ನವದೆಹಲಿ:ರಾಜ್ಯ ಸರ್ಕಾರಗಳು ಉಚಿತ ಗ್ಯಾರಂಟಿಗಳನ್ನು ನೀಡುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಪುನರ್ ಪರಿಶೀಲಿಸುವಂತೆ ಸೂಚಿಸಿದೆ.
ತಮಿಳುನಾಡಿನಲ್ಲಿ ಉಚಿತ ವಿದ್ಯುತ್ ನೀಡುತ್ತಿರುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ರಾಜಕೀಯ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ದುಡಿಯುವ ಭಾವನೆಯೇ ಇಲ್ಲವಾಗುತ್ತದೆ
ಬೆಳಗ್ಗೆಯಿಂದ ಸಂಜೆವರೆಗೆ ಉಚಿತ ಆಹಾರ, ಗ್ಯಾಸ್, ವಿದ್ಯುತ್, ನಗದು ಮತ್ತಿತರೆ ಸೌಲಭ್ಯಗಳನ್ನು ನೀಡುತ್ತಿದ್ದರೆ, ಜನರು ಶ್ರಮವಹಿಸದೇ, ದುಡಿಯುವ ಭಾವನೆಯೇ ಇಲ್ಲವಾಗುತ್ತದೆ ಎಂದು ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಜನರನ್ನು ಸ್ವಾವಂಬಿಗಳನ್ನಾಗಿ ಮಾಡಲು ಉದ್ಯೋಗಾವಕಾಶ ಸೃಷ್ಠಿಸಿ, ಗ್ಯಾರಂಟಿಗಳನ್ನು ನೀಡಬೇಡಿ, ಇದು ಓಲೈಕೆ ಆಗುವುದಿಲ್ಲವೇ ಎಂದಿದೆ.
ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಮತದಾರರ ಓಲೈಕೆಗಾಗಿ ನೀಡುವ ಉಚಿತ ಭರವಸೆಗಳನ್ನು ಅಧಿಕಾರಕ್ಕೆ ಬಂದಾಗ ಜಾರಿಗೊಳಿಸುವುದರಿಂದ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎಂದಿದೆ.
ಅಭಿವೃದ್ಧಿ ಕುಂಠಿತಗೊಂಡಿದೆ
ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರಗಳು ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅಭಿವೃದ್ಧಿ ಕುಂಠಿತಗೊಂಡಿವೆ, ಆದಾಯದ ಬಹುಪಾಲು ಗ್ಯಾರಂಟಿಗಳಿಗೆ ವಿನಿಯೋಗಿಸಿದರೆ, ಶಾಲೆ, ಆಸ್ಪತ್ರೆ, ರಸ್ತೆ ಸೇರಿದಂತೆ ಮೂಲಸೌಕರ್ಯಗಳಿಗೆ ಸಂಪನ್ಮೂಲ ಇಲ್ಲದಂತಾಗುತ್ತದೆ.
ಶ್ರೀಮಂತ, ಬಡವ ಎಂಬ ವ್ಯತ್ಯಾಸವಿಲ್ಲದೆ ಅರ್ಹರಲ್ಲದವರಿಗೆ ನೀಡುವ ಉಚಿತ ಗ್ಯಾರಂಟಿಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುತ್ತವೆ ಎಂದು ನ್ಯಾಯಪೀಠ ಛಾಟಿ ಬೀಸಿದೆ.
ಗ್ಯಾರಂಟಿಗಳನ್ನು ನೀಡುತ್ತಿರುವ ಹೆಚ್ಚಿನ ರಾಜ್ಯಗಳು ಈಗಾಗಲೇ ಆರ್ಥಿಕ ನಷ್ಟದಲ್ಲಿವೆ, ಅಭಿವೃದ್ಧಿ ಯೋಜನೆಗಳಿಗೆ ಬದಲಾಗಿ ಉಚಿತ ಸೌಲಭ್ಯಗಳನ್ನು ನೀಡುತ್ತಿವೆ.
ಎಲ್ಲರಿಗೂ ಉಚಿತ ತಪ್ಪು ನೀತಿ
ಸರ್ಕಾರಿ ಸವಲತ್ತುಗಳಿಗೆ ಪಾವತಿಸಲು ಸಾಧ್ಯವಾಗದ ಬಡವರಿಗೆ ನೆರವು ನೀಡುವುದರಲ್ಲಿ ಅರ್ಥವಿದೆ, ಆದರೆ, ಶ್ರೀಮಂತ ಮತ್ತು ಬಡವ ಎಂಬ ವ್ಯತ್ಯಾಸ ಇಲ್ಲದೆ, ಎಲ್ಲರಿಗೂ ಉಚಿತ ಗ್ಯಾರಂಟಿಗಳನ್ನು ನೀಡುವುದು ತಪ್ಪು ನೀತಿ.
ಉಚಿತ ವಸ್ತುಗಳನ್ನು ವಿತರಿಸುವ ಬದಲು ಉದ್ಯೋಗಾವಕಾಶ ಸೃಷ್ಟಿಸುವತ್ತ ರಾಜ್ಯ ಸರ್ಕಾರಗಳು ಗಮನಹರಿಸಬೇಕು, ಉಚಿತ ವಸ್ತುಗಳ ಕೊಡುಗೆಯಿಂದ ಭಾರತದಲ್ಲಿ ಯಾವ ಸಂಸ್ಕೃತಿ ಸೃಷ್ಟಿಸುತ್ತಿದ್ದೇವೆ, ಇದು ಮತ ಗಳಿಸುವ ನೀತಿ ಆಗುವುದಿಲ್ಲವೇ ಎಂದಿದೆ.

