ್ರಿಮಂಡಲ ಪುನರ್ ರಚನೆಗೆ ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದರು.
ಜಾರ್ಜ್ ವಕಾಲತ್ತು ಶಿವಕುಮಾರ್ ಕಿವಿಗೂ ಬಿದ್ದಿತು, ಈ ವಿಷಯವನ್ನೂ ಖರ್ಗೆ ಮನೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಿ, ಇಂತಹ ಬೆಳವಣಿಗೆಗಳಿಗೆ ಅವಕಾಶ ನೀಡಬಾರದು ಎಂದು ಅಸಹನೆಯಿಂದಲೇ ಹೇಳಿದರು.

