ಬೆಂಗಳೂರು:ಅಧಿಕಾರ ಹಂಚಿಕೆ ಗೊಂದಲ ಬಗೆಹರಿಯದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೆ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣಾ ತಂತ್ರಗಾರಿಕೆ ಕುರಿತು ಪಕ್ಷದ ಸಭೆಯಲ್ಲಿ ಭಾಗವಹಿಸಲು ಗುರುವಾರ ದೆಹಲಿಗೆ ತೆರಳಲಿರುವ ಶಿವಕುಮಾರ್ ಮೂರು ದಿನ ಅಲ್ಲಿಯೇ ಬಿಡಾರ ಹೂಡಲಿದ್ದಾರೆ.
ದೂರ ಉಳಿಯುವ ಯತ್ನ
ಚುನಾವಣೆಗೆ ಸಂಬಂಧಿಸಿದಂತೆ ಇಂದೇ ದೆಹಲಿಗೆ ತೆರಳಬೇಕಿತ್ತು, ಆದರೆ, ಇದರಿಂದ ದೂರ ಉಳಿಯುವ ಪ್ರಯತ್ನ ಮಾಡಿದ್ದರು.
ಪಕ್ಷದ ಪ್ರಧಾನಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಉಪಮುಖ್ಯಮಂತ್ರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ದೆಹಲಿಗೆ ಬರುವಂತೆ ಆಹ್ವಾನ ನೀಡಿದ ನಂತರ ತಮ್ಮ ನಿಲುವು ಬದಲಿಸಿದ ಶಿವಕುಮಾರ್ ನಾಳೆಯಿಂದ ಪ್ರವಾಸ ಕೈಗೊಳ್ಳಲಿದ್ದಾರೆ.
ಚುನಾವಣಾ ಕಾರ್ಯಗಳಿಗೆ ಸಂಬಂಧಿಸಿದಂತೆ ೧೦-೧೨ ದಿನಗಳ ಹಿಂದೆ ದೆಹಲಿ ಸಭೆಯಲ್ಲಿ ಭಾಗವಹಿಸಲು ತೆರಳಿದ್ದ ಅವರು, ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಸ್ಪಷ್ಟ ನಿರ್ಣಯ ಕೈಗೊಳ್ಳುವಂತೆ ಪಕ್ಷದ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರುಗಳಿಗೆ ಮನವಿ ಮಾಡಿಕೊಂಡಿದ್ದರು.
ಈಡೇರದ ಆಶ್ವಾಸನೆ
ಇದಕ್ಕೆ ಸ್ಪಂದಿಸಿದ್ದ ರಾಹುಲ್ ಎರಡು-ಮೂರು ದಿನದಲ್ಲಿ ಮುಖ್ಯಮಂತ್ರಿ ಹಾಗೂ ತಮ್ಮನ್ನು ದೆಹಲಿಗೆ ಕರೆಸುವುದಾಗಿ ಆಶ್ವಾಸನೆ ನೀಡಿದ್ದರು.
ರಾಹುಲ್ ಆಶ್ವಾಸನೆ ನಂತರವೂ ಮುಖ್ಯಮಂತ್ರಿಯನ್ನಾಗಲಿ, ತಮ್ಮನ್ನಾಗಲಿ ಮಾತುಕತೆಗೆ ಕರೆಸದಿರುವುದರಿಂದ ಶಿವಕುಮಾರ್ ಕೆರಳಿದ್ದಾರೆ.
ಸಿದ್ದರಾಮಯ್ಯ ಒತ್ತಡ ಭಾವನೆ
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬೆಂಬಲಿಗ ಶಾಸಕರನ್ನು ವಿದೇಶ ಪ್ರವಾಸಕ್ಕೆ ಹಂತ ಹಂತವಾಗಿ ಕಳುಹಿಸಿ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಭಾವನೆ ಮೂಡಿದೆ.
ಬಜೆಟ್ ಅಧಿವೇಶನಕ್ಕೂ ಮುನ್ನವೇ ಅಧಿಕಾರ ಪಡೆಯಲೇಬೇಕೆಂಬ ಪಟ್ಟು ಹಿಡಿದಿರುವ ಶಿವಕುಮಾರ್ ಈ ಬಾರಿ ವರಿಷ್ಠರಿಂದ ಸ್ಪಷ್ಟ ಸಂದೇಶ ದೊರೆಯದಿದ್ದರೆ, ಸಿದ್ದರಾಮಯ್ಯ ಹಾದಿಯನ್ನೇ ತಾವೂ ತುಳಿಯಲು ಹೊರಟಿದ್ದಾರೆ ಎಂದು ಅವರ ಆಪ್ತ ವಲಯಗಳು ತಿಳಿಸಿವೆ.

