ಜನವರಿ 31ಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ದೆಹಲಿಗೆ
ಬೆಂಗಳೂರು:ಕರ್ನಾಟಕ ಕಾಂಗ್ರೆಸ್ನಲ್ಲಿನ ಅಧಿಕಾರ ಹಂಚಿಕೆ ಗೊಂದಲ ನಿವಾರಣೆಗೆ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಮಧ್ಯಪ್ರವೇಶ ಮಾಡಿದ್ದಾರೆ.
ಪ್ರಿಯಾಂಕಾ ಪ್ರವೇಶದ ನಂತರ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಜನವರಿ 31ರಂದು ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳಿಗೆ ಆಹ್ವಾನ ನೀಡಲಿದ್ದಾರೆ.
ವಿಬಿ-ಜಿ-ರಾಮ್-ಜಿ ವಿರೋಧಿಸಿ ನಿರ್ಣಯ ಕೈಗೊಳ್ಳಲು ಜನವರಿ 30ರವರೆಗೆ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲಾಗಿದೆ.
ಅಧಿವೇಶನ ಮುಗಿಸಿ ಬರಲು ಸೂಚನೆ
ಅಧಿವೇಶನ ಮುಗಿಸಿಕೊಂಡು ದೆಹಲಿಗೆ ಬರುವಂತೆ ಉಭಯ ನಾಯಕರಿಗೂ ಈಗಾಗಲೇ ಎಐಸಿಸಿ ಸಂದೇಶ ರವಾನಿಸಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಅಧಿಕಾರ ಹಂಚಿಕೆ ಗೊಂದಲಕ್ಕೆ ಸಂಬಂಧಿಸಿದಂತೆ ಫೆಬ್ರವರಿ 2ರ ವೇಳೆಗೆ ಎಐಸಿಸಿ ಮಹತ್ವದ ನಿರ್ಣಯ ಕೈಗೊಳ್ಳಲಿದ್ದು, ಮುಂದೆ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಉಭಯ ನಾಯಕರಿಗೂ ಸ್ಪಷ್ಟ ಸೂಚನೆ ನೀಡಲಿದೆ.
ದಾವೋಸ್ ಪ್ರವಾಸ ವೇಳೆ ಜಾಗತಿಕ ಉದ್ಯಮಿಗಳಿಗೆ, ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಖ್ಯಮಂತ್ರಿಯಾಗಿ ಎಲ್ಲ ಸೌಲಭ್ಯ ನೀಡುವುದಾಗಿ ಶಿವಕುಮಾರ್ ಆಶ್ವಾಸನೆ ನೀಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.
ಶಿವಕುಮಾರ್ ಭರವಸೆ
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಕೆಲವು ರಾಜ್ಯಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲೇ ಜಾಗತಿಕ ಉದ್ಯಮಿಗಳಿಗೆ ಶಿವಕುಮಾರ್ ಈ ಭರವಸೆ ನೀಡಿದರು ಎನ್ನಲಾಗಿದೆ.
ಕಳೆದ ನವೆಂಬರ್ 20ಕ್ಕೆ ಸಿದ್ದರಾಮಯ್ಯ ನೇತೃತ್ವದ ಆಡಳಿತ ಎರಡೂವರೆ ವರ್ಷಗಳ ಆಡಳಿತ ಪೂರೈಸಿದ್ದು, ನಂತರ ಅಧಿಕಾರ ಹಂಚಿಕೆ ಗೊಂದಲ ಬಹಿರಂಗವಾಗಿಯೇ ಪರಸ್ಪರ ವಾಗ್ದಾಳಿಗಳಿಗೆ ಕಾರಣವಾಯಿತು.
ಸಿದ್ದರಾಮಯ್ಯ ತಮ್ಮ ಅಧಿಕಾರ ಉಳಿಸಿಕೊಳ್ಳಲು ಒಂದೆಡೆ ಭಾರೀ ಕಸರತ್ತು ನಡೆಸಿದರೆ, ಶಿವಕುಮಾರ್ ಅಧಿಕಾರ ಪಡೆಯಲು ಮತ್ತೊಂದೆಡೆ ತೀವ್ರ ಯತ್ನ ಮಾಡುತ್ತಿದ್ದಾರೆ.
ರಾಹುಲ್ ಗಾಂಧಿ ಮೌನ
ಅಧಿಕಾರ ಹಸ್ತಾಂತರ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿ ರಾಷ್ಟ್ರವ್ಯಾಪಿ ಕೂತೂಹಲಕ್ಕೆ ಕಾರಣವಾಗಿದ್ದರೂ ರಾಹುಲ್ ಗಾಂಧಿ ಮಾತ್ರ ಸ್ಪಷ್ಟ ನಿಲುವು ತಳೆದಿರಲಿಲ್ಲ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖರು ಶಿವಕುಮಾರ್ ಪರ ಇದ್ದರೂ ಗೊಂದಲ ನಿವಾರಿಸಲು ಸಾಧ್ಯವಾಗಿರಲಿಲ್ಲ.
ಇದೀಗ ಪ್ರಿಯಾಂಕಾ ಗಾಂಧಿ ಮಧ್ಯಪ್ರವೇಶಿಸಿದ್ದು, ಸದ್ಯದಲ್ಲೇ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.

