ಬೆಂಗಳೂರು:ಶಕ್ತಿಸೌಧ ವಿಧಾನಸೌಧದಲ್ಲೇ ಲಕ್ಷಾಂತರ ರೂ. ನಗದು ಹಾಗೂ ಚಿನ್ನ ಕಳ್ಳತನ ಆಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕೊಠಡಿಯಲ್ಲಿ ಇಟ್ಟಿದ್ದ 200 ಗ್ರಾಂ ಚಿನ್ನ ಹಾಗೂ 1.10 ಲಕ್ಷ ರೂ. ಕಳುವಾಗಿದೆ ಎಂದು ವಿಧಾನಸೌಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲುಗೊಂಡು, ಒಬ್ಬರನ್ನು ಬಂಧಿಸಲಾಗಿದೆ.
ಕೋಲಾರದ ವ್ಯಕ್ತಿ ದೂರು
ಕೋಲಾರದ ವಿಶೇಷಚೇತನ ವ್ಯಕ್ತಿ ನವೀನ್ ಎಂಬುವರು ಸಚಿವರ ಕಚೇರಿಯಲ್ಲಿ ತಾವು ಇರಿಸಿದ್ದ ಬ್ಯಾಗ್ನಲ್ಲಿದ್ದ ನಗದು ಮತ್ತು ಚಿನ್ನ ಕಳುವಾಗಿದೆ ಎಂದು ದೂರು ನೀಡಿದ್ದಾರೆ.
ದೂರು ದಾಖಲಿಸಲು ಪೋಲಿಸರು ಹಿಂದೇಟು ಹಾಕಿದಾಗಿ, ದೂರುದಾರ ವ್ಯಕ್ತಿ, ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಬೆದರಿಕೆ ಹಾಕಿದ ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ.
ದೂರಿನ ಆಧಾರದ ಮೇಲೆ ವಿಧಾನಸೌಧದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ 4ನೇ ದರ್ಜೆ ನೌಕರ ಆಂಟನಿ ಎಂಬುವರು ಸಚಿವರ ಕೊಠಡಿಯಲ್ಲಿ ಇದ್ದ ಬ್ಯಾಗನ್ನು ತೆಗೆದುಕೊಂಡು ಹೋಗುತ್ತಿದ್ದುದು ಕಂಡುಬಂದಿದೆ.
18 ಗ್ರಾಂ ಚಿನ್ನ ವಶ
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ 18 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ.
ನವೀನ್ ನೀಡಿರುವ ದೂರಿನಲ್ಲಿ, ನಾನು ಕೇಸ್ ಒಂದರ ಸಲುವಾಗಿ ಸಚಿವರ ಭೇಟಿಗೆ ಬಂದಿದ್ದೆ, ಈ ವೇಳೆ ಹೈಕೋರ್ಟ್ ಕಡೆಯ ಗೇಟ್ ಬಳಿ ಪೊಲೀಸರು ನನ್ನ ಬ್ಯಾಗ್ ಚೆಕ್ ಮಾಡಿದ್ದರು.
ಅದರಲ್ಲಿ ಚಿನ್ನ ಮತ್ತು ಹಣ ಇರೋದನ್ನ ನೋಡಿ ಬಿಡಲ್ಲ ಎಂದರು, ಅದಕ್ಕೆ ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ಬ್ಯಾಗ್ ಸಹಿತ ಒಳಗೆ ಬಿಡುವಂತೆ ಕೇಳಿಕೊಂಡೆ.
ಸಚಿವರ ಕಾರ್ಯದರ್ಶಿ ಭೇಟಿ
ನಂತರ ನನ್ನನ್ನು ಬ್ಯಾಗ್ ಸಮೇತ ಒಳಗೆ ಬಿಟ್ಟರು, ಸಚಿವರ ಕಛೇರಿ ಕಾರ್ಯದರ್ಶಿ ಅವರನ್ನು ಭೇಟಿಯಾದೆ, ನನ್ನ ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟರು.
ನಾನು ನಂತರ ಅಲ್ಲೆ ನನ್ನ ಬ್ಯಾಗ್ ಇಟ್ಟು ಸ್ವಲ್ಪ ಸಮಯ ಬಿಟ್ಟು ತೆಗೆದುಕೊಂಡು ಹೋಗುವುದಾಗಿ ಹೇಳಿದೆ.
ವಿಧಾನಸಭೆಯ ಪಾಸ್ ತೆಗೆದುಕೊಂಡು ಒಳಗೆ ಹೋಗಿ ಕಲಾಪ ಮುಗಿದ ನಂತರ ಬ್ಯಾಗ್ ಇಟ್ಟಿದ್ದ ಕಚೇರಿಗೆ ಹಿಂತಿರುಗಿದಾಗ, ಬಾಗಿಲಿಗೆ ಬೀಗ ಹಾಕಲಾಗಿತ್ತು.
ಮರುದಿನ ಬ್ಯಾಗ್ ಇರಲಿಲ್ಲ
ಆಗ ಭದ್ರತಾ ಸಿಬ್ಬಂದಿ ಬಳಿ ವಿಚಾರಿಸಿದಾಗ, ಬೆಳಗ್ಗೆ ಬಂದು ಬ್ಯಾಗ್ ತೆಗೆದುಕೊಂಡು ಹೋಗಲು ಹೇಳಿದರು, ಮರುದಿನ ಬಂದು ನೋಡಿದಾಗ ಬ್ಯಾಗ್ ಇರಲಿಲ್ಲ.
ಭದ್ರತಾ ಸಿಬ್ಬಂದಿ ಬಳಿ ವಿಚಾರಿಸಿದಾಗ, ನನ್ನ ಮೇಲೆಯೇ ಹಲ್ಲೆಗೆ ಮುಂದಾದರು, ಅಲ್ಲದೆ, ನಾವು ನಿನ್ನ ಬ್ಯಾಗ್ ನೋಡಿಕೊಳ್ಳಲು ಇರೋದಲ್ಲ ಎಂದು ಬೆದರಿಕೆ ಹಾಕಿದರು.
ನನ್ನ ಬ್ಯಾಗ್ನಲ್ಲಿ 200 ಗ್ರಾಂ ಚಿನ್ನ, 1.10 ಲಕ್ಷ ನಗದು ಇತ್ತು, ಅದನ್ನು ನಾನು ಮರೆತು ಬಿಟ್ಟುಬಂದಿದ್ದಲ್ಲ, ಚಿನ್ನಾಭರಣಕ್ಕೆ ನನ್ನ ಬಳಿ ಎಲ್ಲಾ ಬಿಲ್ಗಳು ಇವೆ, ಬ್ಯಾಂಕ್ ಮೂಲಕ ಹಣ ತೆಗೆದುಕೊಂಡಿದ್ದೆ.
ಆರೋಪಿ ಅರೆಸ್ಟ್
ನಂತರ ನಾನು ವಿಧಾನಸೌಧ ಪೊಲೀಸರಿಗೆ ದೂರು ನೀಡಿದೆ, ಆಗ ಆಂಟೋನಿ ಎಂಬಾತನನ್ನು ಅರೆಸ್ಟ್ ಮಾಡಿದ್ದು, ಆತ ಸಚಿವರ ಕಚೇರಿ ಕೆಲಸಗಾರ ಅಲ್ಲ.
ಕಛೇರಿಗಳಿಗೆ ಸಂಜೆ ಬೀಗ ಹಾಕುವ ’ಡಿ’ ಗ್ರೂಪ್ ನೌಕರನನ್ನು ಬಂಧಿಸಿ 18 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.
ಊರಿಂದ ಚಿನ್ನ ತಂದಿದ್ದೆ
ನನ್ನ ತಾಯಿ ಬಳಿ ಚಿನ್ನ ಇದ್ದರೆ ಸೇಫಲ್ಲ ಎಂದು ಚಿನ್ನವನ್ನ ಬ್ಯಾಗ್ನಲ್ಲಿ ತಂದಿದ್ದೆ, ಅದನ್ನು ನಾನು ಊರಿಂದ ತೆಗೆದುಕೊಂಡು ಬಂದಿದ್ದೆ.
ಈ ಕೃತ್ಯದಲ್ಲಿ ಇನ್ನೊಬ್ಬ ಸಿಬ್ಬಂದಿ ಆಂಟೋನಿ ಜೊತೆ ಶಾಮೀಲಾಗಿದ್ದು, ನನಗೆ ಪೊಲೀಸರ ತನಿಖೆ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂಬುದಾಗಿ ದೂರುದಾರ ವ್ಯಕ್ತಿ ತಿಳಿಸಿದ್ದಾರೆ.

