ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಮುನ್ನ ಬಂಡಾಯ ಬಾವುಟ
ಬೆಂಗಳೂರು:ಅಧಿಕಾರ ಹಸ್ತಾಂತರ ತೀರ್ಮಾನ ಕೈಗೊಳ್ಳುವಲ್ಲಿ ವರಿಷ್ಠರ ವಿಳಂಬ ಧೋರಣೆಯಿಂದ ತಾಳ್ಮೆ ಕಳೆದುಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿಗ ಶಾಸಕರು ಬುಧವಾರವೇ ಸಭೆ ಸೇರಿ ಬಂಡಾಯ ಬಾವುಟ ಹಾರಿಸಲಿದ್ದಾರೆ.
ಗುರುವಾರದಿಂದ ವಿಧಾನಮಂಡಲದ ಜಂಟಿ ಅಧಿವೇಶನ ಪ್ರಾರಂಭವಾಗುತ್ತಿದ್ದು, ಅದಕ್ಕೂ ಮುನ್ನಾ ದಿನವೇ ಸಭೆ ಸೇರಿ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸುವಂತೆ ಒತ್ತಾಯಿಸಿ ವರಿಷ್ಠರಿಗೆ ಸಂದೇಶ ರವಾನಿಸಲಿದ್ದಾರೆ.
ಬಂಡಾಯ ಬಣಕ್ಕೆ ವೇದಿಕೆ
ಬೆಂಬಲಿಗ ಶಾಸಕರ ಒತ್ತಾಯಕ್ಕೆ ಮಣಿದಿರುವ ಶಿವಕುಮಾರ್ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್, ಬಂಡಾಯ ಬಣಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ,
ಆದರೆ, ಅಂದಿನ ಸಭೆಯಲ್ಲಿ ಸಹೋದರರಿಬ್ಬರ ಅನುಪಸ್ಥಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತಿದೆ.
ಬೆಂಗಳೂರು ಮತ್ತು ದೆಹಲಿಯಲ್ಲಿ ಕಾರ್ಯಕ್ರಮ ಇರುವುದರಿಂದ ತಾವು ದಾವೋಸ್ ಪ್ರವಾಸ ರದ್ದುಗೊಳಿಸುತ್ತಿರುವುದಾಗಿ ಹೇಳಿಕೆ ನೀಡಿದ್ದ ಶಿವಕುಮಾರ್, ಹಠಾತ್ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ದಾವೋಸ್ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಶಿವಕುಮಾರ್ ವಿದೇಶ ಪ್ರವಾಸ
ತಮ್ಮ ಬೆಂಬಲಿತ ಶಾಸಕರ ಸಭೆ ಸಂದರ್ಭದಲ್ಲಿ ತಾವು ನಗರದಲ್ಲೇ ಉಳಿದರೆ ಇದರ ಹಿಂದೆ ತಾವಿದ್ದೇವೆ ಎಂಬ ಸಂದೇಶ ಹೋಗುವುದೆಂಬ ಕಾರಣಕ್ಕೆ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ನ ಸುಮಾರು 40ರಿಂದ 50 ಮಂದಿ ವಿಧಾನಸಭಾ ಸದಸ್ಯರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಸಭೆ ಸೇರಿ ಒಂದು ಸಾಲಿನ ನಿರ್ಣಯ ಕೈಗೊಳ್ಳಲಿದ್ದಾರೆ.
ಮುಖ್ಯಮಂತ್ರಿ ವಿರುದ್ಧ ನಮಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ, ಆದರೆ, ಕರ್ನಾಟಕದಲ್ಲಿ ಸರ್ಕಾರ ರಚನೆ ಸಂದರ್ಭದಲ್ಲಿ ನಡೆದ ಒಪ್ಪಂದದಂತೆ ಸಿದ್ದರಾಮಯ್ಯ ಎರಡೂವರೆ ವರ್ಷ ಆಡಳಿತ ಪೂರ್ಣಗೊಂಡಿದೆ.
ಉಳಿದ ಅವಧಿಗೆ ಶಿವಕುಮಾರ್
ಉಳಿದ ಅವಧಿಗೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕು ಎಂಬುದೇ ನಮ್ಮ ಒತ್ತಾಯ ಎಂದು ತಿಳಿಸಲಿದ್ದಾರೆ.
ಕಳೆದ ನವೆಂಬರ್ 20ಕ್ಕೆ ಸಿದ್ದರಾಮಯ್ಯ ಅವಧಿ ಪೂರ್ಣಗೊಂಡ ನಂತರವೂ ಅಧಿಕಾರ ಹಸ್ತಾಂತರ ಮಾಡಲು ಮುಂದಾಗುತ್ತಿಲ್ಲ, ಈ ಬಗ್ಗೆ ಶಿವಕುಮಾರ್ ಅವರೇ ಎಐಸಿಸಿಯ ಎಲ್ಲಾ ಮುಖಂಡರ ಗಮನಕ್ಕೆ ತಂದರೂ ಆಗಿರುವ ಒಪ್ಪಂದ ಜಾರಿ ಮಾಡುತ್ತಿಲ್ಲ.
ಸಿದ್ದರಾಮಯ್ಯ ಅವರಷ್ಟೇ ಶಿವಕುಮಾರ್ ಸಹಾ ವಿಧಾನಸಭಾ ಚುನಾವಣೆಯಲ್ಲಿ ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ, ಈ ಹಿನ್ನೆಲೆಯಲ್ಲಿ ಅವರಿಗೆ ಪ್ರತಿಫಲ ದೊರೆಯಲೇಬೇಕು.
ಸಾಕಷ್ಟು ಶಾಸಕರ ಬೆಂಬಲ
ಶಿವಕುಮಾರ್ ಅವರಿಗೆ ಸಾಕಷ್ಟು ಶಾಸಕರ ಬೆಂಬಲ ಇದೆ ಎಂಬುದನ್ನು ತೋರಿಸಲು ನಾವು ಸೇರಿದ್ದೇವೆಯೇ ಹೊರತು ಪಕ್ಷದ ವಿರುದ್ಧವಲ್ಲ.
ಅಗತ್ಯ ಬಿದ್ದರೆ ಈ ಅಧಿವೇಶನದಲ್ಲೇ ಬಲ ಪ್ರದರ್ಶನಕ್ಕೂ ಸಿದ್ಧ ಎಂದು ಶಿವಕುಮಾರ್ ಬಣ ವರಿಷ್ಠರಿಗೆ ಪರೋಕ್ಷ ಎಚ್ಚರಿಕೆ ನೀಡಲಿದೆ.
ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನ ವೇಳೆ ಸಿದ್ದರಾಮಯ್ಯ ಪೂರ್ಣಾವಧಿ ಆಡಳಿತ ನಡೆಸುವುದಾಗಿ ಸಂದೇಶ ರವಾನಿಸಿದ್ದರು.
ಹಠಾತ್ತಾಗಿ ಸದನದಲ್ಲಿ ಸಿದ್ದರಾಮಯ್ಯ ನೀಡಿದ ಹೇಳಿಕೆ ಶಿವಕುಮಾರ್ ಅವರಿಗೆ ಬೇಸರ ತರಿಸಿದ ಹಿನ್ನೆಲೆಯಲ್ಲಿ ಇದೀಗ, ವಿಧಾನಮಂಡಲ ಅಧಿವೇಶನದಲ್ಲೇ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

