Tuesday, May 20, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Tuesday, May 20, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyಅಂಕಣರಾಜಕೀಯರಾಜ್ಯರಾಷ್ಟ್ರವಿಶ್ಲೇಷಣೆ

ಅರಸರ ಫ್ಲಾಟ್ ಫಾರಂ ಮೇಲೆ ಸಿದ್ದರಾಮಯ್ಯ

by admin January 29, 2024
written by admin January 29, 2024 2 comments 5 minutes read
Share 3FacebookTwitterPinterestEmail
279

ನಲವತ್ತೈದು ವರ್ಷಗಳ ಹಿಂದೆ ದೇವರಾಜ ಅರಸರು ಎದುರಿಸಿದ ಸೈನ್ಯಕ್ಕೆ ಈಗ ಸಿಎಂ ಸಿದ್ದರಾಮಯ್ಯ ಮುಖಾಮುಖಿಯಾಗುವ ಲಕ್ಷಣಗಳು ಕಾಣುತ್ತಿವೆ. ಹಿರಿಯ ನಾಯಕ ಜಗದೀಶ್ ಶೆಟ್ಟರ್, ಕೈ ಪಾಳಯ ತೊರೆದು ಬಿಜೆಪಿ ಸೇರಿದ ಬೆಳವಣಿಗೆ ಇದಕ್ಕೆ ಸಾಕ್ಷಿ.

ಅಂದ ಹಾಗೆ 1972 ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾದ ದೇವರಾಜ ಅರಸರು 1978 ರ ವಿಧಾನಸಭೆ ಚುನಾವಣೆ ಎದುರಾಗುವ ಕಾಲಕ್ಕೆ ಒಕ್ಕಲಿಗ-ಲಿಂಗಾಯತ ಸೈನ್ಯಕ್ಕೆ ಪರ್ಯಾಯವಾಗಿ ಶೋಷಿತ ಸಮುದಾಯಗಳ ಸೈನ್ಯ ಕಟ್ಟಿದ್ದರು.

1969 ರಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾದ ನಂತರ ರಾಜ್ಯದ ನೆಲೆಯಲ್ಲಿ ಪ್ರಬಲ ಲಿಂಗಾಯತ ಸಮುದಾಯ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್‌ನಿಂದ ದೂರವಾಗಿತ್ತು. ಇಂತಹ ಸಂದರ್ಭದಲ್ಲಿ ಇಂದಿರಾ ಕಾಂಗ್ರೆಸ್‌ನ ನೇತೃತ್ವದ ವಹಿಸಿದ ಅರಸರು 1972 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ದಡ ಸೇರಿಸಿದ್ದಲ್ಲದೆ ಮುಖ್ಯಮಂತ್ರಿ ಹುದ್ದೆಯ ಮೇಲೆ ವಿರಾಜಮಾನರಾಗಿದ್ದರು.

ಹೀಗೆ ಅಧಿಕಾರಕ್ಕೆ ಬಂದವರು ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕಾರ್ಯಕ್ರಮದ ಮೂಲಕ ಪ್ರಬಲ ವರ್ಗಗಳ ಕೈಲಿದ್ದ ಗಣನೀಯ ಪ್ರಮಾಣದ ಭೂಮಿ ಶೋಷಿತ ವರ್ಗಗಳ ಕೈಗೆ ದಕ್ಕುವಂತೆ ಮಾಡಿದ್ದರು. ಅವರ ಈ ಹೆಜ್ಜೆ ಸಹಜವಾಗಿಯೇ ಪ್ರಬಲ ಒಕ್ಕಲಿಗ, ಲಿಂಗಾಯತ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ ಇಲ್ಲಿ ಜನತಾ ಪಕ್ಷ ದೊಡ್ಡ ಮಟ್ಟದಲ್ಲಿ ಮೇಲೆದ್ದು ನಿಲ್ಲಲು ಮೂಲವಾಯಿತು.

ಹೀಗಾಗಿ 1978 ರ ವಿಧಾನಸಭಾ ಚುನಾವಣೆ ಎದುರಾದಾಗ ದೇವರಾಜ ಅರಸರು ಶೋಷಿತ ಸಮುದಾಯಗಳ ಸೈನ್ಯದ ಮುಂದೆ ನಿಂತಿದ್ದರೆ, ಜನತಾ ಪಕ್ಷದ ಬೆನ್ನಿಗೆ ಒಕ್ಕಲಿಗ, ಲಿಂಗಾಯತ ಸೈನ್ಯ ನಿಂತಿತ್ತು.

ಆದರೆ ಚುನಾವಣೆ ನಡೆದು ಫಲಿತಾಂಶ ಬಂದಾಗ, ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಪಕ್ಷ 149 ಸ್ಥಾನಗಳನ್ನು ಪಡೆದರೆ, ಜನತಾ ಪಕ್ಷ 59 ಕ್ಷೇತ್ರಗಳಲ್ಲಿ ಗೆಲುವು ಗಳಿಸಿ ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಿತ್ತು. ಮುಂದೆ ಒಕ್ಕಲಿಗ-ಲಿಂಗಾಯತ ಸಮುದಾಯಗಳನ್ನು ಮೂಲ ಶಕ್ತಿಯನ್ನಾಗಿಸಿಕೊಂಡ ಜನತಾ ಪರಿವಾರ 1983, 1994 ರಲ್ಲಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಿತು. ಆದರೆ 1999 ರಲ್ಲಿ ಜನತಾದಳದ ವಿಭಜನೆಯೊಂದಿಗೆ ಒಕ್ಕಲಿಗ, ಲಿಂಗಾಯತ ಶಕ್ತಿಗಳು ಪರಸ್ಪರ ದೂರ ನಿಲ್ಲುವ ಸ್ಥಿತಿ ನಿರ್ಮಾಣವಾಯಿತು.

ಈ ಪೈಕಿ ಒಕ್ಕಲಿಗ ಸಮುದಾಯ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾ ದಳದ ಜತೆ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರೆ, ಲಿಂಗಾಯತ ಸಮುದಾಯ ಯಡಿಯೂರಪ್ಪ ನೇತೃತ್ವದ ಬಿಜೆಪಿಯ ಜತೆ ಗುರುತಿಸಿಕೊಂಡಿತು.

ಆದರೆ ಯಾವಾಗ 2023 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೋ ಇದಾದ ನಂತರ ಪದೇ ಪದೇ ಅವರ ವಿರುದ್ಧ ಮುಗಿಬೀಳತೊಡಗಿದ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಒಂದು ವಿಷಯ ಸ್ಪಷ್ಟವಾಗಿ ಮನವರಿಕೆಯಾಯಿತು.

ಅದೆಂದರೆ, ನೂರಾ ಮೂವತ್ತಾರು ಮಂದಿ ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಏಕಾಂಗಿಯಾಗಿ ಎದುರಿಸುವುದು ಕಷ್ಟ. ಹೀಗಾಗಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಯ ಜತೆ ಕೈಜೋಡಿಸುವುದು ಅನಿವಾರ್ಯ ಎಂಬುದು.

ಹೀಗೆ ಬಿಜೆಪಿಯ ಜತೆ ಕೈ ಜೋಡಿಸುವ ಮನಃಸ್ಥಿತಿಗೆ ಅವರು ತಲುಪುವ ವೇಳೆಗೆ ಕೇಂದ್ರದ ಬಿಜೆಪಿ ನಾಯಕರೂ, ಜೆಡಿಎಸ್ ಜತೆ ಕೈ ಜೋಡಿಸದೆ ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಲುಗಾಡಿಸುವುದು ಕಷ್ಟ ಎಂಬ ಲೆಕ್ಕಾಚಾರಕ್ಕೆ ಬಂದಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗೆಸ್ ಪಕ್ಷ ಹೆಚ್ಚು ಮತಗಳನ್ನು ಪಡೆದಿದ್ದು ನಿಜವಾದರೂ, ಶೇಕಡಾವಾರು ಮತಗಳನ್ನು ಗಣನೆಗೆ ತೆಗೆದುಕೊಂಡರೆ ಬಿಜೆಪಿ ಮತ್ತು ಜೆಡಿಎಸ್ ಪಡೆದ ಒಟ್ಟಾರೆ ಮತಗಳ ಸಂಖ್ಯೆ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಿತ್ತು.

ಇದೇ ರೀತಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಬೇಕೆಂದರೆ ಕರ್ನಾಟಕದಿಂದಲೂ ಗಣನೀಯ ಪ್ರಮಾಣದ ಸೀಟುಗಳನ್ನು ಗೆಲ್ಲುವ ಅನಿವಾರ್ಯತೆ ಬಿಜೆಪಿಗೆ ಇದೆಯಲ್ಲ. ಹೀಗಾಗಿ ಜೆಡಿಎಸ್ ಜತೆಗಿನ ಮೈತ್ರಿ ಮಾತುಕತೆಯನ್ನು ನರೇಂದ್ರ ಮೋದಿ-ಅಮಿತ್ ಷಾ ಜೋಡಿ ಆಸಕ್ತಿಯಿಂದಲೇ ಪೂರ್ಣಗೊಳಿಸಿತು.

ಇಷ್ಟಾದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಬಲಿಷ್ಟವಾಗಿ ತಲೆ ಎತ್ತಲು ಹವಣಿಸುತ್ತಿರುವ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ, ತನ್ನ ಮೂಲ ಶಕ್ತಿಯನ್ನು ಒಗ್ಗೂಡಿಸಿಕೊಳ್ಳಲು ಎಲ್ಲ ಪ್ರಯತ್ನ ಆರಂಭಿಸಿದೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ವಲಸೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಬಂದಿರುವುದು ಈ ಪ್ರಯತ್ನಕ್ಕೆ ಸಾಕ್ಷಿ.

ಶೆಟ್ಟರ್ ಮರಳಿದ್ದು ಏಕೆ?

ಅಂದ ಹಾಗೆ ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಹೋದ ಜಗದೀಶ್ ಶೆಟ್ಟರ್, ಯಾವ ಕಾರಣಕ್ಕೂ ಬಿಜೆಪಿಗೆ ವಾಪಸ್ ಹೋಗುವುದಿಲ್ಲ ಎಂದಿದ್ದರು. ಆಂತವರು ಈಗ ಆಫರ್ ಬಂದ ಕೂಡಲೇ ಬಿಜೆಪಿಗೆ ಸೇರಿದ್ದಕ್ಕೆ ಅಲ್ಲಿ ಸಂತೋಷ್ ಬಣ ದುರ್ಬಲವಾಗಿರುವುದೇ ಕಾರಣ.

ಕಳೆದ ಚುನಾವಣೆಯ ಸಂದರ್ಭದಲ್ಲಿ ತಮಗೆ ಟಿಕೆಟ್ ತಪ್ಪಲು ಸಂತೋಷ್ ಕಾರಣ ಎಂಬ ಸಿಟ್ಟಿನಲ್ಲಿದ್ದ ಜಗದೀಶ್ ಶೆಟ್ಟರ್, ಇದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸಿದ್ದರು. ಆದರೆ ಅವರು ತಯಾರಿದ್ದರೂ ಕಾಂಗ್ರೆಸ್ ಪಕ್ಷದ ನಾಯಕರು ಅವರನ್ನು ಸಮರ್ಥವಾಗಿ ಬಳಸಿಕೊಳ್ಳಲು ತಯಾರಿರಲಿಲ್ಲ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ಯಾರು ಸ್ಪರ್ಧಿಸಬೇಕು, ಮುಂಬಯಿ-ಕರ್ನಾಟಕ ಭಾಗದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟುಗಳನ್ನು ಗೆಲ್ಲಿಸಲು ಏನು ಮಾಡಬೇಕು ಎಂಬ ಬಗ್ಗೆ ಸಲಹೆ ನೀಡಲು ಜಗದೀಶ್ ಶೆಟ್ಟರ್ ಕಾತರರಾಗಿದ್ದರೂ ಅವರ ಸಲಹೆ ಪಡೆಯಲು ರಾಜ್ಯದ ಕಾಂಗ್ರೆಸ್ ನಾಯಕರು ಉತ್ಸುಕತೆ ತೋರಲಿಲ್ಲ.

ವಸ್ತುಸ್ಥಿತಿ ಎಂದರೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೋದ ಶೆಟ್ಟರ್ ಅವರಿಗೆ, ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮನ್ನು ಮಂತ್ರಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಅವರನ್ನು ಮಂತ್ರಿ ಮಾಡುವುದಿರಲಿ, ಪಕ್ಷದ ಶಕ್ತಿ ಹೆಚ್ಚಿಸಲು ಏನು ಮಾಡಬೇಕು ಅಂತ ಸಲಹೆ ನೀಡಲು ತಯಾರಿದ್ದರೂ ಅದನ್ನು ಕೇಳುವ ವ್ಯವಧಾನ ರಾಜ್ಯದ ನಾಯಕರಿಗಿರಲಿಲ್ಲ.

ಹೀಗೆ ಕಾಂಗ್ರೆಸ್ ಪಕ್ಷ ಸೇರಿ ವಿಧಾನಪರಿಷತ್ ಸದಸ್ಯರಾದರೂ ಏಕಾಂಗಿ ಭಾವನೆ ಜಗದೀಶ್ ಶೆಟ್ಟರ್ ಅವರನ್ನು ಕಾಡುತ್ತಲೇ ಇತ್ತು. ಯಾವಾಗ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಬಿಜೆಪಿಯ ಅಧ್ಯಕ್ಷರಾದರೋ ಮತ್ತು ಪಕ್ಷದಲ್ಲಿ ಸಂತೋಷ್ ಅವರ ಪ್ರಾಮಿನೆನ್ಸು ಕಡಿಮೆಯಾಯಿತೋ, ಆಗ ಶೆಟ್ಟರ್ ಅವರಿಗೆ ಬಿಜೆಪಿಯಲ್ಲಿ ಭರವಸೆಯ ವಾತಾವರಣ ಕಾಣಿಸತೊಡಗಿತು.

ಹೀಗೆ ಶೆಟ್ಟರ್ ಅವರಿಗೆ ಬಿಜೆಪಿಯಲ್ಲಿ ಭರವಸೆಯ ವಾತಾವರಣ ಕಾಣಿಸುತ್ತಿದ್ದ ಕಾಲಕ್ಕೆ ಸರಿಯಾಗಿ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಬೇಕು ಎಂದರೆ ಶೆಟ್ಟರ್ ಅವರನ್ನು ವಾಪಸ್ ಕರೆ ತರಬೇಕು ಎಂಬ ಸಂದೇಶ ಅಮಿತ್ ಷಾ ಅವರನ್ನು ತಲುಪತೊಡಗಿತು.

ಜನವರಿ ಹದಿನೇಳರಂದು ದಿಲ್ಲಿಗೆ ಹೋಗಿ ಅಮಿತ್ ಷಾ ಅವರನ್ನು ಭೇಟಿ ಮಾಡಿದ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೂ, ಶೆಟ್ಟರ್ ಅವರನ್ನು ಬಿಜೆಪಿಗೆ ಕರೆ ತಂದರೆ ಪ್ಲಸ್ ಆಗುತ್ತದೆ ಎಂದು ಹೇಳಿ ಬಂದಿದ್ದರು.

ಯಾವಾಗ ಕರ್ನಾಟಕದ ಬಿಜೆಪಿ ನಾಯಕರು ಮಾತ್ರವಲ್ಲದೆ, ಜೆಡಿಎಸ್ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೂ ಇದನ್ನು ಹೇಳಿದರೋ, ಆಗ ತರಾತುರಿ ತೋರಿಸಿದ ಅಮಿತ್ ಷಾ ಅವರು, ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯ ಮುಗಿದ ತಕ್ಷಣ ಶೆಟ್ಟರ್ ಅವರನ್ನು ದಿಲ್ಲಿಗೆ ಕರೆದುಕೊಂಡು ಬರುವಂತೆ ರಾಜ್ಯದ ನಾಯಕರಿಗೆ ಸೂಚಿಸಿದರು.

ಅವರ ಸೂಚನೆಯಂತೆ ಕಳೆದ ವಾರ ದಿಲ್ಲಿಗೆ ಹೋದ ಶೆಟ್ಟರ್ ಅವರಿಗೆ, ನೀವು ಮುಖ್ಯಮಂತ್ರಿಯಾಗಿದ್ದವರು. ನಿಮ್ಮಂತಹ ನಾಯಕರು ರಾಜ್ಯ ರಾಜಕಾರಣದಲ್ಲಿರುವುದಕ್ಕಿಂತ ದಿಲ್ಲಿಗೆ ಬಂದು ಮೋದಿಜೀ ಸಂಪುಟದಲ್ಲಿರಬೇಕು ಅಂತ ಅಮಿತ್ ಷಾ ಹೇಳಿದರಂತೆ. ಇದಾದ ನಂತರ ಶೆಟ್ಟರ್ ವಿದ್ಯುಕ್ತವಾಗಿ ಬಿಜೆಪಿಗೆ ಮರಳಿದ್ದಾರೆ. ಆ ಮೂಲಕ ಕಮಲ ಪಾಳಯದಲ್ಲಿ ಲಿಂಗಾಯತ ಶಕ್ತಿ ಹಿಗ್ಗುವ ಎಲ್ಲ ಲಕ್ಷಣಗಳು ಕಾಣಿಸಿಕೊಂಡಿವೆ.

ಖರ್ಗೆ ಬೇಸರ ಮಾಡಿಕೊಂಡಿದ್ದಾರೆ

ಇನ್ನು ಜಗದೀಶ್ ಶೆಟ್ಟರ್ ಅವರ ಎಪಿಸೋಡಿನಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಿಲ್ಲ ಅಂತ ರಾಜ್ಯದ ಕಾಂಗ್ರೆಸ್ ನಾಯಕರೇನೋ ಹೇಳುತ್ತಿದ್ದಾರೆ. ಆದರೆ ಶೆಟ್ಟರ್ ಅವರಿಂದಾಗಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಿದ್ದು ಸುಳ್ಳಲ್ಲ. ಹಾಗೊಂದು ವೇಳೆ ಶೆಟ್ಟರ್ ಅವರಿಂದ ಲಾಭ ಆಗಿರಲಿಲ್ಲ ಎಂದಿದ್ದರೆ ಅವರನ್ನು ವಿಧಾನಪರಿಷತ್ತಿಗೆ ಕಳಿಸುವ ಕೆಲಸ ಕಾಂಗ್ರೆಸ್‌ನಿಂದ ಆಗುತ್ತಲೇ ಇರಲಿಲ್ಲ.

ವಸ್ತುಸ್ಥಿತಿಯೆಂದರೆ, ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದ ಬೆಳವಣಿಗೆಯಿಂದ ತುಂಬ ಬೇಸರಗೊಂಡಿರುವವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ಕೊಟ್ಟ ಮಾತಿನಂತೆ ಶೆಟ್ಟರ್ ಅವರನ್ನು ಮಂತ್ರಿ ಮಾಡಲಾಗಲಿಲ್ಲವಲ್ಲ, ಹೀಗಾಗಿ ಶೆಟ್ಟರ್ ಮುಂದಿನ ದಿನಗಳಲ್ಲಿ ಕೈ ಪಾಳಯ ತೊರೆಯಬಹುದು ಎಂಬ ಅನುಮಾನ ಖರ್ಗೆ ಅವರಲ್ಲಿತ್ತು.

ಹೀಗಾಗಿ ಮಂತ್ರಿ ಮಾಡಲಾಗದಿದ್ದರೂ ಮುಂಬರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರನ್ನೇ ಕರ್ನಾಟಕದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಬೇಕು ಅಂತ ಖರ್ಗೆ ಬಯಸಿದ್ದರು. ಅಷ್ಟೇ ಅಲ್ಲ, ಶೆಟ್ಟರ್ ಅವರಿಗೂ ಈ ಬಗ್ಗೆ ವಿವರಿಸಿದ್ದರು. ಹೀಗೆ ಶೆಟ್ಟರ್ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿದರೆ ಅವರು ಕಾಂಗ್ರೆಸ್ ತೊರೆಯಲು ಮನಸ್ಸು ಮಾಡಲಾರರು ಎಂಬುದು ಮಲ್ಲಿಕಾರ್ಜುನ ಖರ್ಗೆಯವರ ಲೆಕ್ಕಾಚಾರವಾಗಿತ್ತು.

ಆದರೆ ತಮ್ಮ ಲೆಕ್ಕಾಚಾರ ಈಡೇರುವ ಮುನ್ನವೇ ಶೆಟ್ಟರ್ ಕಾಂಗ್ರೆಸ್ ತೊರೆದಿರುವುದು ಖರ್ಗೆ ಅವರಿಗೆ ಬೇಸರ ತಂದಿದೆ. ಹಾಗಂತಲೇ ರಾಜ್ಯದ ನಾಯಕರ ಬಳಿ ಮಾತನಾಡಿದ ಅವರು, ಶೆಟ್ಟರ್ ಅವರನ್ನು ಹ್ಯಾಂಡಲ್ ಮಾಡುವ ವಿಷಯದಲ್ಲಿ ತಪ್ಪಾಗಿದೆ ಅಂದಿದ್ದಾರೆ ಎನ್ನುವುದು ಲೇಟೆಸ್ಟು ಸುದ್ದಿ.

ಕುಮಾರಸ್ವಾಮಿ ಪವರು ಹೆಚ್ಚಾಗಿದೆ

ಈ ಮಧ್ಯೆ ಮಾಜಿ ಮುಖ್ಯಮಂತ್ರಿಗಳು ಹೆಚ್.ಡಿ.ಕುಮಾರಸ್ವಾಮಿ ಅವರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ-ಅಮಿತ್ ಷಾ ಫುಲ್ಲು ಖುಷಿಯಾಗಿದ್ದಾರೆ. ಕಾರಣ ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿ ಮರಳಿ ಹಿಗ್ಗುತ್ತಿರುವುದಕ್ಕೆ ಕುಮಾರಸ್ವಾಮಿ ನೀಡುತ್ತಿರುವ ಕೊಡುಗೆ.

ಮೊದಲನೆಯದಾಗಿ, ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿಷಯದಲ್ಲಿ ಕುದಿಯುತ್ತಿದ್ದ ಮಾಜಿ ಸಚಿವ ವಿ.ಸೋಮಣ್ಣ ಎಪಿಸೋಡು ತಣ್ಣಗಾಗುವುದರ ಹಿಂದೆ ಕುಮಾರಸ್ವಾಮಿ ಅವರ ಪಾತ್ರವಿದೆ. ಸೋಮಣ್ಣ ಅವರು ದಿಲ್ಲಿಗೆ ಹೋಗಿ ಅಮಿತ್ ಷಾ ಅವರನ್ನು ಭೇಟಿ ಮಾಡುವ ಮುನ್ನ ದೇವೇಗೌಡರ ಮನೆಗೆ ಹೋಗಿದ್ದರಲ್ಲ?

ಆ ಸಂದರ್ಭದಲ್ಲಿ ಹಳೆಯದನ್ನೆಲ್ಲ ಮರೆತು ಬಿಡಿ, ವಾಸ್ತವವಾಗಿ ತುಮಕೂರು ಲೋಕಸಭಾ ಕ್ಷೇತ್ರವನ್ನು ನಮಗೆ ಬಿಟ್ಟು ಕೊಡಿ ಅಂತ ನಾವು ಬಿಜೆಪಿಯ ಕೇಂದ್ರ ನಾಯಕರಿಗೆ ಹೇಳಿದ್ದೇವೆ. ಆದರೆ ನೀವು ತುಮಕೂರಿನಿಂದ ಸ್ಪರ್ಧಿಸಲು ರೆಡಿ ಇದ್ದರೆ ಆ ಕ್ಷೇತ್ರವನ್ನು ಬಿಟ್ಟುಕೊಡಲು ನಾವು ರೆಡಿ ಇದ್ದೇವೆ. ಒಂದು ವೇಳೆ ನೀವು ಜೆಡಿಎಸ್ ಪಕ್ಷಕ್ಕೆ ಬಂದರೆ ನಮ್ಮ ಪಕ್ಷದ ವತಿಯಿಂದಲೇ ಮೈತ್ರಿಕೂಟದ ಕ್ಯಾಂಡಿಡೇಟ್ ಆಗಿ ಅಂತ ಕುಮಾರಸ್ವಾಮಿ ಮತ್ತು ದೇವೇಗೌಡರು ಹೇಳಿದ್ದಾರೆ.

ಹೀಗೆ ಅವರಾಡಿದ ಮಾತು ಸೋಮಣ್ಣ ಅವರನ್ನು ಸಮಾಧಾನಿಸಿದೆಯಷ್ಟೇ ಅಲ್ಲ, ದಿಲ್ಲಿಗೆ ಹೋಗಿ ಅಮಿತ್ ಷಾ ಅವರನ್ನು ಭೇಟಿ ಮಾಡಿ ಬಂದ ನಂತರ ಕೂಲ್ ಆಗುವಂತೆ ಮಾಡಿದೆ.

ಇದೇ ರೀತಿ ಕಳೆದ ಚುನಾವಣೆಯಲ್ಲಿ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಿಜೆಪಿ ಕ್ಯಾಂಡಿಡೇಟುಗಳ ಸೋಲಿಗೆ ಪ್ರಮುಖ ಕಾರಣರಾಗಿದ್ದ ಜನಾರ್ದನರೆಡ್ಡಿ ಇದ್ದಾರಲ್ಲ, ಅವರ ಜತೆ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಚರ್ಚಿಸಿದ ಕುಮಾರಸ್ವಾಮಿ, ನಿಮ್ಮ ಜತೆ ನಾವಿದ್ದೇವೆ. ನಿಮಗಾಗುತ್ತಿರುವ ತೊಂದರೆಗಳ ಬಗ್ಗೆ ಅಮಿತ್ ಷಾ ಅವರಿಗೂ ಹೇಳುತ್ತೇವೆ. ಹೀಗಾಗಿ ನೀವು ಬಿಜೆಪಿಗೆ ವಾಪಸ್ಸಾಗಿ ಬಿಡಿ ಎಂದು ಹೇಳಿದ್ದರು.

ಅವರ ಮಾತು ಕೇಳಿದ ಜನಾರ್ದನರೆಡ್ಡಿ ಎಷ್ಟು ಖುಷಿಯಾಗಿದ್ದರು ಎಂದರೆ, ಸಾರ್, ನನ್ನಿಂದ ಉಪಕಾರ ಪಡೆದವರೆಲ್ಲ ನನಗೆ ಕೈ ಕೊಟ್ಟರು. ಆದರೆ ನನ್ನಿಂದ ನಿಮಗೆ ಆದ ಉಪಕಾರ ಅಷ್ಟರಲ್ಲೇ ಇದೆ. ಆದರೆ ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ ನೀವು ಪ್ರೀತಿ ತೋರಿಸುತ್ತಿದ್ದೀರಿ. ಹೀಗಾಗಿ ನಾನು ಬಿಜೆಪಿಗೆ ವಾಪಸ್ಸು ಹೋಗಲು ರೆಡಿ ಇದ್ದೇನೆ ಎಂದು ಹೇಳಿದ್ದಾರೆ.

ಅಲ್ಲಿಗೆ ಬಿಜೆಪಿಯ ಸೋಲಿಗೆ ಕಾಣಿಕೆ ನೀಡಿದ್ದ ಜನಾರ್ದನರೆಡ್ಡಿ ಎಪಿಸೋಡು ಒಂದು ಹಂತಕ್ಕೆ ಬಂದಿದೆ. ಮೊನ್ನೆ ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳುವುದರ ಹಿಂದೆಯೂ ಕುಮಾರಸ್ವಾಮಿ ಅವರ ಪ್ರಯತ್ನ ಇದೆ. ಹೀಗೆ ರಾಜ್ಯ ಬಿಜೆಪಿಗೆ ತೊಡಕಾಗಿದ್ದ ಒಂದೊಂದೇ ಸಮಸ್ಯೆಗಳನ್ನು ಪರಿಹರಿಸಲು ಅವರು ನೀಡುತ್ತಿರುವ ಕೊಡುಗೆ ಸಹಜವಾಗಿಯೇ ಮೋದಿ-ಷಾ ಜೋಡಿಗೆ ಖುಷಿ ತಂದಿದೆ.

ಆರ್.ಟಿ.ವಿಠ್ಠಲಮೂರ್ತಿ

Share this:

  • WhatsApp
  • Post
  • Tweet
  • Print
  • Email
1972 to 2023- politics in karnatakabs yadiyurappacm_siddaramaiahdevaraj ursdevegouwdajagadish shettarkumarswamylingayat and okkaliga leadres politics
Share 3 FacebookTwitterPinterestEmail
admin

previous post
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ
next post
ನಾನೂ ಒಬ್ಬ ಹಿಂದೂ, ಎಲ್ಲಾ ಧರ್ಮಗಳ ಜನರನ್ನೂ ಪ್ರೀತಿಸುತ್ತೇನೆ:ಜಾತ್ಯತೀತತೆ, ಸಹಬಾಳ್ವೆ, ಸಹಿಷ್ಣುತೆಯಲ್ಲಿ ನಂಬಿಕೆ ಇದೆ-ಸಿದ್ದರಾಮಯ್ಯ

You may also like

ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ತಂತ್ರಗಾರಿಕೆ ಆರಂಭ

May 19, 2025

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025

93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ ಪ್ರಧಾನಿ ಮೋದಿ,...

May 18, 2025

ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ...

May 16, 2025

ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

May 15, 2025

ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆ ಪರಿಷ್ಕರಣೆ

May 15, 2025

ಸಕಾರದಿಂದ 108 ಆಂಬುಲೆನ್ಸ್ ಸೇವೆ

May 14, 2025

ಸಂಭ್ರಮಾಚರಣೆ: ಸಿದ್ದರಾಮಯ್ಯ – ಡಿಕೆಶಿ ಗೊಂದಲ

May 12, 2025

ಪ್ರಧಾನಿ ಮೋದಿ ನಿರ್ಧಾರ ಎಲ್ಲರೂ ಬೆಂಬಲಿಸಬೇಕು

May 12, 2025

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ...

May 8, 2025

2 comments

ನಾನೂ ಒಬ್ಬ ಹಿಂದೂ, ಎಲ್ಲಾ ಧರ್ಮಗಳ ಜನರನ್ನೂ ಪ್ರೀತಿಸುತ್ತೇನೆ:ಜಾತ್ಯತೀತತೆ, ಸಹಬಾಳ್ವೆ, ಸಹಿಷ್ಣುತೆಯಲ್ಲಿ ನಂಬ January 29, 2024 - 8:48 am

[…] Special Story […]

Reply
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಎನ್‌ಡಿಎ ಅಭ್ಯರ್ಥಿ ಹಿರಿಯ ವಕೀಲ ಎ.ಪಿ. ರಂಗನಾಥ್ – KMS January 29, 2024 - 12:03 pm

[…] Special Story […]

Reply

Leave a Reply to ನಾನೂ ಒಬ್ಬ ಹಿಂದೂ, ಎಲ್ಲಾ ಧರ್ಮಗಳ ಜನರನ್ನೂ ಪ್ರೀತಿಸುತ್ತೇನೆ:ಜಾತ್ಯತೀತತೆ, ಸಹಬಾಳ್ವೆ, ಸಹಿಷ್ಣುತೆಯಲ್ಲಿ ನಂಬ Cancel Reply

Save my name, email, and website in this browser for the next time I comment.

Social Networks

Facebook Twitter Instagram Linkedin Youtube Email Rss

KMS Analysis

  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ದೇವೇಗೌಡರು

    May 6, 2025
  • ಜಾತಿಗಣತಿ ವರದಿ ದತ್ತಾಂಶ ಮರುಪರಿಶೀಲನೆಗೆ ನಿರ್ಧಾರ

    April 18, 2025

Categories

  • Special Story (180)
  • ಅಂಕಣ (102)
  • ಉದ್ಯೋಗ (237)
  • ದಿನ ಭವಿಷ್ಯ (110)
  • ರಾಜಕೀಯ (1,583)
  • ರಾಜ್ಯ (1,872)
  • ರಾಷ್ಟ್ರ (1,844)
  • ವಿಶ್ಲೇಷಣೆ (183)
  • ಶಿಕ್ಷಣ (318)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ತಂತ್ರಗಾರಿಕೆ ಆರಂಭ

    May 19, 2025
  • ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

    May 19, 2025
  • 93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ ಪ್ರಧಾನಿ ಮೋದಿ, ಅಮಿತ್ ಶಾ

    May 18, 2025

KMS Special

  • ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ತಂತ್ರಗಾರಿಕೆ ಆರಂಭ

    May 19, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • Facebook
  • Twitter
  • Linkedin
  • Youtube
  • Email
  • Telegram
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ತಂತ್ರಗಾರಿಕೆ ಆರಂಭ

May 19, 2025
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ