ಮಂಡ್ಯ ವಿಸಿ ಫಾರಂ:ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಮಂಡ್ಯಕ್ಕೆ ಮಂಜೂರಾಗಿರುವ 14 ಕೋಟಿ ರೂ. ವೆಚ್ಚದ ಬಹುಪಯೋಗಿ ಒಳಾಂಗಣ ಕ್ರೀಡಾಂಗಣಕ್ಕೆ ಕೇಂದ್ರದ ಯುವಜನ ಸಬಲೀಕರಣ, ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಹಾಗೂ ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ಭೂಮಿಪೂಜೆ ನೆರವೇರಿಸಿದರು.
ಮಂಡ್ಯದ ವಿಸಿ ಫಾರಂನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನೂತನ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಚಿವರಿಬ್ಬರು, ಖೇಲೋ ಇಂಡಿಯಾ, ವೈಬ್ರೆಂಟ್ ಮಂಡ್ಯ’ ನಿನಾದಕ್ಕೆ ಪೂರಕ ಮಂಡ್ಯ ಜಿಲ್ಲೆಯಲ್ಲಿ ಕ್ರೀಡೆ ಉಜ್ವಲವಾಗಿ ಬೆಳೆದು ಹೆಚ್ಚು ಪ್ರಮಾಣದಲ್ಲಿ ಚಾಂಪಿಯನ್ಗಳು ಹೊರಬರಲಿ ಎಂದು ಹಾರೈಸಿದರು.
ಕ್ರೀಡಾ ಸಂಸ್ಕೃತಿ ಪುನರುಜ್ಜೀವನ
ಮನ್ಸುಖ್ ಮಾಂಡವೀಯ ಮಾತನಾಡಿ, ಖೇಲೋ ಇಂಡಿಯಾ ಯೋಜನೆ ಭಾರತದ ತಳಮಟ್ಟದಲ್ಲಿ ಕ್ರೀಡಾ ಸಂಸ್ಕೃತಿ ಪುನರುಜ್ಜೀವನಗೊಳಿಸಲು ಮತ್ತು ಭಾರತವನ್ನು ಶ್ರೇಷ್ಠ ಕ್ರೀಡಾರಾಷ್ಟ್ರವಾಗಿ ರೂಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಕಾರ್ಯಕ್ರಮವಾಗಿದೆ ಎಂದರು.
ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಹೆಚ್.ಡಿ.ಕುಮಾರಸ್ವಾಮಿ ಪರಿಶ್ರಮದಿಂದ ಮಂಡ್ಯದಲ್ಲಿ ಸುಸಜ್ಜಿತ ಕ್ರೀಡಾಂಗಣ ಬರುತ್ತಿದೆ, ಜನರಿಗಾಗಿ ಅವರು ಮಾಡಿರುವ ಕೆಲಸ ಜನರ ಮೇಲಿನ ಪ್ರೀತಿ ತೋರಿಸುತ್ತದೆ.
ವಿಶೇಷಚೇತನರ ಬಗ್ಗೆ ಹೊಂದಿರುವ ಮಮತೆ, ಬದ್ಧತೆ ಬಹಳ ಸಂತೋಷ ಉಂಟು ಮಾಡಿದೆ, ಈ ಕೆಲಸ ಶ್ಲಾಘನಾರ್ಹ, ಎಲೆಕ್ಟ್ರಿಕ್ ವಾಹನಗಳನ್ನು ನೀಡುವ ಮೂಲಕ ವಿಕಲಚೇತನರಿಗೆ ಮಾತ್ರ ಸಹಾಯ ಮಾಡುತ್ತಿಲ್ಲ, ಪರಿಸರಕ್ಕೆ ಕೂಡ ಒಳ್ಳೆಯದು ಮಾಡುತ್ತಿದ್ದೀರಿ.
ಮಂಡ್ಯ ನೆಲದಿಂದ ಕ್ರೀಡಾಪಟುಗಳು
ಮಂಡ್ಯ ನೆಲದಿಂದ ರಾಜ್ಯವಷ್ಟೇ ಅಲ್ಲ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡಾಪಟುಗಳು ಇದ್ದಾರೆ, ವಿಕಾಸಗೌಡ, ಕೆ.ಆರ್.ಶಿಲ್ಪಾ ಅವರಲ್ಲಿ ಸೇರಿದ್ದಾರೆ, ಅನೇಕ ಕ್ರೀಡಾಪಟುಗಳು ಮಂಡ್ಯದ ಕೀರ್ತಿ ಹೆಚ್ಚಿಸಿದ್ದಾರೆ, ಮುಖ್ಯವಾಗಿ ವೀಲ್ಚೇರ್ ಟೆನಿಸ್ ಆಟಗಾರ್ತಿ, ಭಾರತ ನಂಬರ್ ಒನ್ ವೀಲ್ ಚೇರ್ ಟೆನಿಸ್ ಆಟಗಾರ್ತಿ ಶಿಲ್ಪಾ ಭಾರತದ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಬೆಳಗುತ್ತಿದ್ದಾರೆ, ಇಂತಹ ಅಸಂಖ್ಯಾತ ಪ್ರತಿಭೆಗಳು ಇಲ್ಲಿಂದ ಬರಲಿ ಎಂಬುದಾಗಿ ಹಾರೈಸುತ್ತೇನೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ ಹನ್ನೊಂದು ವರ್ಷಗಳಲ್ಲಿ ಕ್ರೀಡಾ ಪೂರಕ ವ್ಯವಸ್ಥೆ ಹೆಚ್ಚಿಸಲು ಗುರುತರ ಕೆಲಸ ಮಾಡಿದೆ, ಕಳೆದ ಬಜೆಟ್ನಲ್ಲಿ ಕ್ರೀಡಾ ಮೂಲಸೌಕರ್ಯ ವೃದ್ಧಿಗೆ 4,000 ಕೋಟಿ ಹಂಚಿಕೆ ಮಾಡಿದೆ.
ಹತ್ತು ವರ್ಷಗಳ ಹಿಂದೆ ಈ ಉದ್ದೇಶಕ್ಕೆ ಕೇವಲ 1,200 ಕೋಟಿ ರೂ. ಮಾತ್ರ ನೀಡಲಾಗಿತ್ತು, ಈಗ ಮೂರೂವರೆ ಪಟ್ಟು ಹೆಚ್ಚಾಗಿದೆ ಎಂಬುದನ್ನು ಎಲ್ಲರೂ ಗಮನಿಸಬೇಕು ಎಂದರು.
ಎಲೆಕ್ಟ್ರಿಕ್ ವಾಹನ ವಿತರಣೆ
ವೇದಿಕೆ ಸಭೆಯ ನಂತರ 388 ಮಂದಿ ವಿಶೇಷಚೇತನರಿಗೆ ಟಿಸಿಎಸ್ ಕಂಪನಿ ಮತ್ತು ಭಾರತೀಯ ಉಕ್ಕು ಪ್ರಾಧಿಕಾರ ಸಿಎಸ್ಆರ್ ನಿಧಿಯಲ್ಲಿ ನೀಡಿರುವ ಎಲೆಕ್ಟ್ರಿಕ್ ವಾಹನಗಳನ್ನು ವಿತರಣೆ ಮಾಡಲಾಯಿತು.
ಇನ್ಫೋಸಿಸ್ ಕಂಪನಿ ನೀಡಿರುವ 500 ಕಂಪ್ಯೂಟರ್, 100 ಲ್ಯಾಪ್ಟಾಪ್ಗಳನ್ನು ಸರ್ಕಾರಿ ಶಾಲೆಗಳಿಗೆ ಹಸ್ತಾಂತರ ಮಾಡಲಾಯಿತು, ಹಿಂದುಜಾ ಕಂಪನಿ ಸಿಎಸ್ಆರ್ ನಿಧಿಯಲ್ಲಿ ನೀಡಿರುವ ಅತ್ಯಾಧುನಿಕ ಆಂಬ್ಯುಲೆನ್ಸ್ ಅನ್ನು ಮಂಡ್ಯದ ಮಿಮ್ಸ್ ಸಂಸ್ಥೆಗೆ ನೀಡಲಾಯಿತು.
ವಿಶೇಷಚೇತನರಿಗೆ ಎಲೆಕ್ಟ್ರಿಕ್ ವಾಹನಗಳ ಹಸ್ತಾಂತರ ವೇಳೆ ಸಚಿವ ಕುಮಾರಸ್ವಾಮಿ ಭಾವುಕರಾದರು, ವಾಹನಗಳನ್ನು ಸ್ವೀಕರಿಸುತ್ತಿದ್ದ ವಿಶೇಷಚೇತನರು ತಮಗೇ ಕೃತಜ್ಞತೆ ಹೇಳುವಾಗ ಕಣ್ಣಲ್ಲಿ ನೀರು ತಂಬಿಕೊಂಡ ಸಚಿವರು, ಇಷ್ಟು ದೂರ ಬಂದು ವಾಹನಗಳನ್ನು ಸ್ವೀಕರಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ಎಂದರು.
ಕ್ರೀಡಾಂಗಣಕ್ಕೆ ಭೂಮಿಪೂಜೆ
ಇದಕ್ಕೂ ಮುನ್ನ ಒಳಾಂಗಣ ಕ್ರೀಡಾಂಗಣಕ್ಕೆ ಭೂಮಿಪೂಜೆ ನೆರವೇರಿಸಿದ ನಂತರ ಕೇಂದ್ರದ ಇಬ್ಬರೂ ಸಚಿವರನ್ನು ವೇದಿಕೆ ಕಾರ್ಯಕ್ರಮಕ್ಕೆ ತೆರೆದ ವಾಹನದಲ್ಲಿ ಕರೆ ತರಲಾಯಿತು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

