ಬೆಂಗಳೂರು:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿತರೂ ಸೇರಿದಂತೆ ಪಕ್ಷದ ಹಿರಿಯ ಶಾಸಕರು, ಸಚಿವ ಸಂಪುಟ ಪುನರ್ ರಚಿಸಿ ಮಂತ್ರಿಮಂಡಲದಲ್ಲಿ ತಮಗೆ ಅವಕಾಶ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಗುರುವಾರ ರಾತ್ರಿ ನಗರದ ಖಾಸಗಿ ಕ್ಲಬ್ ಒಂದರಲ್ಲಿ ಶಿವಕುಮಾರ್ ಆಪ್ತ ಬಣಕ್ಕೆ ಸೇರಿದ ಎನ್.ಎ.ಹ್ಯಾರಿಸ್ ಹಾಗೂ ಮಾಗಡಿ ಬಾಲಕೃಷ್ಣ ಆಯೋಜಿಸಿದ್ದ ಸಭೆಯಲ್ಲಿ 25ಕ್ಕೂ ಹೆಚ್ಚು ಹಿರಿಯ ಸದಸ್ಯರು ಭಾಗವಹಿಸಿದ್ದರು.
ಶಿವಕುಮಾರ್ ಬೆಂಬಲಿತರಿಂದ ಒತ್ತಾಯ
ಶಿವಕುಮಾರ್ ಬೆಂಬಲಿತರೇ ಸಂಪುಟ ಪುನರ್ ರಚನೆಗೆ ಒತ್ತಾಯಿಸುತ್ತಿರುವ ಉದ್ದೇಶ ಏನೆಂಬ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿದೆ.
ಬಜೆಟ್ ಅಧಿವೇಶನ ಮುಗಿದ ಬಳಿಕ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ಪುನರ್ ರಚನೆಗೆ ಒತ್ತಾಯಿಸಲು ಹಿರಿಯ ಶಾಸಕರು ಸಭೆಯಲ್ಲಿ ನಿರ್ಧರಿಸಿದ್ದಾರೆ.
ಸರ್ಕಾರ ರಚನೆ ವೇಳೆಯೇ ಎರಡೂವರೆ ವರ್ಷಗಳ ಬಳಿಕ ಸಂಪುಟ ಪುನಾರಚನೆ ಮಾಡುವುದಾಗಿ ವರಿಷ್ಠರು ಹೇಳಿದ್ದರು, ಆದರೆ, ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವರಿಷ್ಠರ ಭೇಟಿ
ಆದಷ್ಟು ಬೇಗ ಸಚಿವ ಸಂಪುಟ ಪುನಾರಚನೆ ಮಾಡಬೇಕು, ವರಿಷ್ಠರನ್ನು ಭೇಟಿ ಮಾಡುವುದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಶಿವಕುಮಾರ್ ಅವರನ್ನು ಈ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಲಿದೆಯಂತೆ.
ಹ್ಯಾರಿಸ್ ಏರ್ಪಡಿಸಿದ್ದ ಔತಣಕೂಟದಲ್ಲಿ ಬಾಲಕೃಷ್ಣ ಅಲ್ಲದೆ, ಬಸವರಾಜ ನೀಲಣ್ಣನವರ್, ಎ.ಆರ್.ಕೃಷ್ಣಮೂರ್ತಿ, ಶಿವಲಿಂಗೇಗೌಡ, ಯು.ಬಿ.ಬಣಕಾರ್, ಹಂಪನಗೌಡ ಬಾದರ್ಲಿ, ಟಿ.ಬಿ.ಜಯಚಂದ್ರ, ಅಶೋಕ್ ಪಟ್ಟಣ್, ಬೇಳೂರು ಗೋಪಾಲಕೃಷ್ಣ, ಎಸ್.ಷಡಕ್ಷರಿ, ಮಹಂತೇಶ್ ಕೌಜಲಗಿ, ಪುಟ್ಟರಂಗಶೆಟ್ಟಿ, ಯಶವಂತರಾಯಗೌಡ ವಿಠಲಗೌಡ ಪಾಟೀಲ್, ಲಕ್ಷ್ಮಣ ಸವದಿ, ವೈ.ನಾರಾಯಣಸ್ವಾಮಿ, ಎಂ.ವೈ.ಪಾಟೀಲ್ ಸೇರಿದಂತೆ 25ಕ್ಕೂ ಹೆಚ್ಚು ಹಿರಿಯ ಸದಸ್ಯರು ಭಾಗವಹಿಸಿದ್ದರು.
ಇವರೆಲ್ಲರೂ ನಾಲ್ಕರಿಂದ ಏಳು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ, ಇದರಲ್ಲಿ ಕೆಲವರು ಪ್ರಮುಖ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಸ್ಥಾನದಲ್ಲಿದ್ದಾರೆ.

