ಬೆಂಗಳೂರು:ಮುಖ್ಯಮಂತ್ರಿ ಗಾದಿ ನಿಭಾಯಿಸಲು ನಾನು ಸಮರ್ಥನಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಬಾಂಬ್ ಸಿಡಿಸಿದ್ದಾರೆ.
ನಾನು ಸಮರ್ಥ ಇರುವುದರಿಂದಲೇ ಪಕ್ಷದ ವರಿಷ್ಠರು ಉಪಮುಖ್ಯಮಂತ್ರಿ ಹುದ್ದೆ ಹಾಗೂ ವಿವಿಧ ಇಲಾಖೆಗಳ ಸಚಿವನಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿ ಎಂಟು ವರ್ಷ
ಅಲ್ಲದೆ, ಎರಡು ಬಾರಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಎಂಟು ವರ್ಷ ಪಕ್ಷದ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ, ಸಾಮರ್ಥ್ಯ ವಿಷಯದಲ್ಲಿ ನನ್ನನ್ನು ಯಾರೂ ಪ್ರಶ್ನಿಸುವಂತಿಲ್ಲ.
ಮಾಜಿ ಸಚಿವ ಕೆ.ಎನ್.ರಾಜಣ್ಣ ನೀಡಿರುವ ಹೇಳಿಕೆಯಲ್ಲಿ ಏನು ತಪ್ಪಿದೆ, ದಲಿತರು ಮುಖ್ಯಮಂತ್ರಿ ಯಾಕಾಗಬಾರದು, ನನಗೆ ಅರ್ಹತೆ ಇದೆಯೆಂದೇ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ.
ಅವರು ತಪ್ಪು ಮಾತನಾಡಿದ್ದರೆ ಹೇಳಿ ಸರಿಪಡಿಸೋಣ, ಸಾರ್ವಜನಿಕವಾಗಿ ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ, ನಾಯಕತ್ವ ವಿಷಯ ಏನಿದ್ದರೂ ವರಿಷ್ಠರು ನಾಲ್ಕು ಗೋಡೆ ಮಧ್ಯೆ ಚರ್ಚಿಸಿ ತೀರ್ಮಾನಿಸುತ್ತಾರೆ.
ಶಾಸಕಾಂಗ ಸಭೆ ತೀರ್ಮಾನ
ಇಲ್ಲವೇ ಶಾಸಕಾಂಗ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಆಗುತ್ತದೆ, ನನ್ನ ಹೆಸರು ಕೂಗಿದ ತಕ್ಷಣ ಆಗುವುದಿಲ್ಲ, ಹಾಗಂತಾ ಅದು ತಪ್ಪು ಎಂದೂ ಹೇಳಲಾಗದು ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಶಿಸ್ತಿನ ಸಿಪಾಯಿ, ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ.
ಮಾಧ್ಯಮದ ಮುಂದೆ ನಾನು ಸಿಎಂ ಆಗಬೇಕೆಂದ ತಕ್ಷಣ ಆಗಲು ಸಾಧ್ಯವಿಲ್ಲ, ಅದು ಸಾರ್ವಜನಿಕ ಚರ್ಚೆಯಾಗಿಯೇ ಉಳಿಯುತ್ತದೆ.
ನಾನು ಸಮರ್ಥ, ಎರಡು ಮಾತಿಲ್ಲ
ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳಲು ನಾನು ಸಮರ್ಥನಿದ್ದೇನೆ, ಅದರಲ್ಲಿ ಎರಡು ಮಾತಿಲ್ಲ ಎಂದು ಬಹಿರಂಗವಾಗಿಯೇ ತಮ್ಮ ಹಕ್ಕು ಮಂಡಿಸಿದರು.
ಮತ್ತೊಂದೆಡೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ, ಸುದ್ದಿಗಾರರೊಂದಿಗೆ ಮಾತನಾಡಿ, ದಲಿತ ಮುಖ್ಯಮಂತ್ರಿ ಚರ್ಚೆ ಅಪ್ರಸ್ತುತ, ಈಗ ಅದಕ್ಕೆ ಕಾಲವೂ ಅಲ್ಲ ಎಂದು ಒಂದೇ ಮಾತಿನಲ್ಲಿ ಹೇಳಿ ಮುಗಿಸಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕಳೆದ ಎರಡು-ಮೂರು ತಿಂಗಳಿಂದ ಭಾರೀ ಚರ್ಚೆಗಳು ನಡೆಯುತ್ತಿದ್ದರೂ, ಎಐಸಿಸಿ ವರಿಷ್ಠರು ಮಾತ್ರ ಇನ್ನೂ ಮೌನವಾಗಿದ್ದಾರೆ.
ಸಿದ್ದರಾಮಯ್ಯ ಬಹಿರಂಗ ಟ್ವೀಟ್
ಆದರೆ, ಒಂದು ವಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಾ ತಾವು ಕುರುಬ ಸಮುದಾಯದವನು ಎಂಬ ಕಾರಣಕ್ಕೆ ಅಧಿಕಾರದಿಂದ ಇಳಿಸುವ ಪ್ರಯತ್ನ ನಡೆಯುತ್ತಿದೆ ಎಂಬುದಾಗಿ ಬಹಿರಂಗವಾಗಿಯೇ ಟ್ವೀಟ್ ಮಾಡಿದ್ದರು.
ಈ ಬೆಳವಣಿಗೆ ನಂತರ ದಲಿತರು ಮುಖ್ಯಮಂತ್ರಿ ಆಗಬೇಕೆಂಬ ಕೂಗು ಆ ಸಮುದಾಯದ ಸಚಿವರಿಂದಲೇ ಸಾರ್ವಜನಿಕವಾಗಿ ಹೇಳಿಕೆ ಮತ್ತು ಹಕ್ಕೋತ್ತಾಯ ಬರುತ್ತಿದೆ.

